ಮಂಗಳೂರಿನ ಕುಖ್ಯಾತ ನಟೋರಿಯಸ್ ರೌಡಿ ಆಕಾಶಭವನ ಶರಣ್ ಅಂದರ್
ಮಂಗಳೂರು, ಜನವರಿ 14: ಮಂಗಳೂರಿನ ಕುಖ್ಯಾತ ನಟೋರಿಯಸ್ ರೌಡಿ ಆಕಾಶಭವನ ಶರಣ್ ಅಂದರ್ ಆಗಿದ್ದಾನೆ. ನಗರದ ನೋಟೆಡ್ ರೌಡಿಶೀಟರ್ ಒಬ್ಬನ ಕೊಲೆಗೆ ಸಂಚು ರೂಪಿಸಿದ್ದ ಐವರು ಆರೋಪಿಗಳನ್ನು ಮಂಗಳೂರು ಪೊಲೀಸರು ಹೆಡೆಮುರಿಕಟ್ಟಿದ್ದಾರೆ. ಭೂಗತ ಲೋಕದಲ್ಲಿ ಹವಾ ಸೃಷ್ಟಿಸಿ ವಿದೇಶದಲ್ಲಿ ಕುಳಿತು ಆಪರೇಶನ್ ಮಾಡಬೇಕೆಂದು ಪ್ಲಾನ್ ಮಾಡಿದವನು ಈಗ ಜೈಲು ಕಂಬಿಗಳ ಹಿಂದಿದ್ದಾನೆ.
ಮಂಗಳೂರು ನಗರದ ಹೊರವಲಯದಲ್ಲಿರುವ ಚೇಳಾರು ಎಂಬಲ್ಲಿ ನಡೆದಿರುವ ವ್ಯಕ್ತಿಯೋರ್ವರ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹಚರರ ಮೂಲಕ ವಿರೋಧಿ ತಂಡದ ವ್ಯಕ್ತಿಯನ್ನು ಕೊಲೆ ಮಾಡಲು ಸಂಚು ರೂಪಿಸುತ್ತಿದ್ದ ಕುಖ್ಯಾತ ರೌಡಿ ಹಾಗೂ ಇತರ ನಾಲ್ವರು ಆರೋಪಿಗಳನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಕುಖ್ಯಾತ ನಟೋರಿಯಸ್ ರೌಡಿ ಶರಣ್ ಆಕಾಶಭವನ ಅಲಿಯಾಸ್ ರೋಹಿದಾಸ್ (38), ಅನಿಲ್ ಕುಮಾರ್ ಸಾಲ್ಯಾನ್ ಯಾನೆ ಅನಿಲ್ ಪಂಪ್ ವೆಲ್ (40), ಸೈನಾಲ್ ಡಿ ಸೋಜಾ, ಪ್ರಾಯ(22), ಪ್ರಸಾದ್ (39), ಚೇತನ್ ಕೊಟ್ಟಾರಿ(35) ಎಂದು ಗುರುತಿಸಲಾಗಿದೆ.
ಮಂಗಳೂರಿನ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಚೇಳಾರು ನಂದಿನಿ ಬ್ರೀಡ್ಜ್ ಬಳಿಯಲ್ಲಿ ಕಳೆದ ಜನವರಿ 8ರ ರಾತ್ರಿ ಹಳೆಯಂಗಡಿ ನಿವಾಸಿಯೊಬ್ಬರು ದ್ವಿ ಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಈ ವೇಳೆ ಅಪರಿಚಿತ ವ್ಯಕ್ತಿಗಳಿದ್ದ ಕಾರು ಅವರನ್ನು ಹಿಂಬಾಲಿಸಿ ತಡೆದು ಚಾಕು ತೋರಿಸಿ ಬೆದರಿಸಿ ಅವರ ಬಳಿಯಿದ್ದ ಮೊಬೈಲ್ ಫೋನ್, ನಗದು ಹಾಗೂ ಟಿವಿಎಸ್ ದ್ವಿಚಕ್ರವನ್ನು ಸುಲಿಗೆ ಮಾಡಿ ಪರಾರಿಯಾಗಿದ್ದರು.
ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಿದ ವೇಳೆ ಇತ್ತೀಚೆಗೆ ಜೈಲಿನಿಂದ 2 ತಿಂಗಳ ಹಿಂದೆಯಷ್ಟೇ ಬಿಡುಗಡೆಗೊಂಡಿದ್ದ ಆಕಾಶಭವನ ಶರಣ್ ಮತ್ತಿತರರು ಈ ಕೃತ್ಯ ಎಸಗಿದ್ದರು ಎಂಬ ಅಂಶ ಬಯಲಾಗಿತ್ತು.
ಈ ಪ್ರಕರಣದಲ್ಲಿ ಅಕಾಶಭವನ ಶರಣ್ ಪ್ರಮುಖ ಸೂತ್ರಧಾರಿಯಾಗಿದ್ದು, ನಗರದ ನೋಟೆಡ್ ರೌಡಿಶೀಟರ್ ಒಬ್ಬನ ಕೊಲೆಗೆ ಸ್ಕೆಚ್ ರೂಪಿಸಿದ್ದ ಶರಣ್ ಈ ಸುಲಿಗೆ ಕೃತ್ಯಕ್ಕೆ ಕೈಹಾಕಿದ್ದ. ಭೂಗತ ಲೋಕದಲ್ಲಿ ಹವಾ ಸೃಷ್ಟಿಸಲು ಹಾಗೂ ತಂಡವನ್ನು ಕಟ್ಟಿ ವಿದೇಶದಿಂದ ಕಂಟ್ರೋಲ್ ಮಾಡಲು ಶರಣ್ ಪ್ಲ್ಯಾನ್ ಮಾಡ್ಕೊಂಡಿದ್ದ. ಬಂಧಿತರಿಂದ ಮಹೇಂದ್ರ ಎಕ್ಸ್ ಯುವಿ ಕಾರು, 3 ಮೊಬೈಲ್ ಫೋನುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣದ ಪ್ರಮುಖ ಆರೋಪಿ ಆಕಾಶಭವನ ಶರಣ್ ಮೇಲೆ 6 ಕೊಲೆ, 2 ಅತ್ಯಾಚಾರ, 2 ಕೊಲೆ ಯತ್ನ, 2 ದರೋಡೆ ಯತ್ನ, 4 ಹಲ್ಲೆ, 1 ಪೋಕ್ಸೊ, ಎನ್ಡಿಪಿಎಸ್ ಕಾಯ್ದೆಯಡಿ ಹಫ್ತಾ ವಸೂಲಿ, ಕಳವು ಪ್ರಕರಣಗಳು ಸೇರಿದಂತೆ ಸುಮಾರು 22 ಪ್ರಕರಣಗಳು ದಾಖಲಾಗಿವೆ. ಈತನ ಮೇಲೆ ಕಾವೂರು ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ತೆರೆಯಲಾಗಿದೆ. ಕಳೆದ 2 ತಿಂಗಳ ಹಿಂದೆಯಷ್ಟೇ ಈತ ಜೈಲಿನಿಂದ ಹೊರಬಂದಿದ್ದ.
ಜೈಲಿನಿಂದ ಹೊರ ಬಂದ ಬಳಿಕ ಈತ ದಕ್ಷಿಣ ಕನ್ನಡ, ಉಡುಪಿ ಹಾಗೂ ಬೆಂಗಳೂರು ಕಡೆಗಳಲ್ಲಿ ಓಡಾಟ ಮಾಡಿಕೊಂಡು ವಾರೆಂಟ್ ಇದ್ದರೂ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದ. ಇದೀಗ ಪೊಲೀಸರು ದರೋಡೆಗೈದಿದ್ದ ಮೊಬೈಲ್ನ ಜಾಡು ಹಿಡಿದು ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ. ಶುಕ್ರವಾರ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮತ್ತೆ ಪೊಲೀಸ್ ವಶಕ್ಕೆ ತೆಗೆದುಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ಆರೋಪಿ ಆಕಾಶಭವನ ಶರಣ್ 2003ರಲ್ಲಿ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯ ಪಿಎಲ್ ಗೇಟ್ ಬಳಿಯಲ್ಲಿ ರಿಕ್ಷಾ ಚಾಲಕ ಫಾರೂಕ್ ಕೊಲೆ ಪ್ರಕರಣ, 2011ರಲ್ಲಿ ಸುಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಕೆವಿಜಿ ಕಾಲೇಜ್ ಕ್ಯಾಂಪಸ್ ಪರಿಸರದಲ್ಲಿ ಕೆವಿಜಿ ಆಡಳಿತಾಧಿಕಾರಿ ರಾಮಕೃಷ್ಣ ಎಂಬುವವರ ಕೊಲೆ ಪ್ರಕರಣ, 2012ರಲ್ಲಿ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಆಕಾಶಭವನ ನಿವಾಸಿ ಕುಮಾರ್ ಕೊಲೆ ಪ್ರಕರಣದ ಆರೋಪಿಯಾಗಿದ್ದಾನೆ.
ಅಲ್ಲದೇ 2013ರಲ್ಲಿ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯ ವೆಲೆನ್ಸಿಯಾದಲ್ಲಿ ಪ್ರಶಾಂತ್ ಅಲಿಯಾಸ್ ಪಚ್ಚು ಕೊಲೆ ಪ್ರಕರಣ, 2015ರಲ್ಲಿ ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯ ಮಂಗಳೂರು ಕಾರಾಗೃಹದಲ್ಲಿ ವಿಚಾರಣಾಧೀನ ಖೈದಿಯಾಗಿದ್ದ ಮಾಡೂರು ಯೂಸುಫ್ ಎಂಬಾತನನ್ನು ಕೊಲೆ ಮಾಡಿದ ಪ್ರಕರಣ, 2020ರಲ್ಲಿ ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಸುರೇಂದ್ರ ಬಂಟ್ವಾಳ ಕೊಲೆ ಪ್ರಕರಣದ ಪ್ರಮುಖ ಆರೋಪಿ ಆಕಾಶಭವನ ಶರಣ್ ಆಗಿದ್ದಾನೆ.
Recommended Video
ಈ ಕೊಲೆಯು ನಡೆಯುವ ಸಮಯ ಈತನು ಬೆಂಗಳೂರು ಕಾರಾಗೃಹದಲ್ಲಿದ್ದು, ತನ್ನ ಸಹಚರರ ಮೂಲಕ ಈ ಕೊಲೆಯನ್ನು ಮಾಡಿಸಿದ್ದಾನೆ. ಈತನ ಮೇಲೆ ಕಾವೂರು ಪೊಲೀಸ್ ಠಾಣೆಯಲ್ಲಿ ರೌಡಿ ಶೀಟ್ ಇದೆ. ಈ ಪೈಕಿ 19 ಪ್ರಕರಣಗಳು ಮಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ ಹಾಗೂ ಉಡುಪಿ ಜಿಲ್ಲೆಯ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ ಹಾಗೂ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿದೆ.