ತವರಿಗೆ ಮರಳುತ್ತಿರುವ ಭಾರತೀಯರು: ಹೋಟೆಲ್ಗಳಲ್ಲಿ ಕ್ವಾರಂಟೈನ್
ಮಂಗಳೂರು ಮೇ 5: ಕೊರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆತರಲು ಕೇಂದ್ರ ಸರ್ಕಾರದಿಂದ ಸಿದ್ಧತೆಗಳು ನಡೆಯುತ್ತಿರುವುದರಿಂದ ಮಂಗಳೂರಿನ ಹೋಟೆಲ್, ವಸತಿಗೃಹ ಸಂಸ್ಥೆಗಳೊಂದಿಗೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿತು.
Recommended Video
ಪ್ರೊಬೇಷನರಿ ಐಎಎಸ್ ಅಧಿಕಾರಿ ರಾಹುಲ್ ಶಿಂಧೆ ಮಾತನಾಡಿ, ಕರ್ನಾಟಕದಲ್ಲಿ ಬೆಂಗಳೂರು ಹಾಗೂ ಮಂಗಳೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣದ ಮೂಲಕ ವಿದೇಶಗಳಿಂದ ಪ್ರಯಾಣಿಕರು ಆಗಮಿಸಲಿದ್ದಾರೆ. ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮಾರ್ಗದರ್ಶಿಯಂತೆ ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲಾಗುತ್ತಿದೆ ಎಂದು ಹೇಳಿದರು.
ಬಯಲಾಯ್ತು ಭಾರಿ ಮೊತ್ತದ ಮದ್ಯದ ಬಿಲ್ಗಳ ರಹಸ್ಯ, ಶುರುವಾಯ್ತು ಸಂಕಷ್ಟ!
ವಿದೇಶದಿಂದ ಆಗಮಿಸುವ ಎಲ್ಲಾ ಪ್ರಯಾಣಿಕರನ್ನು ವಿಮಾನನಿಲ್ದಾಣದಲ್ಲಿ ವೈದ್ಯಕೀಯ ಪರೀಕ್ಷೆಗೊಳಪಡಿಸಿ, ಗಂಟಲ ದ್ರವ ಮಾದರಿ ಸಂಗ್ರಹಿಸಲಾಗುವುದು. ಬಳಿಕ ಅವರನ್ನು ನಿಗಾವಣೆ ಕೇಂದ್ರಗಳಿಗೆ ಕಳುಹಿಸಲಾಗುವುದು. ಇದಕ್ಕಾಗಿ ನಗರದ ವಿವಿಧ ವಸತಿಗೃಹಗಳನ್ನು ಕ್ವಾರೆಂಟೈನ್ ಕೇಂದ್ರಗಳನ್ನಾಗಿ ಗುರುತಿಸಲಾಗುವುದು. ಪ್ರತೀಕೇಂದ್ರಕ್ಕೆ ನೋಡಲ್ಅಧಿಕಾರಿಯನ್ನು ನೇಮಿಸಲಾಗುವುದು ಎಂದುಅವರು ಹೇಳಿದರು.
ವೆಚ್ಚವನ್ನು ಪ್ರಯಾಣಿಕರೇ ಭರಿಸಬೇಕಾಗುತ್ತದೆ
ವಸತಿಗೃಹದ ವೆಚ್ಚವನ್ನು ವಿದೇಶದಿಂದ ಬಂದ ಪ್ರಯಾಣಿಕರೇ ಭರಿಸಬೇಕಾಗುತ್ತದೆ ಎಂದು ಅವರು ಹೇಳಿದರು. ಆರೋಗ್ಯ ಸಚಿವಾಲಯದ ಎಲ್ಲಾ ಮಾರ್ಗದರ್ಶಿಗಳನ್ನು ವಸತಿಗೃಹಗಳು ಪಾಲಿಸಬೇಕು ಎಂದು ಅವರು ತಿಳಿಸಿದರು. ವಸತಿ ಗೃಹಗಳಿಗೆ ಸಮಾನವಾದ ಶಿಷ್ಟಾಚಾರಗಳನ್ನು ಶೀಘ್ರವೇ ನಿಗದಿಪಡಿಸಲಾಗುವುದು ಎಂದುರಾಹುಲ್ ಶಿಂಧೆ ತಿಳಿಸಿದರು. ಸಭೆಯಲ್ಲಿ ಮಹಾನಗರಪಾಲಿಕೆ ಪರಿಸರ ಅಭಿಯಂತರ ಮಧು, ನಗರದ ವಿವಿಧ ಲಾಡ್ಜ್ಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಅತಿದೊಡ್ಡ ತೆರವು ಕಾರ್ಯಾಚರಣೆ
ಲಾಕ್ಡೌನ್ನಿಂದ ವಿದೇಶದಲ್ಲಿ ತೀವ್ರ ತೊಂದರೆಗೆ ಒಳಗಾಗಿರುವ ಭಾರತೀಯರನ್ನು ಕರೆತರಲು ಭಾರತದ ಇತಿಹಾಸದಲ್ಲಿ ಅತಿದೊಡ್ಡ ತೆರವು ಕಾರ್ಯಾಚರಣೆಯನ್ನು (Airlift) ನಡೆಸಲು ಮುಂದಾಗಿದೆ. ಮೇ 7 ರಿಂದ ಒಂದು ವಾರದಲ್ಲಿ ಪ್ರಪಂಚದ ವಿವಿಧ ದೇಶದಲ್ಲಿ ಸಿಲುಕಿರುವವರನ್ನು ಕರೆತರಲು ವಿದೇಶಾಂಗ ಸಚಿವಾಲಯ ಹಾಗೂ ನಾಗರಿಕ ವಿಮಾನಯಾನ ಸಚಿವಾಲಯ ಕೂಡಿಕೊಂಡು ಬಹುದೊಡ್ಡ ಯೋಜನೆ ರೂಪಿಸಿವೆ.
14000 ಭಾರತೀಯರನ್ನು ಕರೆ ತರಲು ಯೋಜನೆ
ಕೇಂದ್ರ ವಿದೇಶಾಂಗ ಇಲಾಖೆಯ ಮಾಹಿತಿಯ ಪ್ರಕಾರ ಮೊದಲ ಹಂತದ ಕಾರ್ಯಾಚರಣೆಯಲ್ಲಿ 13 ದೇಶಗಳಿಂದ ಸುಮಾರು 14000 ಭಾರತೀಯರನ್ನು ಕರೆ ತರಲು ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ 64 ವಿಮಾನಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಯಾವ ಯಾವ ದೇಶಗಳಿಂದ ಬರಲಿದ್ದಾರೆ?
ಮೊದಲ ಹಂತದಲ್ಲಿ ಪಿಲಿಪ್ಪೀನ್ಸ್, ಸಿಂಗಪುರ್, ಬಾಂಗ್ಲಾದೇಶ, ಯುಎಇ, ಇಂಗ್ಲೆಂಡ್, ಸೌದಿ ಅರೇಬಿಯಾ, ಕತಾರ್, ಅಮೆರಿಕ, ಓಮನ್, ಬಹರೇನ್, ಕುವೈತ್, ಮಲೇಷಿಯಾ ಹಾಗೂ ಇಂಡೋನೇಷಿಯಾದಿಂದ ಭಾರತೀಯರನ್ನು ಕರೆ ತರಲಾಗುತ್ತದೆ ಎಂದು ತಿಳಿಸಿದೆ. ಬೆಂಗಳೂರು, ಚೆನ್ನೈ, ಕೊಚ್ಚಿ, ನವದೆಹಲಿ, ಅಹಮದಾಬಾದ್, ಮುಂಬೈಗೆ ವಿಮಾನಗಳು ಬಂದಿಳಿಯಲಿವೆ.