ಮಂಗಳೂರು: ಮೋದಿ ಸರ್ಕಾರಕ್ಕೆ ಅಮೇಜಾನ್ 8546 ಕೋಟಿ ಲಂಚ- ಡಾ.ಅಮೀ ಯಜ್ನಿಕ್
ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ 8,546 ಕೋಟಿ ರೂಪಾಯಿಯ ಭ್ರಷ್ಟಾಚಾರ ನಡೆಸಿದೆ ಎಂದು ಎಐಸಿಸಿ ವಕ್ತಾರೆ, ರಾಜ್ಯ ಸಭೆ ಸದಸ್ಯೆ ಡಾ.ಅಮೀ ಯಜ್ನಿಕ್ ಆರೋಪಿಸಿದ್ದಾರೆ.
ಕರಾವಳಿ ಪ್ರವಾಸದ ನಿಮಿತ್ತ ಮಂಗಳೂರಿಗೆ ಆಗಮಿಸಿದ್ದ ಅಮೀ ಯಜ್ನಿಕ್, ದ.ಕ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಜನಸಾಮಾನ್ಯರ ಜೀವನವನ್ನು ಕಸಿದುಕೊಳ್ಳಲು ಶ್ರೀಮಂತ ವರ್ಗಕ್ಕೆ ಸುಪಾರಿ ನೀಡಿದೆ. ದೇಶದ ಯುವ ಜನರಿಗೆ ಉದ್ಯೋಗ ಇಲ್ಲ. ಸಣ್ಣ ವ್ಯಾಪಾರಿಗಳಿಗೆ ವ್ಯಾಪಾರವಿಲ್ಲ ಎಂದು ಹೇಳಿದರು.
"ಕೇಂದ್ರ ಸರ್ಕಾರಕ್ಕೆ ಅಮೇಜಾನ್ ಕಂಪೆನಿಯು 8,546 ಕೋಟಿ ರೂಪಾಯಿ ಲಂಚ ನೀಡಿದೆ. ಕಾನೂನು ಶುಲ್ಕದ (ಲೀಗಲ್ ಫೀಸ್) ಹೆಸರಿನಲ್ಲಿ ಅಮೇಜಾನ್ ಕಂಪೆನಿ ದೊಡ್ಡ ಪ್ರಮಾಣದ ಹಣ ನೀಡಿದೆ. ಆದರೆ ಹಣ ಯಾರಿಗೆ ಸಂದಾಯವಾಗಿದೆ? ಹೇಗೆ ಸಂದಾಯವಾಗಿದೆ? ಎಂಬುದು ತಿಳಿದಿಲ್ಲ. ಈ ಹಣದ ವಹಿವಾಟಿನ ಬಗ್ಗೆ ಕೇಂದ್ರ ಸರ್ಕಾರ ಇದುವರೆಗೂ ದಾಖಲೆಗಳನ್ನು ನೀಡಿಲ್ಲ. ಇದು ಅಮೇಜಾನ್ ಕಂಪೆನಿ ತಮ್ಮ ಪರ ಕಾನೂನು ರೂಪಿಸಲು ಕೇಂದ್ರಕ್ಕೆ ನೀಡಿದ ಲಂಚ" ಎಂದು ಅಮೀ ಯಜ್ನಿಕ್ ಆರೋಪ ಮಾಡಿದರು.
ಅಮೇಜಾನ್ ಕಂಪೆನಿಯಿಂದ ಸಣ್ಣ ವ್ಯಾಪಾರಿಗಳಿಗೆ ತೊಂದರೆಯಾಗಿದೆ. ಡಿಜಿಟಲ್ ಇಂಡಿಯಾದ ಹೆಸರಿನಲ್ಲಿ ಬಡವರ ಹೊಟ್ಟೆ ಮೇಲೆ ಹೊಡೆಯುವ ಕೆಲಸವಾಗುತ್ತಿದೆ. ಅಮೆರಿಕಾ ಮೂಲದ ಅಮೇಜಾನ್ ಕಂಪೆನಿ ಇಷ್ಟು ದೊಡ್ಡ ಮೊತ್ತವನ್ನು ಕೇಂದ್ರ ಸರ್ಕಾರಕ್ಕೆ ನೀಡಿರುವುದು ಯಾಕೆ? ಸರ್ಕಾರದ ಕಾನೂನುಗಳನ್ನು ತಮ್ಮ ಪರವಾಗಿ ಬದಲಾಯಿಸುವುದಕ್ಕಾ? ಎಂಬುವುದರ ಬಗ್ಗೆ ಕಂಪೆನಿ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.
70 ವರ್ಷಗಳ ಕಾಲ ಕಾಂಗ್ರೆಸ್ ಸರ್ಕಾರವಿದ್ದಾಗ ದೇಶದಲ್ಲಿ ಕಚ್ಚಾ ವಸ್ತುಗಳ ಬೆಲೆ ಜಾಸ್ತಿಯಾಗಿತ್ತು. ದೇಶದಲ್ಲೇ ಉತ್ಪಾದನೆಯಾಗಿ, ಇಲ್ಲಿನ ಜನರಿಂದಲೇ ಮಾರಾಟ ಕೊಂಡುಕೊಳ್ಳುವಿಕೆ ನಡೆಯುತಿತ್ತು. ಅದರೆ ನರೇಂದ್ರ ಮೋದಿ ಸರ್ಕಾರ ಬಂದ ಮೇಲೆ ಎಲ್ಲವನ್ನೂ ವಿದೇಶಿ ಕಂಪೆನಿಗಳಿಗೆ ನೀಡಲಾಗುತ್ತಿದೆ. ಹೀಗೆ ವಿದೇಶಿ ಕಂಪೆನಿಗಳಿಗೆ ಉದ್ದಾರ ಮಾಡುತ್ತಾ ಹೋದರೆ ಮುಂದೊಂದು ದಿನ ದೇಶದಲ್ಲಿ ಏನೂ ಉಳಿಯೋದಿಲ್ಲ ಅಂದು ಅಮಿ ಯಜ್ನಿಕ್ ಆತಂಕ ವಕ್ತಪಡಿಸಿದರು.
ಮೋದಿ ಸರ್ಕಾರ ಬಡಜನರನ್ನು ಕಡೆಗಣಿಸಿ, ಶ್ರೀಮಂತ ವರ್ಗಕ್ಕೆ ಮಾನ್ಯತೆ ನೀಡುತ್ತಿದೆ. ಇ-ಕಾಮರ್ಸ್ ಕಂಪೆನಿಗಳಿಂದ ಕಿರಾಣಿ ಅಂಗಡಿಯವರಿಗೆ ಹೊಡೆತ ಬೀಳುತ್ತಿದೆ. ಅಮೆಜಾನ್ ಕಂಪೆನಿ ಕೊಟ್ಟ ಹಣ ಯಾರ ಕಿಸೆ ಸೇರಿದೆ ಎಂಬುವುದರ ಬಗ್ಗೆ ತನಿಖೆಯಾಗಬೇಕು. ವಿದೇಶಿ ಕಂಪೆನಿಗಳು ದೊಡ್ಡ ಪ್ರಮಾಣದಲ್ಲಿ ಜನರ ಜೀವನದೊಳಗೆ ಹಾಸುಹೊಕ್ಕಾದರೆ ದೇಶದ ಭಧ್ರತೆಗೆ ಆಪಾಯವಲ್ಲವೇ? ಅಮೇಜಾನ್ ಸೇರಿದಂತೆ ಇತರ ವಿದೇಶಿ ಕಂಪೆನಿಗಳಿಂದ ಆದ ನಷ್ಟದ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾತನಾಡುವುದಿಲ್ಲ. ದೇಶದ ಪತ್ರಕರ್ತರ ಎದುರೇ ಒಮ್ಮೆಯೂ ಮಾತನಾಡದ ಮೋದಿ, ಮನ್ ಕೀ ಬಾತ್ ನಲ್ಲಿ ಆದರೂ ಮಾತನಾಡಲಿ ಅಂತಾ ಸವಾಲೆಸದರು.
ಅಮೇಜಾನ್ ಕೊಟ್ಟ ಹಣ ಬಗ್ಗೆ ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ವಿಚಾರಣೆಯಾಗಬೇಕು. ತಮ್ಮದು ಭ್ರಷ್ಟಾಚಾರ ರಹಿತ ಆಡಳಿತ ಅಂದವರ ಮುಖವಾಡ ಕಳಚಿ ಬೀಳಬೇಕು ಅಂತಾ ಕಾಂಗ್ರೆಸ್ ವಕ್ತಾರೆ ಡಾ.ಅಮೀ ಯಜ್ನಿಕ್ ಆಗ್ರಹಿಸಿದ್ದಾರೆ.
Recommended Video
ನರೇಂದ್ರ ಮೋದಿ ಆಡಳಿತಕ್ಕೆ ಬಂದ ಮೇಲೆ ದೇಶದಲ್ಲಿ14 ಕೋಟಿ ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಕೇಂದ್ರ ಸರ್ಕಾರ ತಾವು ಆಡಳಿತಾವಧಿಯಲ್ಲಿ ಮಾಡಿದ ಉದ್ಯೋಗ ಸೃಷ್ಠಿ ಬಗ್ಗೆ ಮಾತನಾಡಲಿ, ದಾಖಲೆ ಬಿಡುಗಡೆ ಮಾಡಲಿ. ವಿದ್ಯಾಭ್ಯಾಸ ಮುಗಿಸಿ ಹೊರಬರುವ ವಿದ್ಯಾರ್ಥಿಗಳಿಗೆ ಉದ್ಯೋಗ ಇಲ್ಲ. ಯುವ ಜನರು ಉದ್ಯೋಗವಿಲ್ಲ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ ಅಂತಾ ಬಿಜೆಪಿ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದರು.