ಮಳೆಗಾಲದಲ್ಲಿ ಹಣಗಳಿಕೆಯ ದಾರಿ ಕಂಡುಕೊಂಡ ಗ್ರಾಮೀಣ ಯುವಕ
ಮಂಗಳೂರು, ಆಗಸ್ಟ್ 04 : ಕರಾವಳಿಯಲ್ಲಿ ಮಳೆಗಾಲ ಆರಂಭವಾಯಿತೆಂದರೆ ಗ್ರಾಮೀಣ ಭಾಗದ ಯುವಕರ ಮೊಗದಲ್ಲಿ ಮಂದಹಾಸ ಮೂಡುತ್ತದೆ. ಮುಂಗಾರು ಮಳೆಯ ಹನಿಗಳ ಲೀಲೆ ಶುರುವಾದರೆ ಸಾಕು ಕರಾವಳಿಯ ನದಿ ಸಮೀಪ ಯುವಕರಿಗೆ ಖುಷಿಯೋ ಖುಷಿ. ಮಳೆಗಾಲದಲ್ಲಿ ನದಿ ಉಕ್ಕಿಹರಿದರೆ ಈ ಯುವಕರಿಗೆ ಹಣ ಗಳಿಕೆಯ ದಾರಿ ತೆರೆದುಕೊಳ್ಳುತ್ತದೆ. ಇದು ಅಚ್ಚರಿಯಾದರೂ ಸತ್ಯ.
ಪಶ್ಚಿಮ ಘಟ್ಟಗಳಿಂದ ಹರಿದು ಬರುವ ನದಿ ನೀರಿನಲ್ಲಿ ತೇಲಿಕೊಂಡು ಬರುವ ತೆಂಗಿನಕಾಯಿಗಳನ್ನು ಹಿಡಿಯುವುದೇ ಒಂದು ಚಾಲೆಂಜ್. ಉಕ್ಕಿ ಹರಿಯುವ ನದಿಗೆ ಧುಮುಕಿ ತೇಲಿ ಬರುವ ತೆಂಗಿನ ಕಾಯಿಗಳನ್ನು ಹಿಡಿಯೋದು ಅಂದ್ರೆ ಈ ಯುವಕರಿಗೆ ಸಾಹಸಮಯ ಆಟ. ಏನೋ ಒಂದು ಚಾಲೆಂಜ್. ಆದರೆ ಪೆರ್ಲಾ ಗ್ರಾಮದ ಯುವಕನೊಬ್ಬ ನದಿಗೆ ಹಾರುವ ದುಸ್ಸಾಹಸಕ್ಕೆ ಕೈ ಹಾಕದೇ ಉಪಾಯವಾಗಿ ತೆಂಗಿನಕಾಯಿ ಸಂಗ್ರಹಿಸುತ್ತಾನೆ. ತನ್ನದೇ ಸ್ಥಳೀಯ ತಂತ್ರಜ್ಞಾನ ಬಳಸಿ ತೆಂಗಿನಕಾಯಿ ಸಂಗ್ರಹಿಸಿ ಸಾವಿರಾರು ರೂಪಾಯಿ ಕಮಾಯಿಸಿದ್ದಾನೆ.
ಕಾಲೇಜು ಯುವತಿಯರ ಡ್ರೆಸ್ ನಲ್ಲಿ ಭಿಕ್ಷಾಟನೆ : ದುಡ್ಡು ಕೊಡೊ ಮುನ್ನ ಎಚ್ಚರ!
ಕರಾವಳಿಯಲ್ಲಿ ಅಬ್ಬರಿಸಿ ಬೊಬ್ಬಿರಿದ ಮಳೆರಾಯ ಈಗ ಕೊಂಚ ತಣ್ಣಗಾಗಿದ್ದಾನೆ. ಪಶ್ಚಿಮ ಘಟ್ಟಗಳಲ್ಲಿ ಎಡೆಬಿಡದೇ ಸುರಿದ ಮಳೆಯಿಂದಾಗಿ ಕರಾವಳಿಯ ನದಿಗಳು ಉಕ್ಕಿ ಹರಿಯುತ್ತಿವೆ. ಧುಮ್ಮಿಕ್ಕಿ ಹರಿಯುವ ಈ ನದಿಗಳನ್ನು ನೋಡುವುದೇ ಕಣ್ಣಿಗೆ ಹಬ್ಬ. ಹೀಗೆ ಉಕ್ಕಿ ಹರಿಯುವ ನದಿಗಳ ಹತ್ತಿರಕ್ಕೆ ಬರುವುದಕ್ಕೆ ಜನ ಸಾಮಾನ್ಯರು ಭಯ ಪಡುತ್ತಾರೆ.
ಆದರೆ ನದಿ ತಟದಲ್ಲಿ ವಾಸಿಸುವ ಯುವಕರು ಇಂಥ ಅಪಾಯಕಾರಿ ನದಿಗಳಿಗೇ ಧುಮುಕಿ ತೆಂಗಿನಕಾಯಿ ಸಂಗ್ರಹಿಸುವ ಸಾಹಸಕ್ಕೆ ಕೈ ಹಾಕುತ್ತಾರೆ. ದುರಾದೃಷ್ಟವಶಾತ್ ಸಾಹಸ ದುಸ್ಸಾಹಸಕ್ಕೆ ತಿರುಗಿ ಕೆಲವು ಯುವಕರು ಪ್ರಾಣ ಕಳೆದು ಕೊಂಡ ಹಲವು ನಿದರ್ಶನಗಳೂ ಇವೆ.
ಬುಡಮೇಲಾದ ಮೀನು ವ್ಯಾಪಾರ: ಸಾಮಾಜಿಕ ಜಾಲತಾಣದ ಮೊರೆಹೋದ ಮಹಿಳೆಯರು
ದಕ್ಷಿಣ ಕನ್ನಡ ಜಿಲ್ಲೆಯ ಗಡಿನಾಡ ಗ್ರಾಮ ಕಾಸರಗೋಡು ಸಮೀಪದ ಪೆರ್ಲದ ಯುವಕನೊಬ್ಬ ನದಿಗೆ ಹಾರಿ ಈಜಾಡಿ ತೆಂಗಿನಕಾಯಿ ಸಂಗ್ರಹಿಸುವ ಬದಲು ನದಿಯಿಂದ ನೇರವಾಗಿ ದಡಕೆ ತೆಂಗಿನಕಾಯಿ ಬರುವಂತೆ ಹೊಸ ಉಪಾಯಯೊಂದನ್ನು ಕಂಡುಕೊಂಡಿದ್ದಾರೆ.
ಕೃಷಿಯಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಪೆರ್ಲದ ರಕ್ಷಿತ್ ಗೆ ನದಿಯಲ್ಲಿ ಮಳೆಗಾಲದ ವೇಳೆ ತೇಲಿಬರುವ ತೆಂಗಿನಕಾಯಿಯನ್ನು ಹಿಡಿದು ಹಣ ಸಂಪಾದಿಸಬೇಕೆಂಬ ಇರಾದೆ ಇತ್ತು. ಆದರೆ ರಕ್ಷಿತ್ ಉಕ್ಕಿ ಹರಿಯುವ ನದಿಗೆ ಹಾರುವ ದುಸ್ಸಾಹಸಕ್ಕೆ ಕೈಹಾಕದೇ ನದಿಯಲ್ಲಿ ತೇಲಿ ಬರುವ ತಂಗಿನಕಾಯಿಗಳನ್ನು ಸಂಗ್ರಹಿಸುವ ಉಪಾಯ ಕಂಡುಕೊಂಡಿದ್ದಾನೆ. ಉಕ್ಕಿ ಹರಿವ ತನ್ನ ಮನೆಯ ಸಮೀಪದ ಈ ನದಿಗೆ ದೊಡ್ಡದೊಂದು ಬಿದಿರನ್ನು ಹಗ್ಗದಿಂದ ಅಡ್ಡ ಕಟ್ಟಿ ಅದರ ಮೂಲಕ ತೆಂಗಿನಕಾಯಿ ನದಿಯ ದಡಕ್ಕೆ ಬರುವಂತೆ ಮಾಡಿದ್ದಾರೆ.
ದಿನಕ್ಕೆ 40ಕ್ಕಿಂತಲೂ ಹೆಚ್ಚು ತೆಂಗಿನಕಾಯಿಗಳನ್ನು ಹೀಗೆ ಸಂಗ್ರಹಿಸುತ್ತಾರೆ ರಕ್ಷಿತ್. ಮಳೆ ಅಬ್ಬರ ಹೆಚ್ಚುತ್ತಿದ್ದಂತೆ ನದಿಯಲ್ಲಿ ತೇಳಿಬರುವ ತೆಂಗಿನ ಕಾಯಿಗಳ ಸಂಖ್ಯೆಯೂ ಹೆಚ್ಚುತ್ತದೆ. ಆಗ ಕಾಯಿಗಳ ಸಂಗ್ರಹ ಕೂಡ ಹೆಚ್ಚು. ಕಳೆದ ವರ್ಷ ನದಿಯಲ್ಲಿ ತೇಲಿ ಬಂದ ತೆಂಗಿನಕಾಯಿ ಸಂಗ್ರಹಿಸಿ ಮಾರಾಟ ಮಾಡಿ 40 ಸಾವಿರಕ್ಕಿಂತಲೂ ಹೆಚ್ಚು ಹಣ ರಕ್ಷಿತ್ ಪಡೆದಿದ್ದಾನೆ. ಈ ಬಾರಿ ಕೊಬ್ಬರಿಗೂ ಹೆಚ್ಚು ಬೆಲೆ ಇರುದ್ದರಿಂದ 80 ಸಾವಿರದ ವರೆಗೆ ಸಂಪಾದಿಸಬಹುದು ಎನ್ನುವ ಅಂದಾಜು ರಕ್ಷಿತ್ ಅವರದ್ದಾಗಿದೆ. ಈತ ಇಷ್ಟೇ ಅಲ್ಲದೇ ನದಿಗಳಲ್ಲಿ ತೇಲಿ ಬರುವ ಪ್ಲಾಸ್ಟಿಕ್ ಬಾಟಲ್ ಕೂಡ ಸಂಗ್ರಹಿಸುತ್ತಾರೆ. ಇದರಿಂದ ನದಿಯೂ ಸ್ವಚ್ಛವಾದಂತೆ ಆಗುತ್ತೆ ಎನ್ನುವುದು ಅವರ ಅಭಿಪ್ರಾಯ.
ಹಣ ಸಂಪಾದಿಸಲು ಇಂದಿನ ಯುವಕರು ಅಡ್ಡ ದಾರಿ ಹಿಡಿಯುವ ಈ ಕಾಲದಲ್ಲಿ, ರಕ್ಷಿತ್ ಕಷ್ಟ ಪಟ್ಟು ಉಪಾಯದಿಂದ ಹಣ ಸಂಪಾದಿಸುತ್ತಿರುವುದು ಶ್ಲಾಘನೀಯ. ಮನಸ್ಸಿದ್ದಲ್ಲಿ ಮಾರ್ಗ ಎಂಬುದು ಇದಕ್ಕೆ.