ಕರಾವಳಿಯಲ್ಲಿ ಮುಂದಿನ 24 ಗಂಟೆಯಲ್ಲಿ ಗುಡುಗು ಸಹಿತ ಭಾರೀ ಮಳೆ: ಮತ್ತೆ ರೆಡ್ ಅಲರ್ಟ್
ಮಂಗಳೂರು, ಆಗಸ್ಟ್ 14: ಕರಾವಳಿಯ ಜನರಲ್ಲಿ ಮತ್ತೆ ಆತಂಕ ಶುರುವಾಗಿದೆ. ಕಳೆದ ಕೆಲವು ದಿನಗಳಿಂದ ಅವಾಂತರ ಸೃಷ್ಟಿಸಿದ್ದ ಮಳೆ ಎರಡು ದಿನಗಳಿಂದ ಶಾಂತವಾಗಿತ್ತು. ಆದರೆ ಹವಾಮಾನ ಇಲಾಖೆ ಇಂದು ಮತ್ತೆ ರೆಡ್ ಅಲರ್ಟ್ ಎಚ್ಚರಿಕೆ ಘೋಷಿಸಿದೆ. ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಯಲ್ಲಿ ಗುಡುಗು ಸಹಿತ ಭಾರೀ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ರವಾನಿಸಿದೆ.
ಭಾರೀ ಮಳೆಯ ಮಧ್ಯೆಯೂ ಬೆಳ್ತಂಗಡಿಯ ದಿಡುಪೆಯಲ್ಲಿ ದೈವ ಪವಾಡ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹವಾಮಾನ ಇಲಾಖೆ ಕಳೆದ 2 ದಿನಗಳಿಂದ ಆರೆಂಜ್ ಅಲರ್ಟ್ ಘೋಷಿಸಿತ್ತು. ಆದರೆ ಹವಾಮಾನ ಇಲಾಖೆ ಇಂದು ಮತ್ತೆ ರೆಡ್ ಅಲರ್ಟ್ ಘೋಷಿಸಿದೆ. ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಇತರೆಡೆ ಕಳೆದ ಎರಡು ದಿನಗಳಿಂದ ಬಿಟ್ಟೂಬಿಟ್ಟು ಉತ್ತಮ ಮಳೆಯಾಗಿದೆ. ಕಳೆದ ರಾತ್ರಿ ಭಾರೀ ಮಳೆ ಸುರಿದಿದೆ. ಕಳೆದ ಎರಡು ದಿನಗಳಿಂದ ಬಂಟ್ವಾಳ, ಬೆಳ್ತಂಗಡಿಯಲ್ಲಿ ಮಳೆ ಕಡಿಮೆಯಾಗಿತ್ತು.
ಪ್ರವಾಹದಿಂದ ತತ್ತರಿಸಿ ಸ್ವಲ್ಪ ನಿಟ್ಟುಸಿರುಬಿಡುತ್ತಿದ್ದ ಜನರಲ್ಲಿ ರೆಡ್ ಅಲರ್ಟ್ ಘೋಷಣೆ ಮತ್ತೆ ಆತಂಕ ಮನೆ ಮಾಡಿದೆ. ಪ್ರವಾಹದಿಂದ ನಲುಗಿದ ಬೆಳ್ತಂಗಡಿಯ ಮಿತ್ತಬಾಗಿಲು ಗ್ರಾಮದ ಕಕ್ಕಾವು, ಕಾಜೂರು, ದಿಡುಪೆ, ನಂದಿಕಾಡು, ಚಾರ್ಮಾಡಿ ಪ್ರದೇಶದ ಜನರಲ್ಲಿ ಮತ್ತೆ ಭಯ ಉಂಟಾಗಿದೆ.