ಕದ್ರಿಯಲ್ಲಿ ನಡೆಯಬೇಕಿದ್ದ 'ಭಾವೈಕ್ಯದ ದೀಪಾವಳಿ' ಕಾರ್ಯಕ್ರಮ ಶಿಫ್ಟ್
ಕದ್ರಿ ಮಂಜುನಾಥ ಕ್ಷೇತ್ರದಲ್ಲಿ ಅನ್ಯಮತೀಯರ ನೇತೃತ್ವದಲ್ಲಿ'ಭಾವೈಕ್ಯದ ದೀಪಾವಳಿ'ಕಾರ್ಯಕ್ರಮ ನಡೆಸಲು ಮುಂದಾಗಿರುವುದಕ್ಕೆ ವಿಎಚ್ ಪಿ ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಕಾರ್ಯಕ್ರಮವನ್ನು ಗೋರಕ್ಷನಾಥ ಸಭಾಂಗಣಕ್ಕ ಸ್ಥಳಾಂತರಗೊಂಡಿದೆ.
ಮಂಗಳೂರು, ಅ. 27 : ವಿಧಾನಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ಅವರ ನೇತೃತ್ವದಲ್ಲಿ ಅ.29 ರಂದು ಕದ್ರಿಯ ಮಂಜುನಾಥೇಶ್ವರ ದೇವಸ್ಥಾನದಲ್ಲಿ ನಡೆಸಲುದ್ದೇಶಿಸಿರುವ 'ಭಾವೈಕ್ಯದ ದೀಪಾವಳಿ' ಕಾರ್ಯಕ್ರಮವನ್ನು ಬೇರೆಡೆಗೆ ಸ್ಥಳಾಂತರ ಮಾಡಲಾಗಿದೆ.
"ಭಾವೈಕ್ಯದ ದೀಪಾವಳಿ ಹಬ್ಬ ಆಚರಣೆ ಕಾರ್ಯಕ್ರಮವನ್ನು ಕದ್ರಿಯ ಗೋರಕ್ಷನಾಥ ಸಭಾಂಗಣಕ್ಕೆ ಸ್ಥಳಾಂತರಿಸಲಾಗಿದೆ" ಎಂದು ವಿಧಾನಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ದೇವಾಲಯದಲ್ಲಿ ಅನ್ಯಮತೀಯರು ದೀಪಾವಳಿ ಆಚರಣೆ ನಡೆಸುವುದರಿಂದ ಹಿಂದೂಗಳ ಭಾವನೆಗೆ ಧಕ್ಕೆಯಾಗಲಿದೆ'' ಎಂದು ವಿ ಎಚ್ ಪಿ ಸಂಘ ಪರಿವಾರದವರು ವಿರೋಧ ವ್ಯಕ್ತಪಡಿಸಿದ್ದಾರೆ.
ಇದರಿಂದ ಅವರ ಭಾವನೆಗಳಿಗೆ ಧಕ್ಕೆಯಾಗದಂತೆ ಮತ್ತು ಸಮಾಜದ ಭಾವೈಕ್ಯತೆ ಕಾಪಾಡುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಸ್ಥಳಾಂತರಿಸಿರುವುದಾಗಿ ಅವರು ಹೇಳಿದರು. [ಮಂಗಳೂರು: ಕದ್ರಿ ಹಿಂದೂಗಳ ಕ್ಷೇತ್ರ, ರಾಜಕೀಯ ದೊಂಬರಾಟಕ್ಕಲ್ಲ]
ಅನ್ಯ ಧರ್ಮೀಯ ಎಂಬ ವಿಚಾರವನ್ನು ಮುಂದಿಟ್ಟುಕೊಂಡು ಹಿಂದೂಗಳ ಭಾವನೆಗೆ ಧಕ್ಕೆಯಾಗಿದೆ ಎನ್ನುತ್ತಿದ್ದಾರೆ. ದೀಪಾವಳಿ ಆಚರಣಾ ಕಮಿಟಿಯಲ್ಲಿ ಶೇ.80ರಷ್ಟು ಮಂದಿ ಹಿಂದೂಗಳೇ ಇದ್ದಾರೆ. ಹೀಗಿರುವಾಗ ಹಿಂದುಗಳ ಭಾವನೆಗಳಿಗೆ ಹೇಗೆ ಧಕ್ಕೆಯಾಗುತ್ತದೆ ಎಂದು ಪ್ರಶ್ನಿಸಿರುವ ಐವನ್, ಅವರೇ ಹಿಂದೂಗಳ ಭಾವನೆಗಳಿಗೆ ಧಕ್ಕೆ ಮಾಡಲು ಹೊರಟಿದ್ದಾರೆ ಎಂದರು.
ಕದ್ರಿ ದೇವಾಲಯದಲ್ಲಿ ಕಾರ್ಯಕ್ರಮ ನಡೆಸಿದರೆ, ಗಲಾಟೆಯಾಗಬಹುದು ಎಂದು ಕಾರ್ಯಕ್ರಮವನ್ನೇ ರದ್ದು ಮಾಡುವ ತೀರ್ಮಾನಕ್ಕೆ ಬಂದಿದ್ದೆ. ಆದರೆ ಅಂದು ನೂರಾರು ಮಂದಿಗೆ ಆಮಂತ್ರಣ ನೀಡಿ ವಿವಿಧ ಸೌಲಭ್ಯ ವಿತರಿಸುವುದಾಗಿ ಭರವಸೆ ನೀಡಿದ್ದೆ.
ಅಲ್ಲದೆ, ಗೂಡುದೀಪ ಸ್ಪರ್ಧೆ, ಪ್ರಬಂಧ ಸ್ಪರ್ಧೆ ಸಹಿತ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ನೀಡುವುದಾಗಿಯೂ ಹೇಳಿದ್ದೆ. ಇದಕ್ಕೆ ಮಕ್ಕಳು ಕೂಡ ಸಿದ್ಧರಾಗಿದ್ದಾರೆ. ಅವರಿಗೆಲ್ಲಾ ಅನ್ಯಾಯ ಆಗಬಾರದು ಎಂಬ ಕಾರಣದಿಂದ ಕಾರ್ಯಕ್ರಮವನ್ನು ರದ್ದುಗೊಳಿಸದೆ ಸ್ಥಳಾಂತರ ಮಾಡಲಾಗಿದೆ ಎಂದರು.