ಆದಿತ್ಯರಾವ್ ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು
ಮಂಗಳೂರು, ಫೆಬ್ರವರಿ 01: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ಪೋಟಕವನ್ನಿಟ್ಟಿದ್ದ ಬಾಂಬರ್ ಆದಿತ್ಯರಾವ್ ನನ್ನು ಕೋರ್ಟ್ ಗೆ ಇಂದು ಹಾಜರುಪಡಿಸಲಾಯಿತು.
ಮಂಗಳೂರಿನ ನಾಲ್ಕನೆಯ JMFC ಕೋರ್ಟ್ ಗೆ ಪೊಲೀಸರು ಹಾಜರುಪಡಿಸಿದರು. ಪಣಂಬೂರು ACP ಕಚೇರಿಯಲ್ಲಿ ವಿಚಾರಣೆಯಲ್ಲಿದ್ದ ಆದಿತ್ಯರಾವ್, ಪೊಲೀಸ್ ಕಸ್ಟಡಿ ಇಂದು ಅಂತ್ಯಗೊಂಡ ಹಿನ್ನೆಲೆಯಲ್ಲಿ ACP ಬೆಳ್ಳಿಯಪ್ಪ ನೇತೃತ್ವದ ತಂಡ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು.
ಆದಿತ್ಯ ರಾವ್ ಬ್ಯಾಂಕ್ ಲಾಕರ್ ನಿಂದ ಅನುಮಾನಾಸ್ಪದ ವಸ್ತುಗಳು ವಶಕ್ಕೆ
ಇನ್ನೂ ಕೆಲವು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕೇಳಲಿದ್ದಾರೆ. ಈ ಹಿಂದೆ ಹತ್ತು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನ್ಯಾಯಾಲಯ ಒಪ್ಪಿಸಿತ್ತು. ಇತ್ತೀಚಿಗೆ ಉಡುಪಿಯ ಕರ್ನಾಟಕ ಬ್ಯಾಂಕ್ ನಲ್ಲಿ ಆದಿತ್ಯ ಲಾಕರ್ ನಲ್ಲಿ ಇರಿಸಿದ್ದ ಅನುಮಾನಾಸ್ಪದ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು, ತನಿಖೆಗಾಗಿ ಎಫ್ಎಸ್ಎಲ್ ತಜ್ಞರಿಗೆ ಹಸ್ತಾಂತರಿಸಿ ತನಿಖೆ ಚುರುಕುಗೊಳಿಸಿದ್ದಾರೆ.
ಎಸಿಪಿ ಬೆಳ್ಳಿಯಪ್ಪ ನೇತೃತ್ವದ ತಂಡ ಆದಿತ್ಯ ರಾವ್ ನನ್ನು ಉಡುಪಿಗೆ ಕರೆ ತಂದಿತ್ತು. ಬ್ಯಾಂಕ್ ಲಾಕರ್ ನಲ್ಲಿದ್ದ ಅನುಮಾನಾಸ್ಪದ ವಸ್ತುಗಳು ಏನು? ಬಾಂಬ್ ತಯಾರಿಕೆಗೆ ಬೇಕಾದ ಕಚ್ಚಾವಸ್ತುಗಳನ್ನು ಆರೋಪಿ ಇಲ್ಲಿ ಇರಿಸಿದ್ದಾನೇ? ಒಂದೂವರೆ ವರ್ಷದ ಹಿಂದೆಯೇ ಆತ ಬಾಂಬ್ ತಯಾರಿಗೆ ಸ್ಕೆಚ್ ಹಾಕುತ್ತಿದ್ದನೇ? ಮುಂತಾದ ಆಯಾಮಗಳಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದರು.
ಇನ್ನು ಆದಿತ್ಯ ರಾವ್ ಆತ್ಮಹತ್ಯೆಗೂ ತಯಾರಿ ಮಾಡಿಕೊಂಡಿದ್ದ ಎಂಬ ಸಂಗತಿಯೂ ಬಯಲಾಗಿದೆ. ಆತ್ಮಹತ್ಯೆ ಮಾಡಿಕೊಳ್ಳಲು ಮಂಗಳೂರಿನ ಚಿನ್ನದ ಅಂಗಡಿಯಿಂದ ಸೈನೈಡ್ ನ್ನೂ ಸಂಗ್ರಹಿಸಿದ್ದ.
ಬ್ಯಾಂಕ್ ಲಾಕರ್ ನಲ್ಲಿ ಆರೋಪಿ ಸೈನೈಡ್ ಇಟ್ಟಿರುವ ಸಾಧ್ಯತೆಯ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಒಟ್ಟಿನಲ್ಲಿ ಬಾಂಬರ್ ಮಾಡಿರೋ ಅವಾಂತರಗಳ ಸರಪಳಿ ಒಂದೊಂದಾಗಿಯೇ ಬಿಚ್ಚಿಕೊಳ್ಳುತ್ತಿದ್ದು ಪೊಲೀಸರಿಗೂ ತಲೆನೋವಾಗಿ ಪರಿಣಮಿಸಿದೆ.