ಸ್ಫೋಟಕ ತಯಾರಿ ಬಗ್ಗೆ ಆದಿತ್ಯರಾವ್ ಜ್ಞಾನ ಕಂಡು ಬೆಚ್ಚಿದ ಪೊಲೀಸರು!
ಮಂಗಳೂರು, ಜನವರಿ 23 : "ಸ್ಫೋಟಕ ತಯಾರಿ ಕುರಿತು ಆಳವಾದ ಸಂಶೋಧನೆ ನಡೆಸಿ ಆತ ಸಾಕಷ್ಟು ಮಾಹಿತಿ ತಿಳಿದುಕೊಂಡಿದ್ದಾನೆ. ಆತನ ಜ್ಞಾನ ಕಂಡು ನಮಗೆ ಕಳವಳ ಉಂಟಾಗಿದೆ" ಇದು ಮಂಗಳೂರು ಪೊಲೀಸ್ ಆಯುಕ್ತ ಪಿ. ಎಸ್. ಹರ್ಷ ಹೇಳಿದ ಮಾತು.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದ ಆರೋಪಿ ಆದಿತ್ಯರಾವ್ ಮಂಗಳೂರು ಪೊಲೀಸರ ವಶದಲ್ಲಿದ್ದಾನೆ. ಗುರುವಾರ ಆದಿತ್ಯರಾವ್ ಬಗ್ಗೆ ನಗರ ಪೊಲೀಸ್ ಆಯುಕ್ತ ಪಿ. ಎಸ್. ಹರ್ಷ ಪತ್ರಿಕಾಗೋಷ್ಠಿಯನ್ನು ನಡೆಸಿದರು.
ಗಲಭೆ, ಬಾಂಬ್ ವಿವಾದ ; ಮಂಗಳೂರು ಪೊಲೀಸ್ ಆಯುಕ್ತ ಹರ್ಷ ಯಾರು?
"ಮೈಸೂರಿನ ಪತ್ರಿಷ್ಠಿತ ಕಾಲೇಜಿನಲ್ಲಿ ಮೆಕಾನಿಕಲ್ ಇಂಜಿನಿಯರ್ ಪದವಿ ಪಡೆದಿದ್ದ. ಬಳಿಕ ಮತ್ತೊಂದು ಪ್ರತಿಷ್ಠತ ಸಂಸ್ಥೆಯಿಂದ ಎಂಬಿಎ ಪದವಿ ಪಡೆದಿದ್ದ. ಆದಿತ್ಯರಾವ್ ಹಲವಾರು ಕಡೆ ಕೆಲಸ ಮಾಡಿದ್ದು ಎಲ್ಲಿಯೂ ಹೆಚ್ಚು ದಿನ ಕೆಲಸ ಮಾಡಲಿಲ್ಲ" ಎಂದು ತನಿಖೆ ವೇಳೆ ತಿಳಿದುಬಂದಿದೆ ಎಂದು ಹರ್ಷ ಹೇಳಿದರು.
ಯಾರಿದು ಇಂಜಿನಿಯರ್ ಆದಿತ್ಯ? ಈತನಿಗೇಕೆ ಬಾಂಬ್ ಬೆದರಿಕೆ ಕರೆ ಚಟ?
" ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡಬೇಕು ಎಂಬುದು ಆತನ ಕನಸಾಗಿತ್ತು. ಆದರೆ, ಆತನ ಶಿಕ್ಷಣ ಕೆಲಸಕ್ಕೆ ಅಗತ್ಯವಿರುವದಕ್ಕಿಂತ ಹೆಚ್ಚಿತ್ತು. ಆದ್ದರಿಂದ, ಕೆಲಸದಿಂದ ವಂಚಿತನಾದ. ಇದರಿಂದಾಗಿಯೇ ವಿಮಾನ ನಿಲ್ದಾಣದ ಅಧಿಕಾರಿಗಳ ಮೇಲೆ ಸೇಡು ಮೂಡಿತ್ತು. ಇದಕ್ಕಾಗಿಯೇ ಬಾಂಬ್ ಇಟ್ಟಿರುವುದಾಗಿ ಒಪ್ಪಿಕೊಂಡಿದ್ದಾನೆ" ಎಂದು ಪೊಲೀಸ್ ಆಯುಕ್ತರು ಹೇಳಿದರು.
ಆದಿತ್ಯರಾವ್ ಶರಣು; ಮಂಗಳೂರು ಪೊಲೀಸರು ಹೇಳಿದ್ದೇನು?
ಜೈಲಿನಲ್ಲಿಯೇ ಸ್ಕೆಚ್ ಹಾಕಿದ್ದ ಆರೋಪಿ
ಆದಿತ್ಯರಾವ್ ಬೆಂಗಳೂರು ವಿಮಾನ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಕರೆ ಮಾಡಿದ ಪ್ರಕರಣದಲ್ಲಿ ಜೈಲು ಸೇರಿದ್ದ. ಸುಮಾರು 11 ತಿಂಗಳು ಚಿಕ್ಕಬಳ್ಳಾಪುರ ಜೈಲಿನಲ್ಲಿದ್ದ ಆತ ಅಲ್ಲಿಯೇ ವಿಮಾನ ನಿಲ್ದಾಣದಲ್ಲಿ ದೊಡ್ಡ ಮಟ್ಟದ ಹಾನಿ ಮಾಡಬೇಕು ಎಂದು ಸಂಚು ರೂಪಿಸುತ್ತಿದ್ದ. ಜೈಲಿನಲ್ಲಿಯೂ ಅಂರ್ತಮುಖಿಯಾಗಿದ್ದ ಆತ ಯಾರೊಂದಿಗೂ ಹೆಚ್ಚು ಮಾತನಾಡುತ್ತಿರಲಿಲ್ಲ.
ಎಲ್ಲಾ ಮಾಹಿತಿ ಸಂಗ್ರಹಿಸಿದ್ದ
"ಒಂದು ವಿಮಾನ ನಿಲ್ದಾಣದ ವ್ಯವಸ್ಥೆ ಹೇಗಿರುತ್ತದೆ ಎಂಬ ಬಗ್ಗೆ ವಿವರವಾದ ಅಧ್ಯಯನ ನಡೆಸಿದ್ದ ಆದಿತ್ಯರಾವ್. ಕೆಲಸ ಸಿಗದ ಕಾರಣ ದೊಡ್ಡ ಹಾನಿಯನ್ನು ವಿಮಾನ ನಿಲ್ದಾಣಕ್ಕೆ ಮಾಡಬೇಕು ಎಂದು ಯೋಜನೆ ರೂಪಿಸುತ್ತಿದ್ದ. ಇದಕ್ಕಾಗಿ ಆತ ಮಂಗಳೂರು ವಿಮಾನ ನಿಲ್ದಾಣವನ್ನು ಆಯ್ಕೆ ಮಾಡಿಕೊಂಡಿದ್ದ" ಎಂದು ನಗರ ಪೊಲೀಸ್ ಆಯುಕ್ತ ಹರ್ಷ ಹೇಳಿದರು.
ಪೊಲೀಸರಿಗೆ ಕಳವಳ
"ಇಂಜಿನಿಯರಿಂಗ್ ಪದವಿ ಪಡೆದಿದ್ದ ಆದಿತ್ಯರಾವ್ ತಾಂತ್ರಿಕವಾಗಿ ಬಹಳ ಚಾಣಾಕ್ಷ. ಸ್ಫೋಟಕಗಳ ತಯಾರಿ, ವಿವಿಧ ಮಾದರಿಯ ಸ್ಫೋಟಕಗಳು. ಸ್ಫೋಟಕಗಳ ಜೋಡಣೆ ಬಗ್ಗೆ ಆತನಿಗಿರುವ ಮಾಹಿತಿ ಪೊಲೀಸರಿಗೆ ಕಳವಳ ಉಂಟು ಮಾಡಿದೆ. ಇಂಟರ್ನೆಟ್ನಲ್ಲಿ ಸಿಗುವ ಬೇರೆ-ಬೇರೆ ಮೂಲಗಳಿಂದ ಆತ ಎಲ್ಲಾ ಮಾಹಿತಿ ಸಂಗ್ರಹಿಸಿದ್ದ, ವಿವರವಾದ ಅಧ್ಯಯನ ಮಾಡಿದ್ದ" ಎಂದು ಪೊಲೀಸ್ ಆಯುಕ್ತರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಆನ್ಲೈನ್ ಮೂಲಕ ಖರೀದಿ
"ಸ್ಫೋಟಕವನ್ನು ತಯಾರಿಸಲು ಕಚ್ಚಾ ವಸ್ತುಗಳನ್ನು ಸಂಗ್ರಹಿಸಲು ಆದಿತ್ಯರಾವ್ ತಿಂಗಳುಗಳ ಕಾಲ ಅಧ್ಯಯನ ಮಾಡಿದ್ದಾನೆ. ಮುಕ್ತ ಮಾರುಕಟ್ಟೆಯಲ್ಲಿ ಅದನ್ನು ಖರೀದಿ ಮಾಡಲು ಪ್ರಯತ್ನ ನಡೆಸಿದ್ದಾನೆ. ಆದರೆ, ಸಿಕ್ಕಿ ಬೀಳುವ ಭಯದಲ್ಲಿ ಆ ಆಲೋಚನೆ ಕೈ ಬಿಟ್ಟು ಆನ್ಲೈನ್ ಮೂಲಕ ಖರೀದಿ ಮಾಡಿದ್ದಾನೆ. ಯಾವ-ಯಾವ ವಸ್ತು ತರಿಸಿದರೆ ಜೋಡಿಸಿ ಸ್ಫೋಟಕ ತಯಾರಿ ಮಾಡಬಹುದು ಎಂದು ಅಧ್ಯಯನ ಮಾಡಿ, ಕಚ್ಚಾ ವಸ್ತುಗಳನ್ನು ಸಂಗ್ರಹ ಮಾಡಿದ್ದಾನೆ. ನಂತರ ಜೋಡಣೆ ಮಾಡಿದ್ದಾನೆ" ಎಂದು ಪೊಲೀಸ್ ಆಯುಕ್ತರು ಹೇಳಿದರು.
ಸಹೋದ್ಯೋಗಿಗಳಿಗೆ ಅನುಮಾನ
"ಕಚ್ಚಾವಸ್ತುಗಳನ್ನು ತರಿಸುತ್ತಿದ್ದ ಆದಿತ್ಯರಾವ್ ಮೇಲೆ ಮಂಗಳೂರಿನ ಕುಡ್ಲ ಬಾರ್ ಅಂಡ್ ರೆಸ್ಟೋರೆಂಟ್ ಉದ್ಯೋಗಿಗಳಿಗೆ ಅನುಮಾನ ಉಂಟಾಗಿತ್ತು. ಜಿಮ್ ಮಾಡುತ್ತಿದ್ದು, ಅದಕ್ಕಾಗಿ ತರಿಸುತ್ತಿದ್ದೇನೆ ಎಂದು ಸಮಾಜಾಯಿಷಿ ನೀಡಿದ್ದ. ವಾರದಲ್ಲಿ 4 ವೀಕ್ಲಿ ಆಫ್ ಸಿಕ್ಕಿದಾಗ ಕಚ್ಚಾ ವಸ್ತುಗಳನ್ನು ಜೋಡಿಸಿ ಸ್ಫೋಟಕ ತಯಾರು ಮಾಡುತ್ತಿದ್ದ" ಎಂದು ಹರ್ಷ ಹೇಳಿದರು.
ಕಾರ್ಕಳದಿಂದ ಬಾಂಬ್ ಇಡಲು ಬಂದ
"ಜನವರಿ 20ರಂದು ಬಾಂಬ್ ಇಡಲು ತಯಾರಿ ನಡೆಸಿದ್ದ ಆದಿತ್ಯರಾವ್ ಮಂಗಳೂರು ಬಿಟ್ಟು ಕಾರ್ಕಳಕ್ಕೆ ಬಂದು ಕಿಂಗ್ಸ್ ಕೋರ್ಟ್ ಹೋಟೆಲ್ನಲ್ಲಿ ಕೆಲಸಕ್ಕೆ ಸೇರಿದ. ಅಲ್ಲಿಯೇ ಬಾಂಬ್ ತಯಾರಿ ಕೊನೆಯ ಕೆಲಸಗಳನ್ನು ಮುಗಿಸಿದ. ಜನವರಿ 20ರಂದು ಕಾರ್ಕಳದಿಂದ ಬಸ್ನಲ್ಲಿ ಬಂದು ಸ್ಟೇಟ್ ಬ್ಯಾಂಕ್ ಸರ್ಕಲ್ನಲ್ಲಿ ಇಳಿದುಕೊಂಡು ರಾಜ್ ಕುಮಾರ್ ಎಂಬ ಬಸ್ಸಿನಲ್ಲಿ ಏರ್ ಪೋರ್ಟ್ ಕಡೆ ಹೊರಟ. ಟೋಲ್ ಬಳಿ ಹಿಡಿಯಬಹುದು ಎಂದು ಶ್ರೀದೇವಿ ಕಾಲೇಜ್ ಬಳಿ ಇಳಿದು ಸಲೂನ್ಗೆ ಹೋಗಿ ಅಲ್ಲಿ ಹಿಂದಿಯಲ್ಲಿ ಮಾತನಾಡಿ ಒಂದು ಬ್ಯಾಗ್ ಅಲ್ಲಿಟ್ಟು, ಆಟೋದಲ್ಲಿ ಬಾಂಬ್ ಇರುವ ಬ್ಯಾಗ್ ಹಿಡಿದು ಏರ್ ಪೋರ್ಟ್ ತಲುಪಿದ. ಬಳಿಕ ಆಟೋದಲ್ಲಿ ಸಲೂನ್ಗೆ ಬಂದು ಬ್ಯಾಗ್ ತೆಗೆದುಕೊಂಡು ಶಿರಸಿಗೆ ಹೋದ. ಅಲ್ಲಿಂದ ಶಿವಮೊಗ್ಗಕ್ಕೆ ಹೋಗಿ ಅಲ್ಲಿಂದ ಕೆಎಸ್ಆರ್ಟಿಸಿ ಬಸ್ ಮೂಲಕ ಬೆಂಗಳೂರು ತಲುಪಿದ" ಎಂದು ಹರ್ಷ ಹೇಳಿದರು.