ರಮ್ಯಾ ಈಗ ಖುರ್ಚಿಗೆ ಟವಲ್ ಹಾಕೋಕೆ ಬಂದಿದ್ದಾರೆ: ನಲಪಾಡ್
ಮಂಗಳೂರು, ಮೇ 13: ಡಿಸಿಎಂ ಅಶ್ವಥ್ ನಾರಾಯಣ್ ಅವರನ್ನು ಮಾಜಿ ಸಚಿವ ಎಂ.ಬಿ.ಪಾಟೀಲ್ ಭೇಟಿಯಾದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿಕೆ ಖಂಡಿಸಿ ನಟಿ ಮಾಡಿದ್ದ ರಮ್ಯಾ ಟ್ವೀಟ್ ನ್ನು ಯುವ ಕಾಂಗ್ರೆಸ್ ಅಧ್ಯಕ್ಷ ಮಹಮದ್ ಹ್ಯಾರಿಸ್ ನಲಪಾಡ್ ಖಂಡಿಸಿದ್ದಾರೆ.
ಉಡುಪಿಯಲ್ಲಿ ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ನಲಪಾಡ್, ರಮ್ಯಾ ಇಷ್ಟು ದಿನ ಎಲ್ಲಿದ್ದರೂ ಅಂತ ನನಗೂ ಗೊತ್ತಿಲ್ಲ.ಇಷ್ಟು ತಿಂಗಳು,ಇಷ್ಟು ವರ್ಷ ರಮ್ಯಾ ಎಲ್ಲಿದ್ದರು?ಎಲ್ಲೂ ಇಲ್ಲದ ರಮ್ಯಾ ಸಡನ್ನಾಗಿ ಯಾಕೆ ಬಂದಿದ್ದಾರೆ. ರಮ್ಯಾ ತನ್ನ ಅಸ್ತಿತ್ವ ತೋರಿಸಲು ಬಂದಿದ್ದಾರಾ? ನಾನು ಒಬ್ಬಳು ಇದೀನಿ ಅಂತಾ ತೋರಿಸಿಕೊಳ್ಳುತ್ತಿದ್ದಾರಾ? ಯಾವುದಾದರೂ ಒಂದು ಕುರ್ಚಿ ಮೇಲೆ ಟವಲ್ ಹಾಕಲು ರಮ್ಯಾ ಬಂದಿದ್ದಾರಾ. ರಮ್ಯಾ ಬಂದದ್ದು ಯಾಕೆ ಹೀಗೆಲ್ಲಾ ಮಾಡುತ್ತಿರುವುದು ಯಾವುದಕ್ಕೆ ಅಂತ ನಾವು ಅರ್ಥ ಮಾಡಿಕೊಳ್ಳಬೇಕು ಅಂತಾ ನಲಪಾಡ್ ಹೇಳಿದ್ದಾರೆ.
ಡಿ.ಕೆ.ಶಿವಕುಮಾರ್ ಈ ವಿಚಾರದಲ್ಲಿ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಎಂಬಿ ಪಾಟೀಲ್ ಅಶ್ವತ್ ನಾರಾಯಣ್ ಭೇಟಿ ಬಗ್ಗೆ ಮಾಧ್ಯಮದವರು ಪ್ರಶ್ನೆ ಮಾಡಿದ್ದಾರೆ. ಹೌದಪ್ಪ. ಬಂದಿರಬಹುದು ರಕ್ಷಣೆಗೋಸ್ಕರ ಎಂದು ಹೇಳಿದ್ದಾರೆ. ಎಂ.ಬಿ.ಪಾಟೀಲ್ ಹೋಗಿದ್ದಾರೆ ಎಂದು ಎಲ್ಲೂ ಡಿಕೆ ಶಿವಕುಮಾರ್ ಹೇಳಿಲ್ಲ. ಕಾಂಗ್ರೆಸ್ ಎಲ್ಲ ನಾಯಕರು ಒಗ್ಗಟ್ಟಾಗಿದ್ದಾರೆ. ಡಿಕೆಶಿ, ಎಂ.ಬಿ.ಪಾಟೀಲ್ ಸಿದ್ದರಾಮಯ್ಯ ನಾವೆಲ್ಲ ಜೊತೆಗಿದ್ದೇವೆ ಅಂತಾ ನಲಪಾಡ್ ಸ್ಪಷ್ಟಪಡಿಸಿದ್ದಾರೆ.
ರಮ್ಯಾ ಸುಮ್ಮನೆ ಗೊಂದಲ ಸೃಷ್ಠಿ
ರಮ್ಯಾ ಸುಮ್ಮನೆ ಗೊಂದಲ ಸೃಷ್ಠಿ ಮಾಡುತ್ತಿದ್ದಾರೆ. ರಮ್ಯಾ ಈಗ ಎಲ್ಲರ ಗಮನ ಅವರ ಕಡೆಗೆ ಕೇಂದ್ರಿಕರಿಸಲು ನೋಡುತ್ತಿದ್ದಾರೆ. ರಮ್ಯಾ ನಾನು ಇನ್ನೂ ಇದ್ದೀನಿ ಎಂದು ತೋರಿಸಿ ಕೊಳ್ಳುತ್ತಿರಬಹುದು. ನನಗೂ ಒಂದು ಕುರ್ಚಿ ಕೊಡಿ ಎಂದು ಟವಲ್ ಹಾಕುತ್ತಿರಬಹುದು. ಈ ವಿಚಾರಕ್ಕೂ ರಮ್ಯಾಗೂ ಏನು ಸಂಬಂಧ? ರಮ್ಯಾ ಅವರ ಹಳೆಯ ಟ್ವೀಟ್ ಗಳನ್ನು ತೆಗೆದುಕೊಂಡು ನೋಡಿ. ಯಾವುದೋ ಸಿನಿಮಾಗಳ ಬಗ್ಗೆ ಮಾತ್ರ ಟ್ವೀಟ್ ಮಾಡಿಕೊಂಡಿದ್ದರು.ಇತ್ತೀಚಿಗೆ ಅವರು ಯಾವುದೇ ರಾಜಕೀಯ ಟ್ವೀಟ್ ಗಳನ್ನು ಮಾಡಿಲ್ಲ. ರಮ್ಯಾ ಸಡನ್ನಾಗಿ ಯಾಕೆ ನಮ್ಮ ನಾಯಕರ ಮೇಲೆ ಬಿದ್ದಿದ್ದಾರೆ.ಇದರಲ್ಲಿ ಯಾವುದೋ ಒಳ ಉದ್ದೇಶ ಇದೆ. ನಟಿ ರಮ್ಯಾಗೆ ಯಾರು ಹೆಚ್ಚು ಇಂಪಾರ್ಟೆನ್ಸ್ ಕೊಡಬಾರದು ಅಂತಾ ಉಡುಪಿಯಲ್ಲಿ ನಲಪಾಡ್ ಹೇಳಿದ್ದಾರೆ.
ರಮ್ಯಾ ಅವರು ಒಳ್ಳೆಯವರೇ..
ರಮ್ಯಾ ಅವರು ಒಳ್ಳೆಯವರೇ.. ಚಿಕ್ಕ ವಯಸ್ಸಿನಲ್ಲಿ ಸಂಸದರಾದವರು. ರಮ್ಯಾ ಈಗಾಗಲೇ ಒಳ್ಳೆಯ ಸಾಧನೆಗಳನ್ನು ಮಾಡಿದ್ದಾರೆ. ನಾನು ರಮ್ಯಾ ಅವರ ವಿರುದ್ಧ ಇಲ್ಲ. ನಟಿ ರಮ್ಯಾ ಇಂತಹ ಚೀಪ್ ಪಾಲಿಟಿಕ್ಸ್ ಮಾಡಬಾರದು. ರಮ್ಯಾ ಅವರು ಆರೋಗ್ಯ ತಪಾಸಣೆ ಮಾಡಿಸಬೇಕು ಅಂತಾ ಯೂತ್ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಹಮ್ಮದ್ ನಲಪಾಡ್ ಹೇಳಿದ್ದಾರೆ.
ಬಂಡೆ ನಾ ಹಂಗೆಲ್ಲಾ ಒಡೆಯಕ್ಕೆ ಆಗಲ್ಲ
ಯಾರು ಮುಂದಿನ ಮುಖ್ಯಮಂತ್ರಿ ಅನ್ನೋದು ಮುಖ್ಯ ಅಲ್ಲ. ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ಮುಖ್ಯ. ಕಾಂಗ್ರೆಸ್ ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಪಕ್ಷ. ಕಾಂಗ್ರೆಸ್ ಇದ್ದರೆ ಮಾತ್ರ ರಾಜ್ಯ ಮತ್ತು ರಾಷ್ಟ್ರದಲ್ಲಿ ಜನಪರ ಕೆಲಸ ಆಗಲು ಸಾಧ್ಯ. ಕಾಂಗ್ರೆಸ್ ಪಕ್ಷ ಇದ್ದಿದ್ದರೆ ದೇಶದ ನಿರುದ್ಯೋಗ ಸಮಸ್ಯೆ ಇರುತ್ತಿರಲಿಲ್ಲ. ಬಂಡೆ ನಾ ಹಂಗೆಲ್ಲಾ ಒಡೆಯಕ್ಕೆ ಆಗಲ್ಲ ಅಂತಾ ಮಹಮ್ಮದ್ ನಲಪಾಡ್ ಹೇಳಿದ್ದಾರೆ..