ಅರಣ್ಯದಲ್ಲಿ ಅಕ್ರಮ ಕಸಾಯಿಖಾನೆ: ಇಬ್ಬರ ಬಂಧನ
ಮಂಗಳೂರು, ಜನವರಿ 27: ಬೆಳ್ತಂಗಡಿ ತಾಲ್ಲೂಕಿನ ರೇಖ್ಯಾ ಗ್ರಾಮದಲ್ಲಿ ಸಮೀಪ ಅರಣ್ಯ ಪ್ರದೇಶದಲ್ಲಿ ಕಸಾಯಿಖಾನೆ ನಡೆಸುತ್ತಿದ್ದವರ ಮೇಲೆ ಹಿಂದೂ ಕಾರ್ಯಕರ್ತರು ದಾಳಿ ನಡೆಸಿ ಪೊಲೀಸರಿಗೆ ಮಾಹಿತಿ ನೀಡಿದ್ದು ಇಬ್ಬರನ್ನು ಬಂಧಿಸಲಾಗಿದೆ.
ರೆಖ್ಯಾ ಗ್ರಾಮದ ಕಾಯರ್ತೋಡಿ ಸರಕಾರಿ ಅರಣ್ಯದ ವ್ಯಾಪ್ತಿಯೊಳಗೆ ದನವನ್ನು ಹತ್ಯೆ ಮಾಡಿ ಮಾಂಸವನ್ನು ಹದಮಾಡಲಾಗುತ್ತಿತ್ತು. ಇದನ್ನು ರೆಖ್ಯಾ, ಅರಸಿನಮಕ್ಕಿ, ಶಿಶಿಲ ಭಾಗದ ಹಿಂದೂ ಸಂಘಟನೆಯ ಕಾರ್ಯಕರ್ತರು ಪತ್ತೆ ಹಚ್ಚಿದ್ದರು. ಈ ವೇಳೆ ನಾಲ್ವರು ಆರೋಪಿಗಳು ಗಬ್ಬದ ದನವೊಂದನ್ನು ಹತ್ಯೆ ಮಾಡಿ ಸ್ಥಳದಲ್ಲೇ ದನದ ಮಾಂಸದ ಅರ್ಧ ಭಾಗದಷ್ಟು ಹದ ಮಾಡುತ್ತಿದ್ದುದು ಕಂಡು ಬಂದಿದೆ.[ಗೋಹತ್ಯೆ ಸಂಪೂರ್ಣ ನಿಷೇಧ ಸಾಧ್ಯವಿಲ್ಲ: ಸುಪ್ರೀಂಕೋರ್ಟ್]
ಈ ಸಂದರ್ಭ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಇನ್ನಿಬ್ಬರು ಪರಾರಿಯಾಗಿದ್ದಾರೆ. ಘಟನಾ ಸ್ಥಳದಲ್ಲಿ ದನದ ಮಾಂಸ, ಚರ್ಮ, ತಲೆಬುರುಡೆಗಳು ಪತ್ತೆಯಾಗಿವೆ. ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದಲ್ಲದೆ ವೇಣೂರು ಪೋಲಿಸ್ ಠಾಣಾ ವ್ಯಾಪ್ತಿಯ ಸಾವ್ಯ ಗ್ರಾಮದಲ್ಲಿ ಇಂದು ಬೆಳಿಗ್ಗೆ 10 ಗಂಟೆಯ ಸುಮಾರಿಗೆ ಅಕ್ರಮವಾಗಿ ಗೋ ಸಾಗಿಸುತ್ತಿರುವುದನ್ನು ಸಾವ್ಯ ಪೆರಾಡಿ ಭಜರಂಗ ದಳದ ಕಾರ್ಯಕರ್ತರು ಪತ್ತೆ ಹಚ್ಚಿದ್ದಾರೆ. ಬಳಿಕ ಅದನ್ನು ಪೊಲೀಸರಿಗೊಪ್ಪಿಸಿದ್ದಾರೆ.[ಹಾರೋಹಳ್ಳಿ ಕಸಾಯಿಖಾನೆ ವಿರುದ್ಧ ಪ್ರತಿಭಟನೆ]
ಸುಪ್ರೀಂ ಕೋರ್ಟ್ ಗೋಹತ್ಯೆ ಸಂಪೂರ್ಣ ನಿಷೇಧ ಸಾಧ್ಯವಿಲ್ಲ ಎಂದು ಹೇಳಿದೆ ಅಲ್ಲದೆ ರಾಜ್ಯದಲ್ಲಿ ಬರ ಪರಿಸ್ಥತಿ ಆವರಿಸಿದ್ದು, ಗೋವುಗಳೆಲ್ಲಾ ಕಸಾಯಿಖಾನೆ ಸೇರುತ್ತಿವೆ. ಗೋವುಗಳಿಗೆ ಮೇವು ಸಹ ಇಲ್ಲ ಎಂಬ ಚಿಂತೆ ರೈತರದ್ದು, ವ್ಯವಸ್ಥೆಯೇ ಹೀಗಿರುವಾಗ ಏನುಮಾಡಬೇಕು ಎಂಬುದು ಪ್ರಶ್ನೆಯಾಗಿಯೆ ಉಳಿದಿದೆ.