ಮಂಗಳೂರಲ್ಲಿ ವ್ಯಾಲೆಂಟೈನ್ ಡೇ ವಿರೋಧಿಸಿ ಹೂ ಗುಚ್ಛದ ಅಂಗಡಿಯ ಮೇಲೆ ದಾಳಿ
ಮಂಗಳೂರು, ಫೆಬ್ರವರಿ 14: ಮಂಗಳೂರಿನಲ್ಲಿ ಪ್ರೇಮಿಗಳ ದಿನವನ್ನು ವಿರೋಧಿಸಿ ಬಜರಂಗದಳದ ಕಾರ್ಯಕರ್ತರು ಅಂಗಡಿಯೊಂದರ ಮೇಲೆ ದಾಳಿ ನಡೆಸಿದ್ದಾರೆ. ಬೈಕಿನಲ್ಲಿ ಬಂದ ಬಜರಂಗದಳದ ಕಾರ್ಯಕರ್ತರು ಎಂದು ಹೇಳಲಾಗುವ ಯುವಕರ ಗುಂಪೊಂದು ಹೂ ಗುಚ್ಛ ಮಾರಾಟ ಮಾಡುವ ಅಂಗಡಿಯೊಂದರ ಮೇಲೆ ದಾಳಿ ನಡೆಸಿದೆ. ನಗರದ ಕರಂಗಲಪಾಡಿ ಬಳಿ ಈ ಘಟನೆ ನಡೆದಿದೆ.
ಪ್ರೇಮಿಗಳ ದಿನ ಆಚರಿಸದಂತೆ ಕರಪತ್ರ ಹಂಚಿದ ಶ್ರೀರಾಮ ಸೇನೆ
ಕರಂಗಲಪಾಡಿ ವೃತ್ತದ ಬಳಿಯೇ ಇರುವ ಐರೀಶ್ ಹೂ ಗುಚ್ಛ ತಯಾರಿಸಿ ಕೊಡುವ ಅಂಗಡಿ ಮೇಲೆ ದಾಳಿ ನಡೆಸಲಾಗಿದೆ. ವ್ಯಾಲೆಂಟೈನ್ ಡೇ ವಿರೋಧಿಸಿ ಹಿಂದೂ ಸಂಘಟನೆ ಕಾರ್ಯಕರ್ತರು ದಾಳಿ ನಡೆಸಿದ್ದು, ಗುಲಾಬಿ ಹೂಗಳಿಂದ ಶೃಂಗಾರಗೊಂಡಿದ್ದ ಅಂಗಡಿಗೆ ಬಂದ ಯುವಕರ ಪಡೆ ದಾಂಧಲೆ ನಡೆಸಿದೆ.
ಮೈಸೂರಿನಲ್ಲಿರುವ ಈ ಎಲ್ಲಾ ತಾಣಗಳು ಪ್ರೇಮಿಗಳಿಗೆ ಅಚ್ಚುಮೆಚ್ಚು
ಹೂ ಕುಂಡಗಳಿಗೆ ಹಾನಿ ಮಾಡಿದ ಯುವಕರ ಪಡೆ ಕೃತ್ಯ ಎಸಗಿ ಪರಾರಿಯಾಗಿದೆ. ಕದ್ರಿ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ದಾಳಿ ನಡೆಸಿದ ಯುವಕರ ಬಂಧನಕ್ಕೆ ಬಲೆ ಬೀಸಲಾಗಿದೆ.
ಹಿಂದೂ ಸಂಘಟನೆಗಳಿಂದ ಪ್ರೇಮಿಗಳ ದಿನಾಚರಣೆಗೆ ವಿರೋಧವಾಗಿದ್ದ ಹಿನ್ನೆಲೆಯಲ್ಲಿ ಮಂಗಳೂರಲ್ಲಿ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ನಡೆಸಿತ್ತು. ಪ್ರೇಮಿಗಳು ದಿನದಂದು ಗಲಾಟೆಗೆ ಕಾರಣವಾಗಬಾರದೆಂದು ಪೊಲೀಸ್ ಇಲಾಖೆ ಮುಂಜಾಗ್ರತೆ ಕ್ರಮ ವಹಿಸಿತ್ತು. ಆದರೆ ಈ ನಡುವೆಯೂ ದಾಳಿ ನಡೆದಿದೆ.