ಕುಕ್ಕೆ ಸುಬ್ರಹ್ಮಣ್ಯ ಮತ್ತೆ ಅಕ್ರಮ?; ಸಾಮಗ್ರಿ ಖರೀದಿಯಲ್ಲಿ ಕಮಿಷನ್ ಆರೋಪ
ಮಂಗಳೂರು, ಏಪ್ರಿಲ್ 7: ರಾಜ್ಯದ ನಂಬರ್ 1 ಶ್ರೀಮಂತ ದೇವಸ್ಥಾನ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮತ್ತೆ ಅಕ್ರಮದ ಗಂಭೀರ ಆರೋಪ ಕೇಳಿ ಬಂದಿದೆ. ಕುಕ್ಕೆ ದೇವಾಲಯಕ್ಕೆ ಬೇಕಾದ ಸಾಮಗ್ರಿಗಳನ್ನು ಟೆಂಡರ್ ಕರೆಯದೆ ನೇರವಾಗಿ ಮಾರುಕಟ್ಟೆಯಿಂದ ಖರೀದಿ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ.
ಸಾಮಾನ್ಯ ಮಾರುಕಟ್ಟೆ ದರಕ್ಕಿಂತಲೂ ಹೆಚ್ಚಿನ ದರಕ್ಕೆ ಖರೀದಿಸಿ ಈ ಮೂಲಕ ದೇವಸ್ಥಾನದ ಬೊಕ್ಕಸಕ್ಕೆ ಆಡಳಿತ ವರ್ಗ ಕೋಟಿ ಕೋಟಿ ನಷ್ಟ ಮಾಡುತ್ತಿರುವ ಬಗ್ಗೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಹಿತರಕ್ಷಣಾ ವೇದಿಕೆ ಆರೋಪ ಮಾಡಿದೆ.
ಹಾವು ಕಡಿತಕ್ಕೆ ಸುಬ್ರಹ್ಮಣ್ಯದಲ್ಲಿ ಆರಂಭವಾಗಲಿದೆ ಚಿಕಿತ್ಸಾ ಕೇಂದ್ರ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಕೇವಲ ರಾಜ್ಯ ಮಾತ್ರವಲ್ಲದೇ ಹೊರ ರಾಜ್ಯದಿಂದಲೂ ಸಾಕಷ್ಟು ಭಕ್ತರು ಬರುತ್ತಾರೆ. ಹೀಗಾಗಿ ರಾಜ್ಯದ ಅತೀ ಹೆಚ್ಚು ಆದಾಯವನ್ನು ಗಳಿಸುವ ನಂಬರ್ 1 ದೇವಸ್ಥಾನದಲ್ಲಿ ಪ್ರತಿವರ್ಷ ಕುಕ್ಕೆ ಹೆಸರೇ ಬರುತ್ತದೆ. ಆದರೆ ನಂಬರ್ ಒನ್ ಆದಾಯ ಗಳಿಸುವ ಶ್ರೀಕ್ಷೇತ್ರದಲ್ಲಿ ದೇವಸ್ಥಾನದ ಆಡಳಿತ ವರ್ಗವೇ ದೇವಸ್ಥಾನದ ಬೊಕ್ಕಸಕ್ಕೆ ನಷ್ಟ ಉಂಟು ಮಾಡುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಹಿತರಕ್ಷಣಾ ವೇದಿಕೆ ಈ ಆರೋಪ ಮಾಡಿದ್ದು, ದೇವಸ್ಥಾನಕ್ಕೆ ನಿತ್ಯ ವಿನಿಯೋಗಕ್ಕೆ ಖರೀದಿಸಲಾಗುವ ದಿನಸಿ ಸಾಮಗ್ರಿಗಳನ್ನು ಸಾಮಾನ್ಯ ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ದರಕ್ಕೆ ಖರೀದಿ ಮಾಡಲಾಗುತ್ತಿದೆ ಎಂದು ಹೇಳಿದೆ. ಈ ದುಬಾರಿ ಖರೀದಿ ಹಗರಣದಲ್ಲಿ ಯಾರಿಗಾದರೂ ಕಮಿಷನ್ ಇದೆಯಾ, ಇದರ ಬಗ್ಗೆ ಸರ್ಕಾರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದೆ.
ಈ ಬಗ್ಗೆ ಆರೋಪ ಮಾಡಿರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಮಹೇಶ್ ಕರಿಕ್ಕಳ, ಕೋಟ್ಯಂತರ ರೂಪಾಯಿ ಆದಾಯ ಇರುವ ದೇವಸ್ಥಾನದಲ್ಲಿ ನಿತ್ಯ ಉಪಯೋಗಿಸುವ ವಸ್ತುಗಳಿಗೆ ಮಂಗಳೂರಿನ ಅಂಗಡಿಯನ್ನು ಆಶ್ರಯಿಸಲಾಗಿದೆ. ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ಅಂಗಡಿಗೆ ಸಾಮಗ್ರಿಗಳ ಬಿಲ್ ಕಟ್ಟಲಾಗುತ್ತಿದೆ. ಟೆಂಡರ್ ಕರೆದು ದೇವಸ್ಥಾನದ ಬೊಕ್ಕಸ ಉಳಿಸುವ ಕಾರ್ಯಮಾಡಬೇಕಾದ ಅಧಿಕಾರಿಗಳು ಮಂಗಳೂರಿನ ಅಂಗಡಿಗೆ ಲಕ್ಷಾಂತರ ರೂಪಾಯಿ ವ್ಯವಹಾರ ಮಾಡುತ್ತಿರುವ ಹಿಂದೆ ಅನುಮಾನ ಇದೆ ಅಂತಾ ಹೇಳಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯಕ್ಕೆ ಬರುವ ಭಕ್ತರು ಒಂದಲ್ಲ ಒಂದು ಸೇವೆ ಮಾಡುತ್ತಾರೆ. ಕ್ಷೇತ್ರಕ್ಕೆ ಬರುವಂತಹ ಸಾವಿರಕ್ಕೂ ಹೆಚ್ಚು ಭಕ್ತರಿಗೆ ಅನ್ನಸಂತರ್ಪಣೆಯು ನಡೆಯುತ್ತದೆ. ಈ ರೀತಿ ಸೇವೆಗೆ ಬಳಸುವುದಕ್ಕೆ ಪೂಜೆ ಸಾಮಗ್ರಿ, ಅನ್ನಸಂತರ್ಪಣೆಗೆ ದಿನಸಿ ಸಾಮಾಗ್ರಿಗೆ ಕೋಟಿ ರೂ.ಗಳು ಬೇಕಾಗುತ್ತದೆ. ಹೀಗಾಗಿ ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ಸಾರ್ವಜನಿಕ ದೇವಸ್ಥಾನವಾಗಿರುವ ಈ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಈ ಸಾಮಾಗ್ರಿಗಳ ಖರೀದಿಗೆ ಪಾರದರ್ಶಕ ಟೆಂಡರ್ ಖರಿಯಬೇಕಿತ್ತು ಎಂಬುದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಹಿತರಕ್ಷಣಾ ವೇದಿಕೆಯ ವಾದವಾಗಿದೆ.
ಆದರೆ ದೇವಸ್ಥಾನದ ಆಡಳಿತ ವರ್ಗ ಈ ರೀತಿ ಟೆಂಡರ್ ಕರೆಯದೆ ನೇರವಾಗಿ ಮಂಗಳೂರಿನ ಜನತಾ ಬಜಾರ್ನಿಂದ ಮಾರುಕಟ್ಟೆ ದರಕ್ಕಿಂತಲೂ ಹೆಚ್ಚಿನ ದರಕ್ಕೆ ಸಾಮಗ್ರಿ ಖರೀದಿಸಲಾಗುತ್ತಿದೆ, ಇದರ ಹಿಂದೆ ವೈಯಕ್ತಿಕ ಹಿತಾಸಕ್ತಿ ಅಡಗಿದೆ ಎಂದು ಹಿತರಕ್ಷಣಾ ವೇದಿಕೆ ಆರೋಪಿಸುತ್ತಿದೆ.
ಭಕ್ತರ ಕಾಣಿಕೆ ಹಣದಲ್ಲಿ ದೇವರ ಭಂಡಾರದಿಂದ ಈ ರೀತಿ ದುಂದುವೆಚ್ಚ ಮಾಡುವುದು ಸರಿಯಲ್ಲ, ಇದೊಂದು ಹಗರಣ ಎಂದು ಹೇಳಲಾಗುತ್ತಿದೆ. ಆದರೆ ದೇವಸ್ಥಾನಕ್ಕೆ ಸಾಮಾಗ್ರಿ ಖರೀದಿಗೆ ಟೆಂಡರ್ ಕರೆಯದೇ ನೇರವಾಗಿ ಮಾರುಕಟ್ಟೆಯಿಂದ ಖರೀದಿಸಬಹುದು ಎಂಬ ಸರ್ಕಾರದ ಸುತ್ತೋಲೆ ಇದೆ ಎಂದು ಸಹ ಹೇಳಲಾಗುತ್ತಿದೆ. ಹೀಗಾಗಿ ದೇವಸ್ಥಾನದ ಆಡಳಿತ ಮಂಡಳಿಯು ನಮ್ಮ ವ್ಯವಹಾರ ಪಾರದರ್ಶಕವಾಗಿದೆ, ಗರಿಷ್ಠ ಪ್ರಮಾಣದ ಸಾಮಗ್ರಿ ಬೇಕಾಗಿರುವುದರಿಂದ ಮಂಗಳೂರಿನ ದೊಡ್ಡ ವಿತರಕರಿಂದ ಖರೀದಿಸಲಾಗುತ್ತಿದೆ. ಎಲ್ಲಾ ವ್ಯವಹಾರಕ್ಕೂ ದಾಖಲೆಗಳಿವೆ. ಯಾವುದೇ ಅಕ್ರಮ ನಡೆದಿಲ್ಲ ಅಂತಾ ಸ್ಪಷ್ಟನೆ ನೀಡಿದೆ.