ಮಂಗಳೂರು: ಸಮಾಜ ಘಾತುಕ ಕೆಲಸ; ಶಾಸಕ ಸ್ಥಾನಕ್ಕೆ ಸ್ಪರ್ಧಿಸಿದ್ದ ಅಭ್ಯರ್ಥಿಯ ಬಂಧನ
ಮಂಗಳೂರು, ಏಪ್ರಿಲ್ 19: ಕ್ರಿಮಿನಲ್ ಯಾವ ವೇಷದಲ್ಲಿ ಬೇಕಾದರೂ ಇರಬಹುದು ಎಂಬುವುದಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಈ ವ್ಯಕ್ತಿಯೇ ಪ್ರತ್ಯಕ್ಷ ಉದಾಹರಣೆಯಾಗಿದ್ದಾನೆ.
2018ರ ವಿಧಾನಸಭೆ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವ್ಯಕ್ತಿ ಇಂದು ದರೋಡೆಕೋರರ ಗ್ಯಾಂಗ್ ಲೀಡರ್ ಆಗಿ ಕಂಬಿ ಎಣಿಸುತ್ತಿದ್ದಾನೆ. ಇತ್ತೀಚೆಗೆ ವಿವಿಧ ಪೊಲೀಸ್ ಠಾಣೆಗಳಲ್ಲಿ 28 ಪ್ರಕರಣಗಳಿಗೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ಡಕಾಯಿತರನ್ನು ಮಂಗಳೂರು ಪೊಲೀಸರು ಸೆರೆ ಹಿಡಿದಿದ್ದರು.
ಆದರೆ ಈ ಗ್ಯಾಂಗಿನ ಕಿಂಗ್ಪಿನ್ ಯಾರು ಎಂದು ಹುಡುಕಾಡುತ್ತಿದ್ದ ವೇಳೆ ಪೊಲೀಸರೇ ಒಂದು ಕ್ಷಣ ಬೆಚ್ಚಿ ಬಿದ್ದಿದ್ದರು. ಅಷ್ಟಕ್ಕೂ ಪೊಲೀಸರು ಅವಕ್ಕಾಗುವುದಕ್ಕೆ ಕಾರಣ, ಪೊಲೀಸರು ಬಂಧನ ಮಾಡಿದ್ದು 2018 ರ ಎಂಎಲ್ಎ ಪಕ್ಷೇತರ ಅಭ್ಯರ್ಥಿಯನ್ನು.
ಪ್ರಕರಣ ಹಿನ್ನಲೆ
ಕಳೆದ ಮಾರ್ಚ್ ತಿಂಗಳಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ತುಕ್ರಪ್ಪ ಶೆಟ್ಟಿ ಎಂಬುವರ ಮನೆಗೆ 9 ಜನ ಡಕಾಯಿತರ ತಂಡ 2.30ರ ಸುಮಾರಿಗೆ ದಾಳಿಯಿಟ್ಟು 1 ಕೋಟಿ ಮೌಲ್ಯದ ಚಿನ್ನಾಭರಣವನ್ನು ಲೂಟಿ ಮಾಡಿತ್ತು. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ತುಕ್ರಪ್ಪ ಅವರ ಪತ್ನಿಯ ಹೊಟ್ಟೆಗೆ ಎರಡು ಬಾರಿ ಚಾಕುವಿನಿಂದ ಇರಿದಿದ್ದ ತಂಡ ಪರಾರಿಯಾಗಿತ್ತು.
ಈ ಪ್ರಕರಣ ಹಳ್ಳ ಹಿಡೀತು ಎಂದು ಪೊಲೀಸರು ಕೈ ಬಿಟ್ಟಿದ್ದರು. ಆದರೆ ಮೂಡಬಿದರೆ ಪೊಲೀಸರು ಮೊದಲು 9 ನಂತರ 6 ಜನ ಆರೋಪಿಗಳನ್ನು ಬಂಧಿಸಿದರು. ಒಟ್ಟು 15 ಮಂದಿಯನ್ನು ಪೊಲೀಸರು ಬಂಧನ ಮಾಡಿದ್ದರು.
ಇನ್ನು ಪೊಲೀಸರು ಈ ಗುಂಪಿನ ಕಿಂಗ್ಪಿನ್ಗಳಿಗಾಗಿ ಶೋಧ ನಡೆಸುತ್ತಿದ್ದರು. ಹೀಗೆ ಶೋಧ ನಡೆಸುವಾಗಲೇ ಹಿಂದಿನ ವಿಧಾನಸಭೆ ಚುನಾವಣೆಗೆ ಪುತ್ತೂರು ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಕೆದಂಬಾಡಿ ಗ್ರಾಮದ ನಿವಾಸಿ ಅಬ್ದುಲ್ ಬಶೀರ್ ಬಂಧನವಾಗಿರುವ ಆರೋಪಿ. 2018ರ ವಿಧಾನಸಭಾ ಚುನಾವಣೆಗೆ ಪುತ್ತೂರಿನಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಸೋತಿದ್ದ. ಸದ್ಯ ಈತನಿಗೂ ಡಕಾಯಿತಿ ಗ್ಯಾಂಗ್ ಗೂ ನಂಟಿದೆ ಅನ್ನೊದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.
ಡಕಾಯಿತರಿಗೆ ಬೇಲ್ ಕೊಡಿಸೋದು, ಹಣದ ಸಹಾಯವನ್ನು ಬಶೀರ್ ಮಾಡುತ್ತಿದ್ದ. ಅಲ್ಲದೆ ಈ ಡಕಾಯಿತರ ತಂಡವನ್ನು ದೊಡ್ಡದಾಗಿ ಬೆಳೆಸಿದ ಆರೋಪ ಕೂಡಾ ಬಶೀರ್ ಮೇಲಿದೆ. ಡಕಾಯಿತರನ್ನು ಮುಂದಿಟ್ಟುಕೊಂಡು ಹಣದ ಸೆಟಲ್ಮೆಂಟ್ ಮಾಡಿಸುತ್ತಿದ್ದ ಅನ್ನೋದು ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ. ಅಲ್ಲದೆ ಸಮಾಜಸೇವೆಯ ಹೆಸರಲ್ಲಿ ಸಮಾಜ ಘಾತುಕ ಕೆಲಸ ಮಾಡಿರೋದು ಕೂಡಾ ಬೆಳಕಿಗೆ ಬಂದಿದೆ. ಸದ್ಯ ಬಶೀರ್ ನನ್ನು ಪೊಲೀಸರು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.
ಇನ್ನು ತನಿಖೆ ಮುಂದುವರೆಸಿದ ಪೊಲೀಸರು ಈತನ ಹಿಂದೆ ಯಾರಿದ್ದಾರೆ ಅನ್ನೊದನ್ನು ಕೂಡ ಹುಡುಕುತ್ತಿದ್ದಾರೆ. ಈ ತಂಡದ ಸಾಕಷ್ಟು ಜನರು ಬಂಧನವಾಗಬೇಕಿದೆ. ಅದೇನೆ ಇದ್ರೂ ಶಾಸಕನಾಗುವ ಕನಸು ಕಂಡವನು ಕ್ರಿಮಿನಲ್ ಚಟುವಟಿಕೆ ಮಾಡುತ್ತಿರೋದು ವಿಪರ್ಯಾಸವಾಗಿದೆ.