ತುಳುನಾಡಿನ ಇತಿಹಾಸ ಸಾರುವ ಅಪೂರ್ವ ಶಾಸನ ಪತ್ತೆ
ಮಂಗಳೂರು, ಸೆಪ್ಟೆಂಬರ್ 18: ತುಳುನಾಡಿನ ಇತಿಹಾಸ ಸಾರುವ ಅಪೂರ್ವ ಶಾಸನವೊಂದು ಪತ್ತೆಯಾಗಿದೆ. ಶ್ರೀ ಕ್ಷೇತ್ರ ಪೊಳಲಿ ದೇಗುಲದ ಜೀರ್ಣೋದ್ಧಾರ ಕಾಮಗಾರಿ ಸಂದರ್ಭದಲ್ಲಿ ಈ ಶಾಸನ ಪತ್ತೆಯಾಗಿದೆ.
ಬಂಟ್ವಾಳದ ಪುರಾಣ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಾಲಯದ ಜೀರ್ಣೋದ್ಧಾರ ಕಾರ್ಯಗಳು ತ್ವರಿತಗತಿಯಿಂದ ಸಾಗುತ್ತಿದ್ದು ಈ ಸಂದರ್ಭದಲ್ಲಿ ನಡೆಯುತ್ತಿದ್ದ ಕಾಮಗಾರಿ ವೇಳೆ ಈ ಅಪೂರ್ವ ಶಿಲಾಶಾಸನ ಪತ್ತೆಯಾಗಿದೆ. ಈ ಶಾಸನ ಅಳುಪ ವಂಶದ ಅರಸ ಕುಲಶೇಖರನ ಆಳ್ವಿಕೆಯ ಕಾಲದ್ದು ಎಂದು ಹೇಳಲಾಗಿದೆ.
ಈ ಶಾಸನ ಸುಮಾರು 28 ಇಂಚು ಎತ್ತರ ಹಾಗೂ ಮೇಲ್ಭಾಗದಲ್ಲಿ ಸುಮಾರು 24 ಇಂಚು ಅಗಲವಿದ್ದು, ನೋಡಲು ಸುಂದರವಾಗಿದೆ. ಈ ಶಿಲಾ ಫಲಕದಲ್ಲಿ ಅಕ್ಷರಗಳನ್ನು ಇಪ್ಪತ್ತು ಸಾಲುಗಳಲ್ಲಿ ಅತ್ಯಂತ ಸ್ಫುಟವಾಗಿ ಕೆತ್ತಲಾಗಿದೆ. ಶಾಸನ ಫಲಕದ ತಳಭಾಗದಲ್ಲಿ ಎರಡು ಸಿಂಹಗಳ ಮಧ್ಯೆ ಒಬ್ಬ ವ್ಯಕ್ತಿಯು ರಾಜ ಭಂಗಿಯಲ್ಲಿ ಸ್ತ್ರೀಯೊಂದಿಗೆ ಆಸೀನರಾಗಿರುವ ಚಿತ್ರವಿದೆ.
ಈ ಶಾಸನವನ್ನು ಪರಿಶೀಲಿಸಿ ಅಧ್ಯಯನ ಮಾಡಿದ ಇತಿಹಾಸ ಸಂಶೋಧಕ ಡಾ. ಗಣಪಯ್ಯ ಭಟ್ ಇದರ ಕುರಿತು ವಿವರಣೆ ನೀಡಿದ್ದಾರೆ. "ಅಳುಪ ವಂಶದ ಅರಸನಾದ ಕುಲಶೇಖರ ವೀರ ಸಾಹಸ ಮೆರೆದ ವಿಚಾರವನ್ನು ಈ ಶಾಸನದಲ್ಲಿ ವಿವರಿಸುತ್ತದೆ" ಎಂದಿದ್ದಾರೆ.
ಪ್ರಸ್ತುತ ಪೊಳಲಿಯಲ್ಲಿ ಬೆಳಕಿಗೆ ಬಂದಿರುವ ಕುಲಶೇಖರ ಪಾಂಡ್ಯ ಪಟ್ಟಿ ದೇವನ ಈ ಶಾಸನವು ಅಳುಪ ಯುಗದ ತುಳುನಾಡಿನ ಇತಿಹಾಸದ ಒಂದು ಮಹತ್ವಪೂರ್ಣ ದಾಖಲೆ ಎಂದು ಪರಿಗಣಿಸಲಾಗಿದೆ. ದೇವಾಲಯದ ಜೀರ್ಣೋದ್ಧಾರ ಕಾಮಗಾರಿ ಸಂದರ್ಭದಲ್ಲಿ ಶಾಸನ ಮಾತ್ರವಲ್ಲದೆ ಮೂರು ವೀರಗಲ್ಲು ಕೂಡಾ ತುಂಡಾದ ಸ್ಥಿತಿಯಲ್ಲಿ ಪತ್ತೆಯಾಗಿವೆ.