ಪ್ರಚೋದನಕಾರಿ ಹೇಳಿಕೆ: ಯುಟಿ ಖಾದರ್ ವಿರುದ್ಧ ಎಫ್ಐಆರ್ ದಾಖಲು
ಮಂಗಳೂರು, ಡಿಸೆಂಬರ್ 22: ಪ್ರಚೋದನಕಾರಿ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಮಾಜಿ ಸಚಿವ ಯು.ಟಿ. ಖಾದರ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಕಳೆದ ಬುಧವಾರ ದೇಶವೇ ಹೊತ್ತಿ ಉರಿಯುತ್ತದೆ ಎನ್ನುವ ಪ್ರಚೋದನಕಾರಿ ಹೇಳಿಕೆ ನೀಡಿದ್ದರು. ಇವರ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿತ್ತು.
ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಂದೇಶ್ ಕುಮಾರ್ ಶೆಟ್ಟಿ ದೂರಿನ ಮೇಲೆ ಮಂಗಳೂರಿನ ಪಾಂಡೇಶ್ವರ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಡಿಸಿ ಕಚೇರಿ ಎದುರು ಯುಟಿ ಖಾದರ್ ಈ ಹೇಳಿಕೆಯನ್ನು ನೀಡಿದ್ದರು. ಒಂದೆಡೆ ಮಂಗಳೂರಿನಾದ್ಯಂತ ಸಿಎಎ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ. ಗಲಭೆಯಲ್ಲಿ ಇಬ್ಬರನ್ನು ಪೊಲೀಸರು ಹತ್ಯೆ ಮಾಡಿದ್ದಾರೆ.
ಅದರ ವಿರುದ್ಧವೂ ಪ್ರತಿಭಟನೆಗಳು ನಡೆಯುತ್ತಿವೆ. ಇನ್ನು 48 ಗಂಟೆಗಳ ಕಾಲ ಮೊಬೈಲ್ ಇಂಟರ್ನೆಟ್ ಸ್ಥಗಿತಗೊಳಿಸಲಾಗಿತ್ತು. ಇದೀಗ 144 ಸೆಕ್ಷನ್ ಕೊಂಚ ಸಡಿಲಗೊಳಿಸಲಾಗಿದೆ.
ಮಂಗಳೂರು ಗಲಭೆಗೆ ಯುಟಿ ಖಾದರ್ ಪ್ರಚೋದನಕಾರಿ ಭಾಷಣವೇ ಕಾರಣ: ಲಕ್ಷ್ಮಣ ಸವದಿ
ಇಂಟರ್ನೆಟ್ ಶನಿವಾರ ಸಂಜೆಯಿಂದ ಮತ್ತೆ ಆರಂಭಗೊಂಡಿದೆ. ಆದರೂ ಮಂಗಳೂರಲ್ಲಿ ಇನ್ನೂ ಪರಿಸ್ಥಿತಿ ಸಹಜ ಹಂತಕ್ಕೆ ತಲುಪಿಲ್ಲ, ಬೂದಿ ಮುಚ್ಚಿದ ಕೆಂಡದಂತಾಗಿದೆ.ಮಂಗಳೂರು ಗಲಭೆಗೆ ಮಾಜಿ ಸಚಿವ ಯುಟಿ ಖಾದರ್ ಅವರ ಪ್ರಚೋದನಕಾರಿ ಭಾಷಣವೇ ಕಾರಣ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಆರೋಪಿಸಿದ್ದರು.
ಪೌರತ್ವ ಕಾಯ್ದೆಯಿಂದ ರಾಷ್ಟ್ರದಲ್ಲಿ ಭದ್ರತೆ ಮತ್ತು ಶಾಂತಿಗೆ ಅವಕಾಶ ಸಿಗುತ್ತದೆ. ಆದರೆ ಅದನ್ನು ತಿಳಿಯದೆ ಯುಟಿ ಖಾದರ್ ನೀಡುತ್ತಿರುವ ಪ್ರಚೋದನಕಾರಿ ಹೇಳಿಕೆಯಿಂದ ಗಲಭೆ ನಡೆಯುತ್ತಿದೆ ಎಂದು ಹೇಳಿದ್ದರು.