ಎಲ್ಲರಂತಲ್ಲ ಮಂಗಳೂರು ಎಳನೀರು ವ್ಯಾಪಾರಿ 'ಮುರುಗನ್ ಮಾಮ'
ಇವರು ಬದುಕಿನಲ್ಲಿ ಬಡವರು, ಹೃದಯದಲ್ಲಿ ಶ್ರೀಮಂತ. ಮಕ್ಕಳ ಸಂತೋಷದಲ್ಲಿ ತಮ್ಮ ಬದುಕನ್ನು ಅರಳಿಸಿಕೊಳ್ಳುತ್ತಿರುವ ಇವರು ಮಾಡುತ್ತಿರುವುದು ಜಗಮೆಚ್ಚುವ ಕೆಲಸ. ಹೌದು ಮಂಗಳೂರಿನ ವ್ಯಾಪಾರಿಯೊಬ್ಬರು ಸರ್ಕಾರಿ ಶಾಲೆ ಮಕ್ಕಳಿಗೆ ಸುಮಾರು ವರ್ಷಗಳಿಂದ ಉಚಿತವಾಗಿ ಎಳನೀರು ಹಾಗೂ ಆರೋಗ್ಯದ ಖಣಿಯಾಗಿರುವ ತಾಳೆಹಣ್ಣು (ಈರೋಳ್) ನೀಡುತ್ತಿದ್ದಾರೆ.
ಹೌದು ಇವರ ಹೆಸರೇ ಮುರುಗನ್. ಇವರು ಮೂಲತಃ ಕನ್ಯಾಕುಮಾರಿಯವರು. ಆದರೆ ಮಂಗಳೂರಿನ ಬಲ್ಲಾಳ್ ಬಾಗ್ ನಲ್ಲಿ ಕಳೆದ ಹನ್ನೆರಡು ವರ್ಷಗಳಿಂದ ಎಳನೀರು ವ್ಯಾಪಾರ ಮಾಡುತ್ತಾ ಬಂದಿದ್ದಾರೆ. ಮಕ್ಕಳು ಇವರನ್ನು ಪ್ರೀತಿಯಿಂದ 'ಮುರುಗನ್ ಮಾಮ' ಎಂದು ಕರೆಯುತ್ತಾರೆ.
ಮುರುಗನ್ ಅವರ ಕಣ್ಣಲ್ಲಿ ಕಾಣುವ ಧನ್ಯತಾ ಭಾವ ನೋಡೋದೆ ಒಂದು ಖುಷಿ. ಮಕ್ಕಳನ್ನು ಇವರು ಎಷ್ಟು ಇಷ್ಟಪಡುತ್ತಾರೆಂದರೆ ಮಕ್ಕಳ ಶಾಲೆಗೆ ರಜೆ ಇದ್ದರೆ ಸಾಕು ಇಡೀ ದಿನ ಫುಲ್ ಮೂಡ್ ಔಟ್ ಆಗಿರ್ತೇನೆ. ಬದುಕಲ್ಲಿ ಏನೋ ಕಳೆದುಕೊಂಡಿದ್ದೇನೆ ಅನಿಸಲಿಕ್ಕೆ ಶುರುವಾಗುತ್ತದೆ ಎನ್ನುತ್ತಾರೆ ಮುರುಗನ್.
ಮುರುಗನ್ ಮಾರುವ ತಾಳೆಹಣ್ಣಿಗೆ ಎಲ್ಲಿಲ್ಲದ ಬೇಡಿಕೆ. ತಾಳೆಹಣ್ಣಿಗಾಗಿ ಜನರು ಇವರನ್ನು ಹುಡುಕಿಕೊಂಡು ಬರುತ್ತಾರೆ. ಜನಪ್ರಿಯ ಕ್ಯಾಟರಿಂಗ್ ಸಂಸ್ಥೆಯವರು ಇವರಿಂದಲೇ ತಾಳೆಹಣ್ಣು ಪಡೆದುಕೊಂಡು ಹೋಗುತ್ತಾರೆ. ವೆಲ್ ಕಮ್ ಡ್ರಿಂಕ್ ಆಗಿ ತಾಳೆಹಣ್ಣು ಜ್ಯೂಸ್ ಹಾಗೂ ಎಳನೀರು ಇಲ್ಲಿ ಪ್ರಸಿದ್ಧಿ ಪಡೆದಿದೆ.[ಬೆಂಗಳೂರಲ್ಲಿ ಉಚಿತ ಎಳನೀರು! ಹೀಗೂ ಉಂಟೆ?]
ಉತ್ತಮ ಕೆಲಸ ಮಾಡಲು ಅಗರ್ಭ ಶ್ರೀಮಂತರಾಗಬೇಕೆಂದಿಲ್ಲ. ನಾವು ಮಾಡುವ ಸಣ್ಣ ಕೆಲಸದಿಂದಲೂ ಜನರ ಮನಸ್ಸನ್ನು ಗೆಲ್ಲಲು ಸಾಧ್ಯ ಎಂಬುದಕ್ಕೆ ಮುರುಗನ್ ಸಾಕ್ಷಿಯಾಗಿದ್ದಾರೆ. ಮುಂದೆ ಓದಿ....
ಮುರುಗನ್ ಆಸೆ ಏನು?
ಮುರುಗನ್ ಅವರಿಕೆ ಗಲ್ಫ್ ಹಾಗೂ ಅಮೆರಿಕಾದಂತಹ ಹಲವು ವಿದೇಶಗಳಲ್ಲಿ ವ್ಯಾಪಾರ ಮಾಡುವ ಅವಕಾಶವಿದ್ದರೂ ಅದನ್ನೆಲ್ಲಾ ನಿರಾಕರಿಸಿದ ಇವರು ನನ್ನ ಸೇವೆ ತಾಯ್ನಾಡಿಗೆ ಮೀಸಲಾಗಬೇಕು ಎಂದು ಹೇಳುತ್ತಾರೆ.
ಮುರುಗನ್ ಗೆ ಅಜ್ಜ ಹೇಳಿರುವುದೇನು?
ಇಷ್ಟೆಲ್ಲಾ ಬೇಡಿಕೆ ಕುದುರುತ್ತಿರುವುದು ತಾನು ಮಾಡುತ್ತಿರುವ ಒಂದು ಉತ್ತಮ ಕೆಲಸದಿಂದಲೇ ಎಂಬುದು ಮುರುಗನ್ ನಂಬಿಕೆ. ಹಿಂದೆ ಇವರ ಅಜ್ಜ ಕೂಡಾ ಬಡಮಕ್ಕಳಿಗೆ ಈರೋಳ್ ಹಂಚುತ್ತಿದ್ದಾರಂತೆ. ನೀನೂ ಹೀಗೆಯೇ ಮಾಡು ವ್ಯಾಪಾರದಲ್ಲಿ ನಷ್ಟ ಕಾಣುವುದಿಲ್ಲ ಎಂಬ ಅಜ್ಜನ ಕಿವಿಮಾತನ್ನು ಮುರುಗನ್ ಸಾಕ್ಷಿಕರಿಸಿದ್ದಾರೆ.[ತೆಂಗಿನಕಾಯಿಗೆ ಜುಟ್ಟು ಶೃಂಗಾರ!]
ಮುರುಗನ್ ಕನ್ಯಾಕುಮಾರಿಯಲ್ಲೂ ಸಮಾಜ ಸೇವಕ
ವ್ಯಾಪಾರ ಇರುವುದು ಬರೀ ಮಂಗಳೂರಿನಲ್ಲಿ ಮಾತ್ರವಲ್ಲ; ಕನ್ಯಾಕುಮಾರಿಯಲ್ಲಿಯೂ ಇದೆ. ಅಲ್ಲಿಯೂ ಇವರು ಬಡಮಕ್ಕಳಿಗೆ ಈರೋಳ್ ಅಥವಾ ಅದರ ಜ್ಯೂಸ್ ನೀಡುತ್ತಾರೆ. ಇವರ ಇಬ್ಬರು ಮಕ್ಕಳು ಕನ್ಯಾಕುಮಾರಿಯಲ್ಲೇ ಇದ್ದು, ಅಲ್ಲಿ ಜೀರ್ಣಾವಸ್ಥೆಯಲ್ಲಿದ್ದ ನಾರಾಯಣ ಸ್ವಾಮಿ ದೇವಸ್ಥಾನವನ್ನು ನವೀಕರಿಸಿದ್ದಾರೆ. ಅವರೇ ಈ ದೇವಸ್ಥಾನದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.
ಮುರುಗನ್ ಕೆಲಸ ಮೆಚ್ಚಿದ ಜನ ಮಾಡುವುದೇನು?
ಮುರುಗನ್ ಮಕ್ಕಳಿಗೆ ಈರೋಳ್ ಹಂಚುತ್ತಿರುವುದನ್ನು ನೋಡಿದ ಕೆಲವರು ಮಕ್ಕಳಿಗೆ ಇನ್ನಷ್ಟು ಹಣ್ಣು ಕೊಡಿ ಎಂದು ಹಾರೈಸುವುದಲ್ಲದೆ, ದುಡ್ಡು ಕೂಡಾ ಕೊಟ್ಟು ಹೋಗುತ್ತಾರಂತೆ. ಈರೋಳ್ ವಿತರಕರು ಕೂಡಾ ಕೆಲವೊಮ್ಮೆ ಮಕ್ಕಳಿಗಾಗಿಯೇ ಈರೋಳ್ ಇಟ್ಟು ಹೋಗುತ್ತಾರಂತೆ.