ದಕ್ಷಿಣ ಕನ್ನಡದಲ್ಲಿ ಹಿಂದೂ ಯುವತಿಯ ಮದುವೆಗೆ ನೆರವಾದ ಮುಸ್ಲಿಂ ಕುಟುಂಬ!
ಮಂಗಳೂರು, ಜುಲೈ 13: ದಕ್ಷಿಣ ಕನ್ನಡ ಜಿಲ್ಲೆ ಕೋಮು ಸೂಕ್ಷ್ಮಪ್ರದೇಶ ಎಂಬ ಹಣೆಪಟ್ಟಿಯನ್ನು ಹೊಂದಿದೆ. ಆದರೆ ಈ ಹಣೆಪಟ್ಟಿಯೂ ಕೆಲವೊಮ್ಮೆ ಆಗಸದಲ್ಲಿ ಕಾರ್ಮೋಡ ಸರಿದು ಬೆಳ್ಳಿಮೋಡಗಳು ಗೋಚರವಾಗುವಂತೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೌಹಾರ್ದತೆ ಮೇಳೈಸುತ್ತದೆ.
ಇದಕ್ಕೊಂದು ಉದಾಹರಣೆ ಎಂಬಂತೆ ಭಾರೀ ಆರ್ಥಿಕ ಸಂಕಷ್ಟದಲ್ಲಿದ್ದ ಹಿಂದೂ ಯುವತಿಯ ಮದುವೆಗೆ ಮುಸ್ಲಿಂ ಕುಟುಂಬ ಆಸರೆಯಾಗಿ, ಮದುವೆಗೆ ಸಹಕಾರಿಯಾಗುವ ಮೂಲಕ ಮಂಗಳೂರಿನ ಉಳ್ಳಾಲದ ಅಲೇಕಳದ ಮುಸ್ಲಿಂ ಕುಟುಂಬ ಸೌಹಾರ್ದತೆಯನ್ನು ಮೆರೆದಿದೆ.
ದಕ್ಷಿಣ ಕನ್ನಡ ಕಾಂಗ್ರೆಸ್ ಕಚೇರಿಯಲ್ಲಿ ಎಸ್.ಎಂ. ಕೃಷ್ಣ ಫೋಟೋನೇ ಟಾರ್ಗೆಟ್!
ಉಳ್ಳಾಲದ ಶಕ್ತಿನಗರದ ನಿವಾಸಿ ಗೀತಾ ಎಂಬುವವರ ಪತಿ ಕಳೆದ ಕೆಲ ವರ್ಷಗಳ ಹಿಂದೆ ತೀರಿ ಹೋಗಿದ್ದು, ಇಬ್ಬರು ಹೆಣ್ಣು ಮಕ್ಕಳ ಮದುವೆಯ ಜವಾಬ್ದಾರಿ ಗೀತಾರವರ ಮೇಲೆಯೇ ಬಂದಿದೆ. ವರ್ಷದ ಹಿಂದೆ ಸಾಲ ಮಾಡಿ ಹಿರಿಯ ಮಗಳ ಮದುವೆಯನ್ನು ಗೀತಾರವರು ಮಾಡಿದ್ದರು.
ಹಿರಿಯ ಮಗಳ ಮದುವೆಯ ಸಾಲವನ್ನು ತೀರಿಸಲು ಮನೆಯ ವಸ್ತುಗಳನ್ನೆಲ್ಲವನ್ನು ಮಾರಿದ್ದರು. ಹಿರಿಯ ಮಗಳ ಮದುವೆಗೆ ಮಾಡಿದ ಸಾಲವನ್ನು ತೀರಿಸಲು ಹರಸಾಹಸ ಮಾಡುತ್ತಿದ್ದ ಸಂದರ್ಭದಲ್ಲೇ ಕಿರಿಯ ಮಗಳಿಗೂ ಮದುವೆ ನಿಶ್ಚಯವಾಗಿದೆ.
ಸಂಕಷ್ಟದ ಸಂದರ್ಭದಲ್ಲೇ ಕಿರಿಯ ಮಗಳು ಕವನಾಗೆ ತಲಪಾಡಿ ದೇವಿಪುರದ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜುಲೈ 11ರಂದು ಬಹಳ ಸರಳವಾಗಿ ಮದುವೆ ಮಾಡಿಕೊಡುವ ಯೋಜನೆಯನ್ನು ಹಾಕಿಕೊಂಡಿದ್ದರು. ಆದರೆ ಇದಕ್ಕೂ ಹಣ ಹೊಂದಿಸೋದು ಗೀತಾರವರಿಗೆ ಕಷ್ಟವಾಗಿದೆ.
ಮಗಳಿಗೆ ಬಟ್ಟೆ- ಬರೆಗಳನ್ನು ತೆಗೆದುಕೊಡಲೂ ಹಣವನ್ನು ಹೊಂದಿಸುವುದು ಅಸಾಧ್ಯವಾಗಿದೆ. ಇನ್ನು ಮದುವೆ ನಡೆಸಲೂ ಸಾಧ್ಯವೇ ಇಲ್ಲ ಎಂಬ ನಿರ್ಧಾರಕ್ಕೆ ಗೀತಾರವರು ಬಂದಿದ್ದಾಗ, ಈ ವಿಚಾರ ಉಳ್ಳಾಲದ ಮಂಚಿಲ ಎಂ.ಕೆ ಕುಟುಂಬಕ್ಕೆ ಗೊತ್ತಾಗಿದೆ.
ಮದುವೆಗೆ ಕಷ್ಟಪಡುತ್ತಿರುವ ಗೀತಾರ ಕುಟುಂಬಕ್ಕೆ ಎಂ.ಕೆ ಕುಟುಂಬ ನೆರವಾಗಿದ್ದು, ಎಂ.ಕೆ ಕುಟುಂಬದ ಮ್ಯಾರೇಜ್ ಫಂಡ್ ಮೂಲಕ ಕವನಾ ಮದುವೆಯ ಸಂಪೂರ್ಣ ಖರ್ಚನ್ನು ನೋಡಿಕೊಳ್ಳಲಾಗಿದೆ. ಎಂ.ಕೆ ಕುಟುಂಬದ ಹಂಝರವರ ಮನೆಯಲ್ಲೇ ಕವನಾರವರ ಮೆಹಂದಿ ಕಾರ್ಯಕ್ರಮ ಮಾಡಲಾಗಿದೆ. ಯಾವುದಕ್ಕೂ ಕಡಿಮೆ ಇಲ್ಲ ಎಂಬಂತೆ ವಧುವಿಗೆ ಆಭರಣ, ಬಟ್ಟೆ- ಬರೆಗಳನ್ನೆಲ್ಲಾ ಮುಸ್ಲಿಂ ಕುಟುಂಬವೇ ಕೊಡಿಸಿದೆ.
ಮದುವೆಗೆ ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಯು.ಟಿ. ಖಾದರ್ ಧನ ಸಹಾಯವನ್ನು ನೀಡಿದ್ದಾರೆ. ಜುಲೈ 11ರಂದು ಗೀತಾರವರ ಯೋಚನೆಯಂತೇಯೇ ತಲಪಾಡಿಯ ದೇವಿಪುರದ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ರಂಜಿತ್ ಎಂಬುವವರ ಜೊತೆ ಕವನಾರನ್ನು ಮದುವೆ ಮಾಡಿಕೊಡಲಾಗಿದೆ.
ಮಗಳ ಮದುವೆಯ ಬಗ್ಗೆಯೇ ಚಿಂತಿಸಿದ್ದ ಗೀತಾ, ತನ್ನ ಕಷ್ಟಕ್ಕೆ ಹೆಗಲಾದ ಮುಸ್ಲಿಂ ಕುಟುಂಬಕ್ಕೆ ಆನಂದಭಾಷ್ಪದ ಮೂಲಕ ಧನ್ಯವಾದ ಸಲ್ಲಿಸಿದ್ದಾರೆ. ಇದು ದಕ್ಷಿಣ ಕನ್ನಡ ಜಿಲ್ಲೆಯ ಕೋಮು ಸೌಹಾರ್ದತೆಯ ಸಂಕೇತವಾಗಿದೆ.