ಹಿಜಾಬ್ ಧರಿಸಲು ಅವಕಾಶ ಕೊಡಿ ಎಂದು 'ಶಾಸಕ'ರಿಂದ ಬೆದರಿಕೆ: ಮಂಗಳೂರು ವಿವಿ ಪ್ರಾಂಶುಪಾಲೆ ಆರೋಪ
ಮಂಗಳೂರು, ಮೇ 27: ವಿಶ್ವವಿದ್ಯಾನಿಲಯದಲ್ಲಿ ಹಿಜಾಬ್ ವಿವಾದ ತಾರಕಕ್ಕೇರಿದೆ. ಹಿಜಾಬ್ ಗಲಾಟೆ ವಿಚಾರವಾಗಿ ಕಾಲೇಜು ಸ್ಟೂಡೆಂಟ್ ಯೂನಿಯನ್ ಪ್ರೆಸಿಡೆಂಟ್ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಎಬಿವಿಪಿ ಒತ್ತಾಯಕ್ಕೆ ಮಣಿದಿದ್ದಾರೆ ಎನ್ನಲಾಗಿದೆ. ಇನ್ನೊಂದೆಡೆ ಎಲ್ಲಾ ಆರೋಪಗಳಿಗೆ ಕಾಲೇಜು ಪ್ರಾಂಶುಪಾಲೆ ಸುದೀರ್ಘ ಉತ್ತರ ನೀಡಿದ್ದು ಕೆಲ ಶಾಸಕರ ವಿರುದ್ಧ ಆರೋಪವನ್ನೂ ಮಾಡಿದ್ದಾರೆ.
ಕಾಲೇಜು ಕ್ಯಾಂಪಸ್ ನಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡುವಂತೆ ಮಂಗಳೂರಿನ ಪ್ರಭಾವಿ ಶಾಸಕರು ಕರೆ ಮಾಡಿ ಜೋರು ಮಾಡಿದ್ದಾರೆ ಎಂದು ಮಂಗಳೂರು ವಿಶ್ವ ವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲೆ ಡಾ.ಅನುಸೂಯ ರೈ ಹೇಳಿದ್ದಾರೆ. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ರೈ, ನನಗೆ ಎಲ್ಲಾ ಶಾಸಕರು ಫೋನ್ ಮಾಡಿ ಜೋರು ಮಾಡುತ್ತಾರೆ. ನೀವು ಯಾಕೆ ಹಿಜಾಬ್ ಮಾಡಿದ್ರಿ , ಯಾರ ಮಾತು ಕೇಳಿ ಕ್ಯಾಂಪಸ್ ನಲ್ಲಿ ಹಿಜಾಬ್ ತೆಗೆಸುತ್ತಿದ್ದಿರಾ ಅಂತಾ ಕೇಳುತ್ತಾರೆ, ನಮ್ಮ ಲೋಕಲ್ ಎಂಎಲ್ಎ ಯಾಕೆ ಕೋರ್ಟ್ ನಿಯಮ ಪಾಲಿಸಿಲ್ಲ ಅಂತಾ ಜೋರು ಮಾಡುತ್ತಾರೆ. ಆದರೆ ಎಲ್ಲಾ ಸಹೋದ್ಯೋಗಿಗಳ ಮಾತು ಗಣನೆಗೆ ತೆಗೆದು ಕೊಂಡು ಆದೇಶ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಮತ್ತೆ ಶುರುವಾದ ಹಿಜಾಬ್ ವಿವಾದ
ಮೇ12 ರಿಂದ 16ರವರೆಗೆ ಆನ್ಲೈನ್ ತರಗತಿ ಆರಂಭವಾಗಿವೆ. ಕಾಲೇಜಿನಲ್ಲಿ ದುಪ್ಪಟ ಧರಿಸಲು ಅನುಮತಿ ನೀಡಲಾಗಿತ್ತು. ವೇಲಿನ ಕಲರ್ನಲ್ಲಿ ಶಿರವಸ್ತ್ರ ಧಾರಣಗೆ 2015 ರಲ್ಲಿ ಪ್ರಿಂಟ್ ಆದ ಕೈಪಿಡಿಯಲ್ಲಿ ತಿಳಿಸಲಾಗಿದೆ. ಅದರಂತೆ ಈ ವರ್ಷ ಕೂಡ ಶಿರವಸ್ತ್ರ ಧರಿಸಲು ಅನುಮತಿ ನೀಡಲಾಗಿತ್ತು. ಆದರೆ ಹೈಕೋರ್ಟ್ ಆದೇಶ ಜಾರಿಯಾಗಿದ್ದು ವರ್ಷದ ನಡುವಿನಲ್ಲಿ. ಅದರಂತೆ 44 ಮಕ್ಕಳು ಕಾಲೇಜಿಗೆ ಪ್ರವೇಶ ಪಡೆದು ಬಂದಿದ್ದಾರೆ.
ಸಮವಸ್ತ್ರ ಕಡ್ಡಾಯ
ಸಮವಸ್ತ್ರದ ಒಂದು ಭಾಗವಾಗಿ ಶಿರವಸ್ತ್ರ ಧರಿಸಿ ಬರುತ್ತಿದ್ದರು. ಯೂನಿವರ್ಸಿಟಿ ಕಾಲೇಜ್ ವಿಶ್ವವಿದ್ಯಾಲಯ ಅಡಿಯಲ್ಲಿ ಬರುತ್ತದೆ. ವಿಶ್ವವಿದ್ಯಾಲಯ ನೀಡುವ ಗೈಡ್ ಲೈನ್ಸ್ ನಾವು ಪಾಲನೆ ಮಾಡುತ್ತಾ ಬಂದಿದ್ದೇವೆ. ಮೇ 17 ರಲ್ಲಿ ವಾಟ್ಸಪ್ ಮೂಲಕ ಎಲ್ಲರಿಗೂ ಸಮವಸ್ತ್ರ ಕಡ್ಡಾಯ, ಶಿರವಸ್ತ್ರ ಧಾರಣೆಗೆ ಅವಕಾಶ ಇಲ್ಲ ಎಂದು ಸಂದೇಶ ರವಾನೆ ಮಾಡಿದ್ದೇವೆ. ಅ ಬಳಿಕ ಕೆಲ ಮಕ್ಕಳು ಕ್ಯಾಂಪಸ್ನಲ್ಲಿ ಹಿಜಾಬ್ ಧರಿಸಲು ಅನುಮತಿ ಕೊಡಬಾರದು ಎಂದು ಬೇಡಿಕೆ ಇಟ್ಟರು. ಈ ಬಗ್ಗೆ ರಿಜಿಸ್ಟರ್ ಮತ್ತು ವಿಸಿಯವರ ಗಮನಕ್ಕೆ ತಂದಿದ್ದೇವೆ ಅಂತಾ ಹೇಳಿದ್ದಾರೆ.
ಮತ್ತೊಂದು ಜೆಎನ್ಯು ಮಾಡಲೊರಟಿದ್ದಾರೆ: ಮಂಗಳೂರಿನಲ್ಲಿ ಮತ್ತೆ ಹಿಜಾಬ್ ವಿವಾದ
ಒಂದು ತಂಡ ವಿವಾದಕ್ಕೆ ಕಾರಣ
ಇಡೀ ಕಾಲೇಜಿನಲ್ಲಿ 44 ಮುಸ್ಲಿಂ ಮಕ್ಕಳಿದ್ದು, ವಿವಾದ ಒಂದು ತಂಡದಿಂದಷ್ಟೇ ಆಗಿದೆ. ಒಂದು 15 ಮಂದಿ ವಿದ್ಯಾರ್ಥಿಗಳಷ್ಟೇ ಹಿಜಾಬ್ ಕುರಿತು ಮಾತನಾಡ್ತಿದಾರೆ. ಗುರುವಾರ ಅವರು ಬಂದಾಗ ನಾವೇ ಅವರನ್ನು ಹಿಜಾಬ್ ತೆಗೆದು ಬನ್ನಿ ಎಂದು ಕಳುಹಿಸಿದ್ದೇವೆ. ಹಾಗಾಗಿ ಅವರು ನಿನ್ನೆ ಡಿಸಿ ಕಚೇರಿಗೆ ಹೋಗಿದ್ದರು, ಆ 15 ಮಂದಿ ಶುಕ್ರವಾರ ತರಗತಿಗೆ ಬಂದಿಲ್ಲ. ಅವರನ್ನ ಬಿಟ್ಟು ಉಳಿದ ಕೆಲ ಮಕ್ಕಳು ಹಿಜಾಬ್ ತೆಗೆದು ಕಾಲೇಜಿಗೆ ಬಂದಿದ್ದಾರೆ. ಕೆಲ ವಿದ್ಯಾರ್ಥಿಗಳು ಹೈ ಕೋರ್ಟ್ ತೀರ್ಪಿನ ಬಳಿಕ ಕಾಲೇಜಿಗೆ ಬರ್ತಿಲ್ಲ. ಒಂದು ಮೂರು ನಾಲ್ಕು ವಿದ್ಯಾರ್ಥಿಗಳು ಟಿಸಿ ತೆಗೆದುಕೊಂಡು ಹೋಗಿದ್ದಾರೆ. ಆದರೆ ಇದು ಎಲ್ಲಾ ವಿದ್ಯಾರ್ಥಿಗಳ ಸಮಸ್ಯೆ ಅಲ್ಲ, ಕೆಲ 15 ವಿದ್ಯಾರ್ಥಿಗಳ ಸಮಸ್ಯೆ ಅಂತಾ ಸ್ಪಷ್ಟಪಡಿಸಿದ್ದಾರೆ.
ಶಿರವಸ್ತ್ರ ಕಾಲೇಜು ನಿಯಮದಿಂದ ತೆಗೆಯಲಾಗಿದೆ
ಆ 15 ವಿದ್ಯಾರ್ಥಿಗಳು ಈ ವರ್ಷದಿಂದ ಆದೇಶ ಯಾಕೆ ಜಾರಿ ಮಾಡ್ತಿದೀರಿ ಎಂದು ಕೇಳುತ್ತಿದ್ದಾರೆ. ಕೋರ್ಟ್ ತೀರ್ಪಿನ ಮೊದಲು ನಮ್ಮ ಕಾಲೇಜಲ್ಲಿ ಶಿರವಸ್ತ್ರ ಹಾಕಲು ಅವಕಾಶ ಇತ್ತು. ಆದರೆ ತೀರ್ಪು ಬಂದ ಬಳಿಕ ಆನ್ ಲೈನ್ ತರಗತಿ ಇತ್ತು. ಆಫ್ ಲೈನ್ ಆದ ನಂತರ ಕೆಲ ವಿದ್ಯಾರ್ಥಿಗಳು ಹಿಜಾಬ್ ಗೆ ವಿರೋಧ ಮಾಡಿದರು. ಹೀಗಾಗಿ ವಿವಿ ಸಿಂಡಿಕೇಟ್ ಸಭೆ ನಡೆಸಿ ಶಿರವಸ್ತ್ರವನ್ನ ಕಾಲೇಜು ನಿಯಮದಿಂದ ತೆಗೆದು ಹಾಕಲಾಯಿತು. ಹಿಜಾಬ್ಗೆ ಅವಕಾಶ ಇಲ್ಲ ಎಂದು ನೋಟೀಸ್ ಜಾರಿ ಮಾಡಿದ್ದರೂ, ನಿನ್ನೆ ಕೆಲವರು ಧರಿಸಿ ಬಂದಿದ್ದರು. ಹೀಗಾಗಿ ನಾನೇ ಅವರನ್ನು ವಾಪಾಸ್ ಕಳುಹಿಸಿ ಕೊಟ್ಟಿದ್ದೇವೆ. ನಿನ್ನೆ ಕೆಲ ಮಕ್ಕಳು ಕ್ಯಾಂಪಸ್ಗೂ ಹಿಜಾಬ್ ಬಿಡಬಾರದು ಅಂತ ಹೇಳಿದರು. ಕೊನೆಗೆ ಒತ್ತಾಯಕ್ಕೆ ಮಣಿದು ನಿನ್ನೆ ಕ್ಯಾಂಪಸ್ ನಲ್ಲೂ ನಿಷೇಧ ಮಾಡಲಾಗಿದೆ ಎಂದು ಮಂಗಳೂರು ವಿವಿ ಕಾಲೇಜು ಪ್ರಾಂಶುಪಾಲೆ ಹೇಳಿದ್ದಾರೆ.
ಕೋರ್ಟ್ ಕಡ್ಡಾಯ ಪಾಲನೆ ಅಗತ್ಯ
ಈ ವಿಚಾರದ ಬಗ್ಗೆ ಮಂಗಳೂರು ಯೂನಿವರ್ಸಿಟಿ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ, ಶಾಸಕ ವೇದವ್ಯಾಸ ಕಾಮತ್ ಪ್ರತಿಕ್ರಿಯಿಸಿ, ನಾನು ಈ ಕಾಲೇಜಿನ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಮಾತ್ರ. ವಿಶ್ವವಿದ್ಯಾನಿಲಯದ ಕುಲಪತಿಗಳು ಯೂನಿವರ್ಸಿಟಿ ಕಾಲೇಜಿನ ಮೇಲ್ವೀಚಾರಕರಾಗಿದ್ದಾರೆ. ಕುಲಪತಿಗಳು ಶುಕ್ರವಾರ ಸಂಜೆ ಈ ಬಗ್ಗೆ ಸಭೆಯನ್ನು ಕರೆದಿದ್ದಾರೆ. ಕಾಲೇಜಿನಲ್ಲಿ ಕೋರ್ಟ್ ನಿಯಮ ಅನುಷ್ಠಾನ ಆಗದ ವಿಚಾರ ಗೊತ್ತಾಗಿದೆ. ಇದರಲ್ಲಿ ಯಾರ ನಿರ್ಲಕ್ಷ್ಯ ಇದೆ ಎಂಬುವುದರ ಬಗ್ಗೆ ಸಭೆ ಮಾಡುತ್ತೇವೆ. ಕಾಲೇಜು ಆರಂಭವಾದ ಬಳಿಕ ರೀತಿಯ ಗೊಂದಲ ಆರಂಭವಾಗಿದೆ. ಈ ಬಗ್ಗೆ ಯಾರೂ ನನ್ನ ಗಮನ ಕ್ಕೆ ತಂದಿಲ್ಲ, ಕೋರ್ಟ್ ನಿಯಮವನ್ನು ಯಾರೂ ನಿರ್ಲಕ್ಷ್ಯ ಮಾಡುವಂತಿಲ್ಲ, ಕಡ್ಡಾಯ ಪಾಲನೆ ಮಾಡಬೇಕು ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದ್ದಾರೆ.
ವಿದ್ಯಾರ್ಥಿ ಸಂಘಟನೆ ಅಧ್ಯಕ್ಷ ರಾಜೀನಾಮೆ
ಮಂಗಳೂರು ಯೂನಿವರ್ಸಿಟಿ ಕಾಲೇಜಿನಲ್ಲಿ ಹಿಜಾಬ್ ಗಲಾಟೆಯಿಂದ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ವಿನ್ಯಾಸ್ ರಾಜೀನಾಮೆ ನೀಡಿದ್ದಾರೆ. ಹಿಜಾಬ್ ಧಾರಿ ವಿದ್ಯಾರ್ಥಿನಿಯರ ಬಗ್ಗೆ ಮೃದು ಧೋರಣೆ ತೋರಿದ್ದಕ್ಕೆ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವಂತೆ ವಿದ್ಯಾರ್ಥಿಗಳಿಂದ ಒತ್ತಾಯ ಕೇಳಿಬಂದಿದೆ. ಎ.ಬಿ.ವಿ.ಪಿ ಬೆಂಬಲಿತ ವಿದ್ಯಾರ್ಥಿ ನಾಯಕನಾಗಿ ನಾನು ಆಯ್ಕೆಯಾಗಿದ್ದೆ. ಆದರೆ ನಾನು ಯಾರ ಪರವಾಗಿಯೂ ಇಲ್ಲ. ವಿದ್ಯಾರ್ಥಿ ನಾಯಕನಾಗಿರುವ ಕಾರಣ ಏಕಪಕ್ಷೀಯ ನಿರ್ಧಾರ ಕೈಗೊಳ್ಳಲು ಅಸಾಧ್ಯ. ನ್ಯಾಯಾಲಯದ ಆದೇಶವನ್ನು ಎಲ್ಲರೂ ಪಾಲನೆ ಮಾಡಬೇಕು. ಏಕಾಏಕಿ ಹಿಜಾಬ್ ತೆಗೆಯುವಂತೆ ಹೇಳಲು ಸಾಧ್ಯವಿಲ್ಲ ಎಂದು ಹೇಳಿದ್ದೆ. ಇದು ಕೆಲವರಿಗೆ ಬೇಸರ ತಂದಿದೆ. ಹಾಗಾಗಿ ನಾನು ಕಾಲೇಜು ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ರಾಜೀನಾಮೆ ಕೊಡುತ್ತೇನೆ ಎಂದು ವಿನ್ಯಾಸ್ ಹೇಳಿದ್ದಾರೆ.
ಎಬಿವಿಪಿ ಸಂಘಟನೆಯ ಷಡ್ಯಂತ್ರ
ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಹಿಜಾಬ್ ವಿವಾದ ಕುರಿತಾಗಿ ಪ್ರತಿಕ್ರಿಯಿಸಿದ ವಿದ್ಯಾರ್ಥಿನಿಯರು, ಎಬಿವಿಪಿ ವಿರುದ್ಧ ಆರೋಪ ಮಾಡಿದ್ದಾರೆ. ವಾಟ್ಸಪ್ ಗ್ರೂಪ್ನಲ್ಲಿ ಹಿಜಾಬ್ ಧಾರಿ ವಿದ್ಯಾರ್ಥಿನಿಯರ ವಿರುದ್ಧ ಷಡ್ಯಂತ್ರ ಮಾಡಲಾಗಿದೆ. ಇದು ಸಣ್ಣ ಟೀಸರ್ ಮುಂದೆ ದೊಡ್ಡ ಮಟ್ಟದಲ್ಲಿರುತ್ತದೆ. ಎಲ್ಲರೂ ಕೇಸರಿ ಶಾಲು ಜೊತೆಗೆ ತರಬೇಕು ಎಂದು ಎಬಿವಿಪಿ ವಿದ್ಯಾರ್ಥಿಗಳು ಮಾಡಿದ ಸಂದೇಶವನ್ನು ಹಿಜಾಬ್ ವಿದ್ಯಾರ್ಥಿನಿಯರು ದಾಖಲೆಸಹಿತ ಬಿಡುಗಡೆ ಮಾಡಿದ್ದಾರೆ.
ಕಾಲೇಜಿನ ನಿಯಮದಲ್ಲೂ ಸಮವಸ್ತ್ರದ ಶಾಲನ್ನು ದುಪ್ಪಟ್ಟಾಗಿ ಬಳಸಲು ಅವಕಾಶ ಇದೆ. ಇಷ್ಟು ದಿನ ಇಲ್ಲದ ಹಿಜಾಬ್ ವಿವಾದ ಈಗ ಏಕಾಏಕಿ ಬಂದದ್ದೇಕೆ ? ಇದು ಎಬಿವಿಪಿ ಸಂಘಟನೆಯ ಷಡ್ಯಂತ್ರ . ಕಾಲೇಜಿಗೆ ಸಂಬಂಧಿಸಿದ ಪ್ರಮುಖ ನಿಯಮ ಪುಸ್ತಕದಲ್ಲಿ ಹಿಜಾಬ್ ಗೆ ಅವಕಾಶ ನೀಡಲಾಗಿದೆ. ಸಮವಸ್ತ್ರ ಜೊತೆಗೆ ಶಿರವಸ್ತ್ರ ಧರಿಸಲು ಇಚ್ಚಿಸುವ ವಿದ್ಯಾರ್ಥಿನಿಯರು ಅನುಮತಿ ಇರುತ್ತದೆ ಎಂದು ಸ್ಪಷ್ಟವಾಗಿ ಬರೆಯಲಾಗಿದೆ. ಆದರೆ ಈಗ ಹಿಜಾಬ್ ನಿಷೇಧಿಸಿರುವುದು ಸರಿಯಲ್ಲ. ನಾವೆಲ್ಲ ನ್ಯಾಯಕ್ಕಾಗಿ ಹೋರಾಡುತ್ತೇವೆ, ಈ ವಿವಾದ ಸರಿಪಡಿಸಲು ಜಿಲ್ಲಾಧಿಕಾರಿಯವರು ಸೋಮವಾರದವರೆಗೆ ಕಾಲಾವಕಾಶ ಕೇಳಿದ್ದಾರೆ ನಮಗೆ ನ್ಯಾಯ ದೊರಕುವ ಭರವಸೆ ಇದೆ ಎಂದು ವಿದ್ಯಾರ್ಥಿನಿ ಗೌಸಿಯಾ ಹೇಳಿದ್ದಾರೆ.