ಮಂಗಳೂರಿನ ಹೋಮ್ ಗಾರ್ಡ್ ಗೊಂದು ಸೆಲ್ಯೂಟ್ ಸಲ್ಲಿಸಿ
ಮಂಗಳೂರು, ನವೆಂಬರ್, 23 : ಮಂಗಳೂರು ರಾಷ್ಟ್ರೀಯ ಹೆದ್ದಾರಿ 66 ರಲ್ಲಿದ್ದ ಗುಂಡಿಯನ್ನು ಯಾರ ಸಹಾಯವೂ ಇಲ್ಲದೇ ಏಕಾಂಗಿಯಾಗಿ ತುಂಬಿದ ಮಂಗಳೂರಿನ ಹೋಂ ಗಾರ್ಡ್ ಒಬ್ಬರು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಪ್ರಾಮಾಣಿಕವಾಗಿ ಕರ್ತವ್ಯ ಎಸಗದ ಎಂಜಿನಿಯರ್ ಗಳು ತಲೆತಗ್ಗಿಸುವಂತೆ ಮಾಡಿದ್ದಾರೆ.
ಹೌದು..ಪದ್ಮಾವತಿ ಎಂಬ ಹೋಂ ಗಾರ್ಡ್, ಪ್ರಯಾಣಿಕರಿಗೆ ಸಂಚಾರದ ವೇಳೆ ಯಾವುದೇ ತೊಂದರೆಯಾಗದಂತೆ ನಿಗಾವಹಿಸಿ, ಸಮಾಜ ಸೇವೆ ಮಾಡಿ ಎಲ್ಲರ ಶ್ಲಾಘನೆ ಪಡೆದಿದ್ದಾರೆ. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿಯೂ ಇವರ ಕೆಲಸಕ್ಕೆ ಭಾರೀ ಹೊಗಳಿಕೆ ದೊರೆತಿದೆ.[ಸಮಯಪ್ರಜ್ಞೆ ಮೆರೆದ ಬೆಂಗಳೂರು ಟ್ರಾಫಿಕ್ ಪೊಲೀಸ್ ಗೆ ಸಲಾಂ!]
ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸುಮಾರು ದಿನಗಳ ಹಿಂದೆ ಒಂದು ಗುಂಡಿ ನಿರ್ಮಾಣವಾಗಿತ್ತು. ಈ ಗುಂಡಿಯಿಂದ ಬೈಕಂಪಾಡಿ ಇಂಡಸ್ಟ್ರೀಯಲ್ ಏರಿಯಾದಲ್ಲಿ ಯಾವಾಗಲೂ ಟ್ರಾಫಿಕ್ ತೊಂದರೆಯಾಗುತ್ತಿತ್ತು. ಆ ರಸ್ತೆ ಹಾದು ಮುಂದೆ ಹೋಗಲು ಪ್ರಯಾಣಿಕರು ಹರಸಾಹಸ ಪಡುತ್ತಿದ್ದರು.[ಬೆಂಗಳೂರ ರಸ್ತೆ ಗುಂಡಿ ಮುಚ್ಚಲು ನೀವು ಸಹಿ ಮಾಡಬಹುದು]
ರಾಷ್ಟ್ರೀಯ ಹೆದ್ದಾರಿಯನ್ನು ಸರಿಪಡಿಸಲು ಇಂಜಿನಿಯರ್ ಗಳು ನಿಯೋಜಿಸಲಾಗಿದ್ದು, ಅವರು ಈ ಗುಂಡಿಯನ್ನು ತುಂಬಿಸಬೇಕಿತ್ತು. ಆದರೆ ಇಂಜಿನಿಯರ್ ಗಳು ಈ ಕಾರ್ಯವನ್ನು ಕಡೆಗಣಿಸಿದ್ದನ್ನು ಗಮನಿಸಿದ ಪದ್ಮಾವತಿ ಅವರು ಸ್ವತಃ ತಾವೇ ಗುಂಡಿ ಮುಚ್ಚುವ ಕಾರ್ಯ ಮಾಡಿದ್ದಾರೆ.