ದಕ್ಷಿಣ ಕನ್ನಡ: ಬರಡಾದ ಭೂಮಿಯಲ್ಲಿ ಅಂತರ ಗಂಗೆಯನ್ನು ಹರಿಸಿದ ಕೃಷಿಕ
ಮಂಗಳೂರು, ಡಿಸೆಂಬರ್ 20: ಮಳೆಗಾಲ ಕಳೆದು ಬೇಸಿಗೆ ಬಂದಾಗ ಪಟ್ಟಣ ಹಾಗೂ ಹಳ್ಳಿಯ ಜನರ ಮುಂದಿರುವ ಪ್ರಮುಖ ಸಮಸ್ಯೆಯೆಂದರೆ ನೀರಿನ ಕೊರತೆ. ಅದರಲ್ಲೂ ಅಂತರ್ಜಲ ಮಟ್ಟ ಕಡಿಮೆ ಇರುವ ಭಾಗದ ಜನ ಕುಡಿಯುವ ನೀರಿಗೂ ತತ್ವಾರ ಎದುರಿಸಬೇಕಾಗುತ್ತದೆ. ಬಿಸಿಲ ನಾಡಿನಲ್ಲಿ ಈ ರೀತಿಯ ಸಮಸ್ಯೆ ಸಾಮನ್ಯವಾಗಿದ್ದರೆ, ಕರಾವಳಿಯ ಹಲವು ಭಾಗಗಳಲ್ಲೂ ನೀರಿಗಾಗಿ ಹಾಹಾಕಾರ ಪಡಬೇಕಾಗಿದೆ.
ಇಂಥಹದೇ ನೀರಿನ ಸಮಸ್ಯೆಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮವೊಂದು ಪಡುತಿತ್ತು. ಆದರೆ ಈ ಗ್ರಾಮದಲ್ಲಿ ಈಗ ನೀರು ಬೇಸಿಗೆಯಲ್ಲೂ ಉಕ್ಕಿ ಹರಿಯುತ್ತಿದೆ. ಈ ಗ್ರಾಮದ ಕೃಷಿಕನೋರ್ವ ಅಂತರ ಗಂಗೆಯನ್ನು ಆ ಗ್ರಾಮಕ್ಕೆ ತಂದಿದ್ದಾನೆ.
ನೀರಿನ ಸಮಸ್ಯೆ ಇಲ್ಲದ ಊರು ಇರುವುದು ತೀರಾ ವಿರಳ. ಕುಡಿಯಲು, ಕೃಷಿಗೆ ನೀರಿನಲ್ಲಿ ಜನ ಪರದಾಡುವ ದೃಶ್ಯ ಸರ್ವೇ ಸಾಮಾನ್ಯವಾಗಿದೆ. ಇಂತಹ ಸಮಸ್ಯೆಯನ್ನು ಎದುರಿಸುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಳಕೆ ಗ್ರಾಮದ ಬಾಂಡೀಲು ಎನ್ನುವ ಪ್ರದೇಶದ ಜನ ಕಳೆದ ಎರಡು ವರ್ಷಗಳಿಂದ ನೀರಿನ ಅಭಾವವನ್ನೇ ಕಂಡಿಲ್ಲ.
ಕುಡಿಯುವ ನೀರಿಗೂ ಪರಿತಪಿಸುತ್ತಿದ್ದ ಬಾಂಡೀಲು
ಸಾಮಾನ್ಯವಾಗಿ ಫೆಬ್ರವರಿ ತಿಂಗಳ ಕೊನೆಗೆ ಕೆರೆ, ಬಾವಿ ಎಲ್ಲದರಲ್ಲೂ ನೀರು ಬತ್ತಿಹೋಗಿ ಕೃಷಿ ಹಾಗೂ ಕುಡಿಯುವ ನೀರಿಗೂ ಪರಿತಪಿಸುತ್ತಿದ್ದ ಬಾಂಡೀಲು ಪ್ರದೇಶದಲ್ಲಿ ಇಂದು ಯಥೇಚ್ಛವಾಗಿ ನೀರು ಹರಿಯುತ್ತಿದೆ. ಹೀಗೆ ನೀರು ಹರಿಯಲು ಇಲ್ಲಿನ ಕೃಷಿಕ ಚಂದ್ರಹಾಸ್ ರೈಯವರ ಪ್ರಯತ್ನ ಪ್ರಮುಖ ಕಾರಣ.
ಬಾಂಡೀಲು ಪ್ರದೇಶ ಈ ಹಿಂದೆ ಕಪ್ಪು ಕಲ್ಲಿನ ಕ್ವಾರಿಗೆ ಹೆಸರುವಾಸಿಯಾಗಿದ್ದು, 2017ರ ಬಳಿಕ ಇಲ್ಲಿ ಕಲ್ಲು ಕ್ವಾರಿಯನ್ನು ನಿಲ್ಲಿಸಲಾಗಿದೆ. ಕಲ್ಲು ಕ್ವಾರಿ ನಡೆಯುತ್ತಿದ್ದ ಪ್ರದೇಶಗಳ ತುಂಬಾ ಕಲ್ಲು ಗಣಿಗಾರಿಕೆ ನಡೆಸಿದ ಬಳಿಕ ಆಳವಾದ ಗುಂಡಿಗಳು ನಿರ್ಮಾಣವಾಗಿದ್ದು, ಈ ಗುಂಡಿಗಳನ್ನೇ ಬಳಸಿಕೊಂಡು ಚಂದ್ರಹಾಸ್ ರೈ ಬಾಂಡೀಲು ಗ್ರಾಮಕ್ಕೆ ಅಂತರ ಗಂಗೆಯನ್ನು ತಂದಿದ್ದಾರೆ.
ಒಂದು ಎಕರೆ ಗಣಿಗಾರಿಕೆ ಪ್ರದೇಶದಲ್ಲಿ ಮಳೆ ನೀರು ಸಂಗ್ರಹ
ಚಂದ್ರಹಾಸ್ ಜಾಗದ ಪಕ್ಕದಲ್ಲೇ ಇರುವ ಸುಮಾರು ಒಂದು ಎಕರೆಯ ಗಣಿಗಾರಿಕೆ ಆಳವಾದ ಪ್ರದೇಶದಲ್ಲಿ ಮಳೆ ನೀರು ನಿಲ್ಲುವುದನ್ನು ಗಮನಿಸಿದ್ದ ಚಂದ್ರಹಾಸ್ ಆ ನೀರು ಬೇರೆಡೆ ಹರಿದು ಹೋಗದಂತೆ ಆಳ ಪ್ರದೇಶದ ಸುತ್ತ ತಡೆಯೊಡ್ಡಿದ್ದಾರೆ. ಈ ತಡೆಯೊಡ್ಡಿದ ಪರಿಣಾಮ ನೀರು ಬೇರೆಡೆಗೆ ಹರಿದುಹೋಗದೆ ಕಲ್ಲು ಕ್ವಾರಿಯ ಗುಂಡಿಯಲ್ಲೇ ನೀರು ಸಂಗ್ರಹವಾಗಿದೆ. ಸಂಗ್ರಹವಾದ ನೀರನ್ನು ಕೃಷಿಗೆ ಬಳಸಬಹುದು ಎಂದು ಯೋಚಿಸಿದ್ದ ಚಂದ್ರಹಾಸ್ ರೈಗೆ ಈ ಗುಂಡಿಯಿಂದ ಎಷ್ಟು ನೀರು ತೆಗೆದರೂ ಮುಗಿಯದಷ್ಟು ನೀರು ಸಿಕ್ಕಿದೆ.
ಇಡೀ ಊರಿನ ನೀರಿನ ಸಮಸ್ಯೆ ನಿವಾರಣೆ
ಅಲ್ಲದೆ ಇಲ್ಲಿ ಸಂಗ್ರಹವಾದ ನೀರು ಪರಿಸರದ ತುಂಬೆಲ್ಲಾ ಅಂತರ್ಜಲ ಹೆಚ್ಚುವಂತೆಯೂ ಮಾಡಿದೆ. ಇದರಿಂದಾಗಿ ಬತ್ತಿಹೋಗಿದ್ದ ಹತ್ತಾರು ಕೊಳವೆ ಬಾವಿಗಳು ಇಂದು ನೀರಿನಿಂದ ತುಂಬಿ ತುಳುಕುತ್ತಿವೆ. ಈ ಕ್ವಾರಿಯ ನೀರನ್ನು ಚಂದ್ರಹಾಸ ಬೇಸಿಗೆಯಲ್ಲಿ ಕೃಷಿಗೆ ಬಳಸಿದರೆ, ನೀರು ಬೇಕಾದವರಿಗೆ ತಮ್ಮ ತೋಟದಲ್ಲಿರುವ ಬಾವಿ ಹಾಗೂ ಕೆರಗಳಿಂದಲೂ ನೀರು ಪೂರೈಸುತ್ತಿದ್ದಾರೆ.
ಕ್ವಾರಿ ಗುಂಡಿಯ ನೀರಿಗೆ ತಡೆ ಹಾಕಿದ ಮೇಲೆ ಬಾಂಡೀಲು ಗ್ರಾಮದಲ್ಲಿ ನೀರಿನ ಹೊಳೆ ಹರಿದಂತಾಗಿದೆ. ಕೃಷಿಗೆ ನೀರಿಗಾಗಿ ಒಂಭತ್ತು ಕೊಳವೆ ಬಾವಿಯನ್ನು ಕೊರೆದರೂ ನೀರು ಸಿಗದಿದ್ದ ಬಾಂಡೀಲು ನಿವಾಸಿ ಕೃಷಿಕರಾದ ಸುಬ್ಬಣ್ಣ ಭಟ್ರ ಎಲ್ಲಾ ಕೊಳವೆ ಬಾವಿಯಲ್ಲೂ ನೀರು ತುಂಬಿದ್ದು, ಕೆರೆ- ಬಾವಿಯಲ್ಲೂ ಸಾಕಷ್ಟು ನೀರಿನ ಸಂಗ್ರಹವಿದೆ. ಇದರಿಂದಾಗಿ ಇಡೀ ಊರಿನ ನೀರಿನ ಸಮಸ್ಯೆ ನಿವಾರಣೆಯಾಗಿದ್ದು, ಚಂದ್ರಹಾಸ್ ರೈಯವರ ಈ ಪ್ರಯತ್ನ ಅಂತರ ಗಂಗೆಯನ್ನು ಬಾಂಡೀಲು ಪ್ರದೇಶಕ್ಕೆ ಕರೆತಂದಂತಾಗಿದೆ.
ವ್ಯಕ್ತಿಯೋರ್ವ ನೀರಿನಲ್ಲಿ ಮುಳುಗಿ ಸಾವು
ನೀರಿಗಾಗಿ ಕ್ವಾರಿ ಗುಂಡಿಗೆ ತಡೆ ಹಾಕಿದ ಬಳಿಕ ಗುಂಡಿಯಲ್ಲಿ ಬಟ್ಟೆ ತೊಳೆಯಲು ಹಾಗೂ ಈಜಾಡಲು ಬರುವವರಿಂದಾಗಿ ಚಂದ್ರಹಾಸ್ ರೈ ತುಂಬಾ ಸಮಸ್ಯೆಗಳನ್ನು ಎದುರಿಸಿದ್ದಾರೆ. ಕ್ವಾರಿ ಗುಂಡಿಯ ಸುತ್ತ ತಂತಿ ಬೇಲಿ ಹಾಕಿದ್ದರೂ, ಬೇಲಿಯನ್ನು ಕಿತ್ತೆಸೆದು ನೀರಿನಲ್ಲಿ ಬಟ್ಟೆ ತೊಳೆಯಲು ಬಂದಿದ್ದ ವ್ಯಕ್ತಿಯೋರ್ವ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಕಾರಣ ಪೊಲೀಸರ ಎಚ್ಚರಿಕೆಯನ್ನೂ ಎದುರಿಸುವಂತಾಗಿತ್ತು.
ಇದೀಗ ಸ್ಥಳೀಯ ಅಳಿಕೆ ಗ್ರಾಮ ಪಂಚಾಯತ್ ಕ್ವಾರಿ ಗುಂಡಿಯ ಸುತ್ತ ಎಚ್ಚರಿಕೆಯ ಬೋರ್ಡ್ ಅನ್ನು ಅಳವಡಿಸಿದ್ದು, ಚಂದ್ರಹಾಸ್ ರೈಯವರ ನಿಟ್ಟುಸಿರಿಗೂ ಕಾರಣವಾಗಿದೆ.