ಉಡುಪಿ: ಎಂಡೋಸಲ್ಫಾನ್ ಯುವತಿ ಮನನೊಂದು ಆತ್ಮಹತ್ಯೆ
ಕುಂದಾಪುರ, ನವೆಂಬರ್, 21: ಕಳೆದ ಹದಿನೈದು ವರ್ಷಗಳಿಂದಲೂ ಎಂಡೋಸಲ್ಫಾನ್ ಪೀಡಿತೆಯಾಗಿದ್ದ ಯುವತಿಯೋರ್ವಳು ತನ್ನ ನಿತ್ಯಕರ್ಮ ಮಾಡುವುದಕ್ಕೂ ಮನೆಯವರನ್ನು ಅವಲಂಭಿಸಬೇಕೆಂಬ ಕಾರಣಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾದ ಹ್ರದಯವಿದ್ರಾವಕ ಘಟನೆ ನಡೆದಿದೆ
ರೀತಾ ಶೆಟ್ಟಿ (21) ಮನೆ ಸಮೀಪದ ಆವರಣವಿಲ್ಲದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ ಯುವತಿ. ಕುಂದಾಪುರ ತಾಲೂಕಿನ ಬೆಳ್ವೆ ಸಮೀಪದ ಆರ್ಡಿ ಎಂಬಲ್ಲಿ ವಾಸವಾಗಿದ್ದರು.[ಎಂಡೋಸಲ್ಫಾನ್ ಸಂತ್ರಸ್ತರು ಸರ್ಕಾರದ ಮುಂದಿಟ್ಟ ಬೇಡಿಕೆಯೇನು?]
ಘಟನೆ ವಿವರ:
ಆರ್ಡಿಯ ಸುರೇಂದ್ರ ಶೆಟ್ಟಿ ಅವರ ಎರಡು ಪುತ್ರಿಯರಲ್ಲಿ ರೀತಾ ಕೂಡ ಒಬ್ಬಳು. ಈಕೆ ಎಂಡೋಸಲ್ಪಾನ್ ಎಂಬ ಮಹಾಮಾರಿಗೆ ತುತ್ತಾಗಿ ಕೈ-ಕಾಲು ಹಾಗೂ ಕುತ್ತಿಗೆಯ ಸ್ವಾಧೀನ ಕಳೆದುಕೊಂಡಿದ್ದಳು.
ಮನೆಯವರು ಹೇಳುವ ಪ್ರಕಾರ ರೀತಾ ಹುಟ್ಟಿನಿಂದಲೇ ಎಂಡೋಸಲ್ಫಾನ್ ರೋಗಕ್ಕೆ ತುತ್ತಾದವಳಲ್ಲ. ಮಧ್ಯದಲ್ಲಿ ಕಾಣಿಸಿಕೊಂಡ ಎಂಡೋಸಲ್ಫಾನ್ ರೋಗದಿಂದ ಬಳಲುತ್ತಿದ್ದರೂ ತಂದೆಯ ನೆರವಿನಿಂದ ಎಸ್.ಎಸ್.ಎಲ್.ಸಿ. ವಿಧ್ಯಾಭ್ಯಾಸವನ್ನು ರೀತಾ ಪಡೆದಿದ್ದಳು. ಸರಕಾರದಿಂದ ಮೂರು ಸಾವಿರ ಮಾಸಿಕ ಪಿಂಚಣಿ ಸೌಲಭ್ಯವನ್ನು ಬಿಟ್ಟರೇ ಬೇರೆ ಯಾವ ಸೌಕರ್ಯವೂ ಸಿಕ್ಕಿರಲಿಲ್ಲ.[ಎಂಡೋಸಲ್ಫಾನ್ ಸಂತ್ರಸ್ತರಿಗೆ ಮಾಸಿಕ ಸ್ಟೈಪೆಂಡ್]
ಪ್ರತಿನಿತ್ಯ ಪ್ರತಿಯೊಂದು ಕೆಲಸಕ್ಕೂ ಮನೆಯವರನ್ನು ಆಶ್ರಯಿಸಲೇಬೇಕು ಎಂದು ಬೇಸರಿಸಿಕೊಂಡ ರೀತಾ ತನ್ನ ಸಮಸ್ಯೆಗೆ ಮನನೊಂದು ಆತ್ಮಹತ್ಯೆ ನಿರ್ಧಾರ ಕೈಗೊಂಡಿದ್ದಾಳೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.