ಕೊರೊನಾ ವೈರಸ್: ದಕ್ಷಿಣ ಕನ್ನಡ ಮೂಲದ 7 ತಿಂಗಳ ಗರ್ಭಿಣಿ ದುಬೈನಲ್ಲಿ ಸಾವು
ಮಂಗಳೂರು, ಮಾರ್ಚ್ 5: ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲ್ಲೂಕು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಎಸ್ಡಿಎಂ) ಕಾಲೇಜಿನ ಹಿರಿಯ ವಿದ್ಯಾರ್ಥಿನಿಯೊಬ್ಬರು ಕೊರೊನಾ ವೈರಸ್ ನಿಂದಾಗಿ ಸಾವನ್ನಪ್ಪಿದ್ದಾರೆ.
ಮೃತ ಮಹಿಳೆಯನ್ನು ಶ್ರೇಯಾ ರೈ ಎಂದು ಗುರುತಿಸಲಾಗಿದ್ದು, ಈಕೆ 7 ತಿಂಗಳ ಗರ್ಭಿಣಿಯಾಗಿದ್ದಳು. ಸದ್ಯ ದುಬೈನಲ್ಲಿ ವಾಸವಾಗಿದ್ದ ಶ್ರೇಯಾ ಅವರಿಗೆ ಕೆಲ ದಿನಗಳ ಹಿಂದೆ ಕೊರೊನಾ ವೈರಸ್ ಸೋಂಕು ಇರುವುದು ದೃಢಪಟ್ಟಿತ್ತು.
ಲಸಿಕೆಯಿಂದ ಅಡ್ಡ ಪರಿಣಾಮವಾಗಿಲ್ಲ: ಡಾ. ಸುಧಾಕರ್
ಕೂಡಲೇ ಅವರು ದುಬೈನಲ್ಲಿರುವ ದೊಡ್ಡ ಆಸ್ಪತ್ರೆಯೊಂದರಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ದಿನಗಳು ಉರುಳಿದಂತೆ ಅವರ ಆರೋಗ್ಯ ಸ್ಥಿತಿ ಗಂಭೀರವಾಗುತ್ತಾ ಬಂದಿತ್ತು. ಶುಕ್ರವಾರ ಬೆಳಗಿನ ಜಾವ ಮೃತಪಟ್ಟಿದ್ದಾರೆ ಎಂದು ದುಬೈನ್ ಆಸ್ಪತ್ರೆ ವೈದ್ಯರು ಖಚಿತಪಡಿಸಿದ್ದಾರೆ.
ಶ್ರೇಯಾ ಅವರು ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕಳಸ ಮೂಲದವರು. ತಮ್ಮ ಪದವಿ ಹಾಗೂ ಸ್ನಾತಕೋತ್ತರ ಪದವಿಯನ್ನು ಉಜಿರೆಯ ಎಸ್ಡಿಎಂ ಕಾಲೇಜಿನಲ್ಲಿ ಮುಗಿಸಿದ್ದಾರೆ. ಬಳಿಕ ಪಡುಬಿದರೆಯ ಮೂಲ ಪವನ್ ಶೆಟ್ಟಿಯನ್ನು ವರಿಸಿದ್ದ ಶ್ರೇಯಾ ಆ ನಂತರ ಪತಿಯೊಂದಿಗೆ ದುಬೈನಲ್ಲಿ ನೆಲೆಸಿದ್ದರು.
ಕಾಲೇಜು ದಿನಗಳಲ್ಲಿ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳಲ್ಲಿ ಶ್ರೇಯಾ ಅವರು ಸದಾ ಮುಂದಿರುತ್ತಿದ್ದರು. ಆಕೆಯ ಸಾವಿನ ಸುದ್ದಿ ಕೇಳಿ ಕುಟುಂಬದವರು, ಸ್ನೇಹಿತರು ಹಾಗೂ ಹಿತೈಷಿಗಳು ತೀವ್ರ ದುಃಖ ತಪ್ತರಾಗಿದ್ದಾರೆ.