ಬಜ್ಪೆ ವಿಮಾನ ದುರಂತಕ್ಕೆ, ಆ ಕಹಿ ನೆನಪಿಗೆ 6 ವರ್ಷ
ಮಂಗಳೂರು, ಮೇ 22 : ಮಂಗಳೂರು ವಿಮಾನ ದುರಂತ ನಡೆದು ಮೇ 22ಕ್ಕೆ, ಆ ದುರಂತದ ಕಹಿ ನೆನಪಿಗೆ ಆರು ವರ್ಷ. ಅಂದು ದುಬೈನಿಂದ ಮಂಗಳೂರಿಗೆ ಬಂದಿಳಿದಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ 812 ಬಜ್ಪೆ ನಿಲ್ದಾಣ ಸ್ಪರ್ಶಿಸುತ್ತಿದ್ದಂತೆ 158 ಮಂದಿಯನ್ನು ಬಲಿತೆಗೆದುಕೊಂಡು ಬಿಟ್ಟಿತ್ತು.
ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ, 6 ಜನ ಸಿಬ್ಬಂದಿ ಸೇರಿದಂತೆ 166 ಮಂದಿಯನ್ನು ಹೊತ್ತು ತಂದಿದ್ದ ವಿಮಾನ ಬಜ್ಪೆ ವಿಮಾನ ನಿಲ್ದಾಣದಲ್ಲಿ ರನ್ ವೇಯನ್ನು ಜಿಗಿದು ಹತ್ತಿರದಲ್ಲಿದ್ದ ಗುಡ್ಡಕ್ಕೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿತ್ತು. ಈ ದುರಂತದಲ್ಲಿ 8 ಜನ ಬದುಕುಳಿದಿದ್ದರು.
2010ರ ಮೇ 22ರ ಮುಂಜಾನೆ 6.05ಕ್ಕೆ ಸಂಭವಿಸಿದ ವಿಮಾನ ದುರಂತದಲ್ಲಿ ಮಡಿದ 158 ಮಂದಿಯಲ್ಲಿ 12 ಮಂದಿಯ ಗುರುತನ್ನು ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ಈ ಸಂದರ್ಭದಲ್ಲಿ ಮೃತದೇಹಗಳನ್ನು ತಣ್ಣೀರು ಬಾವಿ ಸಮುದ್ರ ಕಿನಾರೆಯ ಸಮೀಪ ಜಿಲ್ಲಾಡಳಿತದ ವತಿಯಿಂದ ಸರಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ಮಾಡಲಾಗಿತ್ತು. [ಮಂಗಳೂರು ದುರಂತ : ನಿದ್ದೆ ಮಾಡುತ್ತಿದ್ದ ಪೈಲೆಟ್]
ಆದರೆ ಮಡಿದ ಕುಟುಂಬಗಳಿಗೆ ದುರ್ಘಟನೆ ಬಳಿಕ ಏರ್ ಇಂಡಿಯಾ ನೀಡಬೇಕಾದ ಪರಿಹಾರ ಧನ ಎರಡು ವರ್ಷದೊಳಗೆ ನೀಡುವ ಧಾವಂತದಲ್ಲಿತ್ತು. ದುಃಖದ ನಡುವೆ ಬಂದ ಪರಿಹಾರ ಸ್ವೀಕರಿಸಿ ತೆಪ್ಪಗಿದ್ದವರು ಕೆಲವರಾದರೆ, ಇನ್ನು ಕೆಲ ಕುಟುಂಬಗಳು ನಿಜವಾದ ಸಾಂತ್ವನ ನೀಡುವುದಾದರೆ ನ್ಯಾಯಯುತ ಪರಿಹಾರ ನೀಡಬೇಕೆಂದು ಹೋರಾಟಕ್ಕಿಳಿದಿದ್ದರು. [ಮದುವೆಗೆಂದು ಬಂದು ಮಸಣ ಸೇರಿದರು]
ಪರಿಹಾರ ಧನವನ್ನು ವಿಮಾನಯಾನ ಸಂಸ್ಥೆ ಕೊಂಚ ಹೆಚ್ಚಳ ಮಾಡಿತು. ಇದೀಗ ಮಂಗಳೂರು ಹಾಗೂ ಒಬ್ಬರು ಕೇರಳದವರನ್ನು ಹೊರತುಪಡಿಸಿ ಎಲ್ಲರಿಗೂ ಪರಿಹಾರದ ಹಣ ತಲುಪಿದೆ. ಆದರೆ ಇಬ್ಬರು ಮಾತ್ರ ಏರ್ ಇಂಡಿಯಾದ ನಡೆ ವಿರೋಧಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.
ಸಮುದಾಯ ಭವನದ ಕನಸು ಕನಸಾಗಿಯೆ ಉಳಿದಿದೆ
ಆ ದುರಂತದ ಕಹಿ ಘಟನೆ ನೆನಪಿಸುವ ಜಾಗದಲ್ಲೇ, ಅಂದರೆ ಮಳವೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲೇ, ಸಮುದಾಯ ಭವನ ನಿರ್ಮಿಸುವುದಾಗಿ ಏರ್ ಇಂಡಿಯಾ ವಾದ್ಗಾನ ನೀಡಿತ್ತು. ಆದರೆ ಸಮುದಾಯ ಭವನದ ಕನಸು ಇನ್ನೂ ಕನಸಾಗಿಯೆ ಉಳಿದಿದೆ. [ಮಂಗಳೂರು ವಿಮಾನ ದುರಂತದಲ್ಲಿ ಮಡಿದವರಿಗೆ ಸ್ಮಾರಕ]
ಈ ಕುರಿತಂತೆ ಗ್ರಾಮ ಪಂಚಾಯತ್ ಸಹ ಶೇ.10ರಷ್ಟು ಅನುದಾನ ನೀಡುವುದಾಗಿ ಭರವಸೆ ನೀಡಿತ್ತು. ಆದರೆ ಆದಾದ ಬಳಿಕ ಮತ್ತೆ ಏರ್ ಇಂಡಿಯಾ ಈ ಬಗ್ಗೆ ದಿವ್ಯ ಮೌನವಹಿಸಿದೆ. ಪರಿಹಾರ ನೀಡದವರೂ, ಸ್ಮಾರಕ ಕಟ್ಟದವರು ಇನ್ನಾದರೂ ಈ ಬಗ್ಗೆ ಕ್ರಮತೆಗೆದುಕೊಳ್ಳುತ್ತಾರಾ ಅಂತ ಕಾದು ನೋಡಬೇಕು.