ಖೋಟಾ ನೋಟು ಸಾಗಾಟ: ಆರೋಪಿಗೆ 5 ವರ್ಷ ಜೈಲೇ ಗತಿ
ಮಂಗಳೂರು, ಜನವರಿ. 25 : 2012ರಲ್ಲಿ ನಡೆದ ಖೋಟಾ ನೋಟು ಪ್ರಕರಣದ ಆರೋಪಿಯೊಬ್ಬನಿಗೆ ಮಂಗಳೂರಿನ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ 5 ವರ್ಷಗಳ ಜೈಲು ಶಿಕ್ಷೆ ಸಹಿತ 50 ಸಾವಿರ ರೂ. ದಂಡ ವಿಧಿಸಿ ಮಂಗಳವಾರ ಆದೇಶ ಹೊರಡಿಸಿದೆ.
ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಕುಳ ಗ್ರಾಮದ ಅರಿಪುಕಟ್ಟ ನಿವಾಸಿ ಅಬ್ದುಲ್ ಖಾದರ್ (62) ಶಿಕ್ಷೆಗೊಳಗಾದ ಆರೋಪಿ. ಒಂದು ವೇಳೆ ಆರೋಪಿಯು ದಂಡ ತೆರಲು ತಪ್ಪಿದ್ದಲ್ಲಿ 6 ತಿಂಗಳ ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸಬೇಕೆಂದು ಜಿಲ್ಲಾ ಸತ್ರ ನ್ಯಾಯಾಧೀಶ ಕೆ.ಎಸ್. ಬಿಳಗಿ ತೀರ್ಪಿನಲ್ಲಿ ಹೇಳಿದ್ದಾರೆ.[ಮಂಗ್ಳೂರಿನ ಮಾನಸ ರಿಕ್ರಿಯೇಷನ್ ಕ್ಲಬ್ ಮೇಲೆ ದಾಳಿ 14 ಮಂದಿ ಬಂಧನ]
2012 ಫೆಬ್ರವರಿ 6ರಂದು ಮುಂಜಾನೆ ನಗರದ ರೈಲ್ವೆ ಸ್ಟೇಷನ್ ನಿಂದ ಆರೋಪಿ ಖಾದರ್ ಪ್ಲಾಸ್ಟಿಕ್ ಚೀಲದಲ್ಲಿ ಖೋಟಾ ನೋಟುಗಳನ್ನು ಸಾಗಿಸುತ್ತಿದ್ದ.
ಆ ವೇಳೆ ಕರ್ತವ್ಯದಲ್ಲಿದ್ದ ಉತ್ತರ ಪೊಲೀಸ್ ಠಾಣೆಯ ಕಾನ್ಸ್ ಟೇಬಲ್ ಗಳಾದ ಮೋಹನ್ ಕೆ. ವಿ. ಹಾಗೂ ಅಶೋಕ್ ಅವರು ಅನುಮಾನದ ಆಧಾರದ ಮೇಲೆ ಖಾದರ್ ನನ್ನು ಬಂಧಿಸಿದ್ದರು.
ಆ ಸಂದರ್ಭದಲ್ಲಿ ನೋಟಿನ ಚೀಲವನ್ನು ಬಿಟ್ಟು ಪರಾರಿಯಾಗಲು ಯತ್ನಿಸಿದ್ದ ಆರೋಪಿಯನ್ನು ಪೊಲೀಸರು ಬೆನ್ನತ್ತಿ ಹಿಡಿದು ಪರಿಶೀಲಿಸಿದಾಗ 100 ರುಪಾಯಿ ನೋಟುಗಳ ಕಂತೆಗಳು ಪತ್ತೆಯಾಗಿವೆ.
ಅಂದಿನ ಪಿಎಸ್ಐ ನಾರಾಯಣ ಮತ್ತಷ್ಟು ವಿಚಾರಣೆ ನಡೆಸಿದಾಗ ಚೇರ್ಕಳದ ಸಿ. ಎಚ್. ಅಮ್ಮು ಹಣ ಪೂರೈಸಿದ್ದು, ಕಮಿಷನ್ ಆಸೆಯಿಂದ ಹಣ ಸಾಗಾಟ ಮಾಡುವುದಾಗಿ ಹೇಳಿದ್ದಾನೆ.
ತದನಂತರ ಆರೋಪಿ ಅಬ್ದುಲ್ ಖಾದರ್ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ. ಆದರೆ, ಇದೀಗ ಖೋಟಾ ನೋಟುಗಳ ದೃಢೀಕರಣದ ಹಿನ್ನಲೆಯಲ್ಲಿ ಆರೋಪಿಗೆ ಸತ್ರ ನ್ಯಾಯಾಲಯ 5 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.