ಇದು 56 ವಿದೇಶಿಯರ ಮಲಬಾರ್ ಆಟೋ ರಿಕ್ಷಾ ಚಾಲೆಂಜ್
24 ಆಟೋಗಳಲ್ಲಿ 56 ವಿದೇಶಿಯರು 'ಆಟೋ ರಿಕ್ಷಾ ಚಾಲೇಂಜ್ ಮಲಬಾರ್ ರ್ಯಾಂಪೇಜ್ -2017’ ರ್ಯಾಲಿ ಹಮ್ಮಿಕೊಂಡಿದ್ದಾರೆ. ಈ ಸಾಹಸಿ ವಿದೇಶಿಯರ ತಂಡವು ತಿರುವಂತಪುರದಿಂದ ಆಟೋ ಜರ್ನಿ ಆರಂಭಿಸಿ ಗೋವಾದಲ್ಲಿ ಸಮಾರೋಪಗೊಳಿಸಲಿದ್ದಾರೆ.
ಮಂಗಳೂರು, ಏಪ್ರಿಲ್: ವಿದೇಶಿಯರಿಗೆ ಭಾರತ ದೇಶದ ಮೇಲೆ ವಿಶೇಷ ಆಕರ್ಷಣೆ. ಅಷ್ಟೇ ಪ್ರೀತಿ, ದೇಶದ ಮಕ್ಕಳ ಮೇಲೆ ಅದೇನೋ ಅಭಿಮಾನ. ಇದಕ್ಕೆ ನಿದರ್ಶನವೇ ಈ ಸ್ಟೋರಿ.
24 ಆಟೋಗಳಲ್ಲಿ 56 ಮಂದಿ ವಿದೇಶಿಯರು 'ಆಟೋ ರಿಕ್ಷಾ ಚಾಲೇಂಜ್ ಮಲಬಾರ್ ರ್ಯಾಂಪೇಜ್ -2017' ರ್ಯಾಲಿ ಹಮ್ಮಿಕೊಂಡಿದ್ದಾರೆ. ಈ ಸಾಹಸಿ ವಿದೇಶಿಯರ ತಂಡವು ತಿರುವಂತಪುರದಿಂದ ತಮ್ಮ ಆಟೋ ಜರ್ನಿ ಆರಂಭಿಸಿ ಗೋವಾದಲ್ಲಿ ಸಮಾರೋಪಗೊಳಿಸಲಿದ್ದಾರೆ.
ತಿರುವನಂತಪುರದಿಂದ ಹೊರಟ ಆಟೋ ಪ್ರಯಾಣವು ಅಲಪುಝ, ಕಲ್ಲಿಕೋಟೆ ಮೂಲಕ ಮಂಗಳೂರಿಗೆ ಆಗಮಿಸಿದ್ದು ಇಲ್ಲಿನ ಬೀಕರ್ಣಕಟ್ಟೆ ಸರಕಾರಿ ಶಾಲೆ ಮೈದಾನದಲ್ಲಿ ರೌಂಡ್ ಟೇಬಲ್ ಇಂಡಿಯಾದ ಸದಸ್ಯರು ಇವರನ್ನು ಸ್ವಾಗತಿಸಿದರು.. ನಂತರ ಇದೀಗ ಉಡುಪಿ, ಮುರುಡೇಶ್ವರ ಮೂಲಕ ಗೋವಾಗೆ ಇವರು ತೆರಳಲಿದ್ದಾರೆ.[ಹೈಟೆನ್ಶನ್ ತಂತಿ ತಗಲಿ ಮಂಗಳೂರಿನಲ್ಲಿ ಯುವಕ ಸಾವು]
ಹೋಗೆ ವಿಶಿಷ್ಠವಾದ ರ್ಯಾಲಿಯನ್ನು ಈ ವಿದೇಶಿಯರು ಹಮ್ಮಿಕೊಂಡಿದ್ದಾರೆ.ಈ ಯಾತ್ರೆ ಜತೆಗೆ ಶಾಲೆಗಳಿಗೆ ನೆರವನ್ನೂ ಇವರು ನೀಡುತ್ತಿದ್ದಾರೆ.
ಚಿತ್ತಾಕರ್ಷಕ ಆಟೋಗಳು
ಈ ವಿದೇಶಿಯರ ತಂಡದಲ್ಲಿ ಇಂಗ್ಲೆಂಡ್, ನ್ಯೂಝಿಲೆಂಡ್, ಸ್ಪೇನ್, ಜರ್ಮನಿ, ಆಸ್ಟ್ರೇಲಿಯಾ, ಮಲೇಷ್ಯಾ, ದಕ್ಷಿಣ ಆಫ್ರಿಕಾ ಮೊದಲಾದ ರಾಷ್ಟ್ರದವರಿದ್ದಾರೆ. ಆಟೋಗಳನ್ನು ದೇಶದ ಪ್ರವಾಸಿ ತಾಣಗಳ ಚಿತ್ರಗಳು, ಕ್ರಿಕೆಟ್ ತಾರೆಯರ ವ್ಯಂಗ್ಯ ಚಿತ್ರಗಳ ಮೂಲಕ ಆಕರ್ಷಕವಾಗಿ ಅಲಂಕರಿಸಲಾಗಿದೆ.[ಇಂಡಿಯನ್ ಮುಜಾಹಿದ್ದೀನ್ ಉಗ್ರರು ಮಂಗಳೂರಿನಿಂದ ಧಾರವಾಡ ಜೈಲಿಗೆ]
73 ವರ್ಷದ ಹಿರಿಯರೂ ಇದ್ದಾರೆ
73 ವರ್ಷದ ಹಿರಿಯರು ಸೇರಿದಂತೆ ವಿವಿಧ ವಯೋಮಾನದ ವಿದೇಶಿಯರು ತಂಡದಲ್ಲಿದ್ದಾರೆ. "ಒಂದು ರಿಕ್ಷಾದಲ್ಲಿ 3 ಮಂದಿ ಪ್ರಯಾಣಿಸುತ್ತೇವೆ. ಒಂದು ಗಂಟೆಗೆ ಈ ರಿಕ್ಷಾ 50-60 ಕಿ ಮೀ ಓಡುತ್ತದೆ. ಈ ರಿಕ್ಷಾಗಳಿಗೆ ಬರೀ 8 ಲೀಟರ್ ಪೆಟ್ರೋಲ್ ಮಾತ್ರ ಹಾಕಬಹುದಾಗಿದೆ. ಹಾಗಾಗಿ ಪದೇ ಪದೇ ಪೆಟ್ರೋಲ್ ತುಂಬಿಸಬೇಕಾಗುತ್ತದೆ. ಅಲ್ಲದೆ ಈ ಆಟೋ ಪದೇ ಪದೇ ರಿಪೇರಿಯಾಗುತ್ತಾ ಇರುತ್ತದೆ. ಇದರಿಂದ ಮೆಕಾನಿಕ್ ಕರೆಸಿಕೊಳ್ಳುವ ಪ್ರಮೇಯ ಎದುರಾಗುತ್ತದೆ. ಕೆಲವೊಮ್ಮೆ ನಾವೇ ರಿಪೇರಿ ಕೆಲಸ ಮಾಡುತ್ತೇವೆ," ಎನ್ನುತ್ತಾರೆ ಈ ವಿದೇಶಿಯರು.[ತುಳು ನಾಡಿಗೆ ಇಂದು ಹೊಸ ವರ್ಷದ 'ಬಿಸು ಪರ್ಬ']
ಸರಕಾರಿ ಶಾಲೆಗಳಿಗೆ ನೆರವು
ತಿರುವನಂತಪುರ, ಅಲಪುಝ, ಕಲ್ಲಿಕೋಟೆ , ಮಂಗಳೂರು, ಉಡುಪಿ, ಮುರುಡೇಶ್ವರ, ಗೋವಾ ಈ ಸ್ಥಳಗಳಲ್ಲಿರುವ ಬಡ ಸರ್ಕಾರಿ ಶಾಲೆಗಳಿಗೆ 'ರೌಂಡ್ ಟೇಬಲ್ 115' ಎಂಬ ಹೆಸರಿನಲ್ಲಿ ಇ ವಿದೇಶಿಯರ ತಂಡ ಹಣದ ನೆರವು ನೀಡುತ್ತಿದೆ. ಈ ಮೂಲಕ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಲಭಿಸಲಿ ಎನ್ನುವ ಆಸೆಯೊಂದಿಗೆ 'ಮಲಬಾರ್ ಆಟೋ ರ್ಯಾಪೇಜ್' ರ್ಯಾಲಿಯನ್ನು ವಿದೇಶಿಯರು ಹಮ್ಮಿಕೊಂಡಿದ್ದಾರೆ.
ಅಂಬೇಡ್ಕರ್ ಜನ್ಮ ದಿನಾಚರಣೆ
ಪ್ರತ್ಯೇಕ ಕಾರ್ಯಕ್ರಮದಲ್ಲಿ ಮಂಗಳೂರು ಜಿಲ್ಲಾಡಳಿತ, ಜಿಲ್ಲಾಪಂಚಾಯಿತಿ, ಮಂಗಳೂರು ಮಹಾನಗರ ಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಸಂವಿಧಾನ ಶಿಲ್ಪಿ, ಭಾರತ ರತ್ನ ಬಿ. ಆರ್. ಅಂಬೇಡ್ಕರ್ ಅವರ 126ನೇ ಜನ್ಮದಿನಾಚರಣೆಯನ್ನು ಇಂದು ಬೆಳಗ್ಗೆ 10.30ಕ್ಕೆ ಮಂಗಳೂರು ಪುರಭವನದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.
ಐವರು ಸಾಧಕರಿಗೆ ಸನ್ಮಾನ
ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಪುರಭವನದ ಮುಂಭಾಗದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಹೂಮಾಲೆ ಅರ್ಪಸಿದರು. ನಂತರ ಪುರಭವನದಲ್ಲಿ ನಡೆದ ಕಾರ್ಯಕ್ರಮವನ್ನು ರಮಾನಾಥ ರೈ ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಐವರು ಸಾಧಕರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಶಾಸಕ ಐವನ್ ಡಿಸೋಜ, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮೇಯರ್ ಕವಿತಾ ಸನಿಲ್, ಉಪ ಮೇಯರ್ ರಜನೀಶ್, ಜಿಲ್ಲಾಧಿಕಾರಿ ಡಾ. ಕೆ. ಜಿ. ಜಗದೀಶ್, ಮಂಗಳೂರು ನಗರ ಪೊಲೀಸ್ ಆಯುಕ್ತ ಎಂ.ಚಂದ್ರಶೇಖರ್, ಜಿಪಂ ಸಿಇಒ ಎಂ. ಆರ್. ರವಿ, ಅಪರ ಜಿಲ್ಲಾಧಿಕಾರಿ ಕುಮಾರ್, ಮನಪಾ ಆಯುಕ್ತ ಮುಹಮ್ಮದ್ ನಝೀರ್, ಅರಣ್ಯ ಸಂರಕ್ಷಣಾಧಿಕಾರಿ ಹನುಮಂತಪ್ಪ, ಡಿಸಿಪಿಗಳಾದ ಡಾ.ಸಂಜೀವ್ ಪಾಟೀಲ್, ಶಾಂತರಾಜು ಮೊದಲಾದವರು ಉಪಸ್ಥಿತರಿದ್ದರು.
ಮೇ ತಿಂಗಳಿನಿಂದ ಮಂಗಳೂರಿಗರಿಗೆ ನಿತ್ಯ ನೀರು
ಸದ್ಯ ಮಂಗಳೂರಲ್ಲಿ ನೀರಿನ ಪೂರೈಕೆಯಲ್ಲಿ ಮಿತಿ ಹೇರಲಾಗಿದೆ. ಇದು ಕೇವಲ ಈ ತಿಂಗಳಿನವರೆಗೆ ಮಾತ್ರ. ಮೇ ತಿಂಗಳ ಆರಂಭದಿಂದ ನಿತ್ಯ ನೀರು ಪೂರೈಸಲಾಗುವುದೆಂದು ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಕವಿತಾ ಸನಿಲ್ ಹೇಳಿದ್ದಾರೆ.
ಮೇ ನಿಂದ ನಿತ್ಯ ನೀರು ಪೂರೈಕೆ ಮಾಡಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ. ಇದಕ್ಕಾಗಿಯೇ ನಾವು ಎಪ್ರಿಲ್ ತಿಂಗಳಿನಲ್ಲಿ ನಾಲ್ಕು ದಿನ ನಿರಂತರ ನೀರು ಪೂರೈಕೆ ಮಾಡಿ ಹಾಗೂ ಎರಡು ದಿನ ನೀರು ಸ್ಥಗಿತ ಮಾಡುವ ನಿರ್ಧಾರವನ್ನು ತೆಗೆದುಕೊಂಡಿದ್ದು' ಎಂದು ಮೇಯರ್ ಕವಿತಾ ಹೇಳಿದ್ದಾರೆ.
ಡೋಂಟ್ ವರಿ - ಡ್ಯಾಂ ನಲ್ಲಿ ಸಾಕಷ್ಟು ನೀರಿದೆ
ಸದ್ಯ ಮೂರು ಟ್ಯಾಂಕರ್ ಗಳ ಮೂಲಕ ದಿನಾಲೂ 160 ಎಂಎಲ್ ಡಿ ನೀರನ್ನ ಪಂಪಿಂಗ್ ಮಾಡಲಾಗುತ್ತಿದೆ. ಬಂಟ್ವಾಳ ತಾಲೂಕಿನಲ್ಲಿರುವ ತುಂಬೆ ಡ್ಯಾಂ ನಲ್ಲಿ 23 ದಿನಗಳಿಗೆ ಆಗುವಷ್ಟು ಹಾಗೂ ಎಎಂಆರ್ ನಲ್ಲಿ 32 ದಿನಗಳಿಗೆ ಸಾಕಾಗುವಷ್ಟು ನೀರು ಇದೆ. ಹೀಗಾಗಿ ಮೇನಿಂದ ನಿರಂತರ ನೀರು ಪೂರೈಕೆ ಸಾಧ್ಯವಿದೆ.
ನಿರಂತರ ನೀರು ಪೂರೈಕೆಗೆ ಪಾಲಿಕೆ ಕಡಿವಾಣ ಹಾಕಿದಾಗ ವಿಪಕ್ಷ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿತ್ತು ಮಾತ್ರವಲ್ಲ ಪಾಲಿಕೆ ಎದುರೇ ಪ್ರತಿಭಟನೆ ಸಹ ನಡೆಸಿತ್ತು.