ಕೊರೊನಾ ಹೋರಾಟಕ್ಕೆ ಪಾಕೆಟ್ ಮನಿ ನೀಡಿದ ಮಂಗಳೂರಿನ ಪುಟಾಣಿ
ಮಂಗಳೂರು, ಏಪ್ರಿಲ್ 02: ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಆರ್ಥಿಕ ನೆರವಿಗೆ ರಾಜ್ಯ ಸರ್ಕಾರ ಪರಿಹಾರ ನಿಧಿ ಮೂಲಕ ಮನವಿ ಮಾಡಿದ್ದು, ಮಂಗಳೂರಿನ ಪುಟಾಣಿಯೊಬ್ಬ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ತನ್ನ ಪಾಕೆಟ್ ಮನಿಯನ್ನೇ ದೇಣಿಗೆ ನೀಡಿದ್ದಾನೆ.
ಕೊರೊನಾ ವೈರಸ್ ಮಹಾಮಾರಿ ಹರಡುವುದನ್ನು ತಡೆಯಲು ಸಾಕಷ್ಟು ಪ್ರಯತ್ನಗಳು ನಡೆಯುತ್ತಿವೆ. ಈ ನಡುವೆ ಸರ್ಕಾರ ಕೊರೊನಾ ವಿರುದ್ಧದ ಹೋರಾಟಕ್ಕೆ ಆರ್ಥಿಕ ನೆರವಿಗೆ ಕೋರಿದ್ದು, ಈ ಕೋರಿಕೆಗೆ ಹಲವು ಉದ್ಯಮಿಗಳು, ಕ್ರೀಡಾಪಟುಗಳು, ಸಿನಿಮಾ ತಾರೆಯರು ತಮ್ಮ ನೆರವನ್ನು ನೀಡಿದ್ದಾರೆ.
ಕೊರೊನಾ ಪರಿಹಾರ ನಿಧಿಗೆ ಕೋಟಿ ಕೊಟ್ಟ ಬೆಳಗಾವಿಯ ಬಿ.ಟಿ ಪಾಟೀಲರು
ಹಾಗೆಯೇ ಈ ಐದು ವರ್ಷದ ಪುಟಾಣಿ ತಾನು ಪಿಗ್ಗಿ ಬ್ಯಾಂಕ್ ನಲ್ಲಿ ಕೂಡಿಟ್ಟ ಹಣವನ್ನು ಪರಿಹಾರ ನಿಧಿಗೆ ನೀಡಿ ಮೆಚ್ಚುಗೆಗೆ ಪಾತ್ರನಾಗಿದ್ದಾನೆ. ನಗರದ ಫಳ್ನೀರ್ ನ ಅತಾ-ವುರ್-ರೆಹಮಾನ್ ಎಂಬ ಬಾಲಕ ಯನೆಪೊಯ ಮೊಂಟೆಸ್ಸರಿ ಶಾಲೆಯಲ್ಲಿ ಓದುತ್ತಿದ್ದು, ತಾನು ಹುಂಡಿಯಲ್ಲಿ ಸಂಗ್ರಹಿಸಿದ್ದ ಹಣವನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧು ಬಿ ರೂಪೇಶ್ ಅವರ ಮೂಲಕ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದಾನೆ.
ಭಟ್ಕಳ ಮೂಲದವರಾದ ಅತಾ-ವುರ್-ರೆಹಮಾನ್ ಪೋಷಕರು ಸದ್ಯ ಮಂಗಳೂರಿನಲ್ಲಿ ನೆಲೆಸಿದ್ದಾರೆ. ಪೋಷಕರು ರೆಹಮಾನ್ ನನ್ನು ಜಿಲ್ಲಾಧಿಕಾರಿ ಕಚೇರಿಗೆ ಕರೆತಂದಿದ್ದು ಬಾಲಕ ಜಿಲ್ಲಾಧಿಕಾರಿ ಮೂಲಕ ಹಣ ನೀಡಿದ್ದಾನೆ.