ಮಂಗಳೂರು: ಮೃತರ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ವಿತರಣೆ
ಮಂಗಳೂರು ಮೇ 30 : ಮಂಗಳೂರಿನಾದ್ಯಂತ ನಿನ್ನೆ ಸುರಿದ ಮಹಾ ಮಳೆ ಇಂದು ಬಿಡುವು ಪಡೆದಿದೆ. ನಿನ್ನೆ ಸುರಿದ ಭಾರೀ ಮಳೆಯ ಬಳಿಕ ಕರಾವಳಿಯಲ್ಲಿ ಮಳೆಯ ಪ್ರಮಾಣದಲ್ಲಿ ಇಳಿಕೆ ಕಂಡು ಬಂದಿದ್ದು, ಮಂಗಳೂರಿನಲ್ಲಿ ಜನ ಜೀವನ ಸಹಜ ಸಹಜ ಸ್ಥಿತಿಗೆ ಮರಳುತ್ತಿದೆ.
ಮಂಗಳೂರಿನ ಸುತ್ತಮುತ್ತ ಸೃಷ್ಟಿಯಾಗಿದ್ದ ನೆರೆಯ ಪರಿಸ್ಥಿತಿ ಸುಧಾರಿಸುತ್ತಿದೆ. ನಿನ್ನೆ ಸುರಿದ ಮಹಾಮಳೆಗೆ ಮಂಗಳೂರಿನಲ್ಲಿ ಭಾರೀ ಪ್ರಮಾಣದಲ್ಲಿ ಆಸ್ತಿಪಾಸ್ತಿಗೆ ನಷ್ಟುಂಟಾಗಿದ್ದು, ಕೋಟ್ಯಾಂತರ ರೂಪಾಯಿ ನಷ್ಟ ಸಂಭವಿಸಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಈ ಗಾಗಲೇ ಮಂಗಳೂರಿಗೆ ಆಗಮಿಸಿದ್ದು, ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿದೆ.
ಕರಾವಳಿಯಲ್ಲಿ ಮಳೆಯ ಅಬ್ಬರ: ಇಬ್ಬರು ಬಲಿ, ಭಾರಿ ಆಸ್ತಿ ಹಾನಿ
ನಿನ್ನೆ ಸುರಿದ ಮಹಾಮಳೆಗೆ ಸಿಲುಕಿ ವಯೋವೃದ್ಧೆ ಸೇರಿದಂತೆ ಮಹಿಳೆಯೊಬ್ಬರು ಮೃತ ಪಟ್ಟಿದ್ದು, ಈ ಇಬ್ಬರ ಕುಟುಂಬಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಇಂದು ಮುಂಜಾನೆ ಪರಿಹಾರ ವಿತರಿಸಿದರು. ನಿನ್ನೆ ಸುರಿದ ಮಳೆಗೆ ಉದಯನಗರದ ಮೋಹಿನಿ (60) ಹಾಗು ಕೊಡಿಯಾಲ್ ಬೈಲ್ ನಿವಾಸಿ ಮುಕ್ತಾಬಾಯಿ(80) ಸಾವನ್ನಪ್ಪಿದರು.
ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಯ ಶವಾಗಾರದ ಬಳಿ ಆಗಮಿಸಿದ ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರದ ಚೆಕ್ ವಿತರಿಸಿದರು.
ಚಿತ್ರಗಳು : ಮಳೆಯ ರುದ್ರನರ್ತನಕ್ಕೆ ನಲುಗಿದ ದಕ್ಷಿಣ ಕನ್ನಡ, ಉಡುಪಿ
ಈ ಮಧ್ಯೆ, ಮಂಗಳೂರು ನಗರದ ಎಲ್ಲ ಪ್ರಮುಖ ಚರಂಡಿಗಳ ಪರಿಶೀಲನೆಯನ್ನು ತಕ್ಷಣ ನಡೆಸುವಂತೆ ಮಹಾನಗರ ಪಾಲಿಕೆಯ ಆಯುಕ್ತರು ಮತ್ತು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಆದೇಶ ನೀಡಿದ್ದಾರೆ. ಚರಂಡಿಗಳ ಒತ್ತುವರಿ ಕಂಡುಬಂದರೆ ನಿರ್ದಾಕ್ಷಿಣ್ಯವಾಗಿ ತೆರವು ಮಾಡಬೇಕು ಎಂದು ಪಾಲಿಕೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅದೇಶ ನೀಡಿದ್ದಾರೆ.
ವರುಣ ಇಂದು ಕರಾವಳಿಯಲ್ಲಿ ಬಿಡುವು ನೀಡಿದ್ದು, ಜನ ನಿರಾಳರಾಗಿದ್ದಾರೆ. ಪ್ರವಾಹದ ಪರಿಸ್ಥಿತಿ ಸಹಜ ಸ್ಥಿತಿಗೆ ಬಂದಿದೆ. ಒಟ್ಟು ಮಳೆ ಹಾನಿಯ ಬಗ್ಗೆ ಇನ್ನಷ್ಟೇ ಅಂದಾಜು ಮಾಡಬೇಕಾಗಿದೆ.