ಫೆ.8ರಿಂದ ಬಾಹುಬಲಿಗೆ 4ನೇ ಮಹಾ ಮಸ್ತಕಾಭಿಷೇಕ: ರತ್ನಗಿರಿ ಬೆಟ್ಟದಲ್ಲಿ ಭರ್ಜರಿ ಸಿದ್ಧತೆ
ಮಂಗಳೂರು, ಜನವರಿ 30: ಶ್ರೀ ಕ್ಷೇತ್ರ ಧರ್ಮಸ್ಥಳದ ರತ್ನಗಿರಿ ಬೆಟ್ಟದಲ್ಲಿ ವಿರಾಜಮಾನನಾದ ವೈರಾಗ್ಯ ಮೂರ್ತಿ, ತ್ಯಾಗದ ಸಂಕೇತವಾದ ಬಾಹುಬಲಿಯ ಮಹಾ ಮಸ್ತಕಾಭಿಷೇಕದ ಎಲ್ಲಾ ಸಿದ್ಧತೆಗಳು ಅಂತಿಮ ಹಂತ ತಲುಪಿವೆ.
ಫೆಬ್ರವರಿ 8 ರಿಂದ 19ರವರೆಗೆ ನಡೆಯಲಿರುವ ಈ ಅಭೂತಪೂರ್ವ ಕ್ಷಣಕ್ಕೆ ಸಾಕ್ಷಿಯಾಗಲು ದೇಶ ಹಾಗೂ ವಿದೇಶದ ಲಕ್ಷಾಂತರ ಮಂದಿ ಧರ್ಮಸ್ಥಳಕ್ಕೆ ಆಗಮಿಸಲಿದ್ದಾರೆ. ಎಲ್ಲಾ ಜನರಲ್ಲೂ ಶಾಂತಿ, ಸಂಯಮ, ಸಹನೆ, ಸಹಬಾಳ್ವೆಯ ಸಂದೇಶವನ್ನು ಕೊಡುವ ಮುಖ್ಯ ಉದ್ದೇಶದಿಂದ ಈ ಮಹಾ ಮಸ್ತಕಾಭಿಷೇಕವನ್ನು ಮಾಡಲಾಗುತ್ತಿದೆ.
ಧರ್ಮಸ್ಥಳದ ಬಾಹುಬಲಿಗೆ ಫೆ.9ರಿಂದ ಮಹಾಮಸ್ತಕಾಭಿಷೇಕ
ಮಹಾ ಮಸ್ತಕಾಭಿಷೇಕದ ಹಿನ್ನೆಲೆಯಲ್ಲಿ ರಾಜ್ಯ ಸರಕಾರವೂ ಎಲ್ಲಾ ಸಹಕಾರವನ್ನೂ ನೀಡಿದ್ದು, ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಶ್ರೀ ಕ್ಷೇತ್ರದಲ್ಲಿ ಶಾಶ್ವತ ಕಾಮಗಾರಿಗಳನ್ನೂ ಕೈಗೊಳ್ಳಲಾಗುತ್ತಿದೆ.
ದಕ್ಷಿಣ ಭಾರತದ ಅತ್ಯಂತ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ದಕ್ಷಿಣಕನ್ನಡ ಜಿಲ್ಲೆಯ ಧರ್ಮಸ್ಥಳದ ರತ್ನಗಿರಿ ಬೆಟ್ಟದಲ್ಲಿ ವಿರಾಜಮಾನನಾದ ಬಾಹುಬಲಿಗೆ ಇದೀಗ ಮಹಾ ಮಸ್ತಕಾಭಿಷೇಕದ ಸಂಭ್ರಮ. ಇದೇ ಬರುವ ಫೆಬ್ರವರಿ 8 ರಿಂದ 19ರವರೆಗೆ ನಡೆಯುವ ಈ ಅಭೂತ ಪೂರ್ವ ಕ್ಷಣದಲ್ಲಿ ಭಾಗಿಯಾಗಲು ದೇಶ ಹಾಗೂ ವಿದೇಶದಿಂದ ಲಕ್ಷಾಂತರ ಮಂದಿ ಧರ್ಮಸ್ಥಳಕ್ಕೆ ಆಗಮಿಸಲಿದ್ದಾರೆ.
ಮಹಾ ಮಸ್ತಕಾಭಿಷೇಕದ ಹಿನ್ನೆಲೆಯಲ್ಲಿ ರತ್ನಗಿರಿ ಬೆಟ್ಟದಲ್ಲಿ ಎಲ್ಲಾ ಸಿದ್ಧತೆಗಳನ್ನೂ ಮಾಡಲಾಗಿದ್ದು, ಅಂತಿಮ ಸಿದ್ಧತೆ ನಡೆಸಲಾಗುತ್ತಿದೆ. ಬಾಹುಬಲಿಗೆ ಮಜ್ಜನಾಭಿಷೇಕ ಮಾಡಲು ಅನುಕೂಲವಾಗುವಂತೆ ವಿಗ್ರಹದ ಸುತ್ತಲೂ ಅಟ್ಟಣಿಗೆ ಕಟ್ಟುವ ಕಾಮಗಾರಿಯು ಈಗಾಗಲೇ ಕೊನೆಯ ಹಂತದಲ್ಲಿದೆ.
ಮಜ್ಜನ ವೀಕ್ಷಿಸಲು ಗ್ಯಾಲರಿ ವ್ಯವಸ್ಥೆ
ಅಲ್ಲದೆ, ಈ ಮಜ್ಜನವನ್ನು ಯಾವುದೇ ಅಡೆತಡೆಯಿಲ್ಲದೆ ಭಕ್ತಾಧಿಗಳು ವೀಕ್ಷಿಸಲು ಗ್ಯಾಲರಿಯ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ. ಮಸ್ತಕಾಭಿಷೇಕದ ಜೊತೆಗೆ ಬಾಹುಬಲಿಯ ಶಾಂತಿ, ಸಾಮರಸ್ಯೆ, ಸಹನೆ, ಸಂಯಮದ ಸಂದೇಶವನ್ನೂ ಜನತೆಗೆ ನೀಡುವ ಉದ್ದೇಶವನ್ನೂ ಈ ಸಂಭ್ರಮ ಹೊಂದಿದೆ. ಸಮಾರಂಭದ ಹಿನ್ನೆಲೆಯಲ್ಲಿ ಸಂತ ಸಮ್ಮೇಳನವೂ ನಡೆಯಲಿದ್ದು, ವಿವಿಧ ಧರ್ಮಗುರುಗಳೂ ಈ ಸಮ್ಮೇಳನದಲ್ಲಿ ಭಾಗಿಯಾಗಲಿದ್ದಾರೆ.
ವಿನೂತನವಾದ ಮೆರವಣಿಗೆ
ಅಷ್ಟೇ ಅಲ್ಲ, ವಿನೂತನವಾದ ಮೆರವಣಿಗೆಯನ್ನು ಕಾರ್ಯಕ್ರಮದ ಹಿನ್ನೆಲೆಯಲ್ಲಿ ಜೋಡಿಸಿಕೊಳ್ಳಲಾಗಿದ್ದು, ಜಾನಪದ ಕಲಾ ತಂಡಗಳ ಜೊತೆಗೆ ಬಾಹುಬಲಿಯ ಜೀವನ ವೃತ್ತಾಂತದ ದೃಶ್ಯರೂಪಕವನ್ನೂ ಮೆರವಣಿಗೆಯಲ್ಲಿ ಸಾದರಪಡಿಸುವ ಪ್ರಯತ್ನವೂ ನಡೆಯಲಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿ ವೀರೇಂದ್ರ ಹೆಗ್ಗಡೆ ತಿಳಿಸದ್ದಾರೆ.
ಧರ್ಮಸ್ಥಳ ಶ್ರೀ ಬಾಹುಬಲಿಗೆ 2019 ಫೆಬ್ರವರಿಯಲ್ಲಿ 4 ನೇ ಮಹಾಮಜ್ಜನ
2 ಕೋಟಿ ರೂಪಾಯಿ ಅನುದಾನ
ಮಹಾಮಸ್ತಕಾಭಿಷೇಕ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಯಾವುದೇ ತೊಂದರೆಯಾಗದಂತೆ ಇಡೀ ಜಿಲ್ಲಾಡಳಿತವೂ ಹಲವು ವ್ಯವಸ್ಥೆಗಳನ್ನು ಮಾಡಿದೆ. ರಕ್ಷಣೆ ಹಾಗೂ ಬಂದೋಬಸ್ತ್ ಗಾಗಿ ಪೋಲೀಸ್ ಇಲಾಖೆ ಸನ್ನದ್ಧವಾಗಿದ್ದು, ಗೃಹರಕ್ಷಕ ದಳ, ಪೋಲೀಸ್ ಇಲಾಖೆಯ ಜೊತೆಗೆ ಕೈಜೋಡಿಸಲಿದೆ. ಕಾರ್ಯಕ್ರಮಕ್ಕೆ ಆಗಮಿಸುವ ಜನರಿಗೆ ಯಾವುದೇ ತೊಂದರೆಯಾಗದಿರಲಿ ಎನ್ನುವ ಕಾರಣಕ್ಕೆ ಹೊಸ ರಸ್ತೆಗಳ ನಿರ್ಮಾಣ ಕಾರ್ಯವೂ ಭರದಿಂದ ಸಾಗುತ್ತಿದೆ. ಲೋಕೋಪಯೋಗಿ ಇಲಾಖೆಯು ಸುಮಾರು 23 ಕೋಟಿ ರೂಪಾಯಿ ವೆಚ್ಚದಲ್ಲಿ ರಸ್ತೆ ಕಾಮಗಾರಿಗಳನ್ನು ಕೈಗೊಂಡಿದ್ದು, ಪ್ರವಾಸೋದ್ಯಮ ಇಲಾಖೆಯಿಂದಲೂ 2 ಕೋಟಿ ರೂಪಾಯಿ ಅನುದಾನದ ನಿರೀಕ್ಷೆಯನ್ನೂ ಇಟ್ಟುಕೊಳ್ಳಲಾಗಿದೆ.
ಲಕ್ಷಾಂತರ ಮಂದಿ ಆಗಮನ
ಧರ್ಮಸ್ಥಳದ ರತ್ನಗಿರಿ ಬೆಟ್ಟದಲ್ಲಿರುವ ಬಾಹುಬಲಿಗೆ ಇದು ನಾಲ್ಕನೇ ಮಹಾ ಮಸ್ತಕಾಭಿಷೇಕವಾಗಿದೆ. ಈ ಬಾರಿ ಹಲವು ವಿಶೇಷತೆಗಳ ಮೂಲಕ ಮಹಾ ಮಸ್ತಕಾಭಿಷೇಕ ನಡೆಯಲಿದ್ದು, ಲಕ್ಷಾಂತರ ಮಂದಿ ಜನರ ಆಗಮನದ ನಿರೀಕ್ಷೆಯನ್ನೂ ಇಟ್ಟುಕೊಳ್ಳಲಾಗಿದೆ.
ರಾಜಕಾರಣಿಗಳಿಗೆ ಬಂದ್ ಆಗಲಿದೆಯೇ ಧರ್ಮಸ್ಥಳ ಶಾಂತಿವನ ಪ್ರಕೃತಿ ಚಿಕಿತ್ಸಾಲಯ?