ಮುಚ್ಚಳಿಕೆ ಬರೆದು, ಹಿಜಾಬ್ ಕಳಚಿಟ್ಟು ತರಗತಿಗೆ ಬಂದ 46 ವಿದ್ಯಾರ್ಥಿನಿಯರು
ಮಂಗಳೂರು, 9: ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿಜಾಬ್ ವಿವಾದ ತಣ್ಣಗಾಗುವ ಲಕ್ಷಣಗಳು ಕಾಣುತ್ತಿದೆ. ತಮ್ಮ ಪಟ್ಟು ಸಡಿಲಿಸಿ ಕಾಲೇಜಿನ ಸುಮಾರು 46 ವಿದ್ಯಾರ್ಥಿನಿಯರು ಹಿಜಾಬ್ ಕಳಚಿಟ್ಟು ತರಗತಿಗಳಿಗೆ ಹಾಜರಾಗಿದ್ದಾರೆ. ಒಟ್ಟು 101 ಮುಸ್ಲಿಂ ವಿದ್ಯಾರ್ಥಿನಿಯರು ಇರುವ ಉಪ್ಪಿನಂಗಡಿ ಪ್ರಥಮ ದರ್ಜೆ ಕಾಲೇಜು ಇದಾಗಿದ್ದು, ಕಳೆದ ಒಂದು ವಾರದಿಂದ ಹಿಜಾಬ್ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯಾದ್ಯಂತ ಸುದ್ದಿಯಾಗಿತ್ತು.
ರಾಜ್ಯದಲ್ಲಿ ಹಿಜಾಬ್ ವಿವಾದ ತಣ್ಣಗಾಗಿದ್ದ ಸಂದರ್ಭದಲ್ಲಿ ಮಂಗಳೂರಿನ ಶ್ವವಿದ್ಯಾಲಯ ಕಾಲೇಜಿನ ಕೆಲವು ವಿದ್ಯಾರ್ಥಿನಿಯರು ಮತ್ತೆ ಹಿಜಾಬ್ ತೊಡುತ್ತೇವೆ, ವಿಶ್ವವಿದ್ಯಾಲಯದಲ್ಲಿ ನಿಯಮದಲ್ಲಿ ಹಿಜಾಬ್ ತೊಡಲು ಅವಕಾಶ ಇದೆ ಎಂದು ಹೇಳಿ ಮೊದಲು ಹಿಜಾಬ್ ವಿವಾದ ಪುನಾರಂಭ ಮಾಡಿದರು. ಈ ವಿವಾದ ರಾಜ್ಯಮಟ್ಟದಲ್ಲಿ ಸುದ್ದಿಯಾಗುತ್ತಿದ್ದಂತೆ ಉಪ್ಪಿನಂಗಡಿಯ ಪ್ರಥಮ ದರ್ಜೆ ಕಾಲೇಜಿನ ಆರು ಮಂದಿ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ನಮಗೆ ಹಿಜಾಬ್ ಬೇಕು ಎಂದು ಹಠ ಹಿಡಿದರು. ಕೊನೆಗೆ ಕಾಲೇಜಿ ಮಂಡಳಿ ಈ ಆರು ವಿದ್ಯಾರ್ಥಿನಿಯರನ್ನು 6 ದಿನಗಳ ಕಾಲ ಅಮಾನತು ಮಾಡಿತ್ತು. ಇದೀಗ ಆರೂ ವಿದ್ಯಾರ್ಥಿನಿಯರು ಕಾಲೇಜಿನ ಸಮವಸ್ತ್ರ ನಿಯಮಾಳಿಗಳನ್ನು ಉಲ್ಲಂಘಿಸುವುದಿಲ್ಲ ಎಂದು ಮುಚ್ಚಳಿಕೆ ಬರೆದು ಕೊಟ್ಟು ಗುರುವಾರದಿಂದ ಕಾಲೇಜಿಗೆ ಹಾಜರಾಗಿದ್ದಾರೆ.
ಕಾಲೇಜಿನ ವಿರುದ್ಧವೇ ಪತ್ರಿಕಾಗೋಷ್ಠಿ: ಹಿಜಾಬ್ ವಿದ್ಯಾರ್ಥಿನಿಯರಿಗೆ ನೋಟೀಸ್
ತರಗತಿಗೆ ಮರಳಿದ ವಿದ್ಯಾರ್ಥಿನಿಯರು
ಹಿಜಾಬ್ ಧರಿಸಿಯೇ ಕಾಲೇಜ್ ಪ್ರವೇಶಿಸುವುದಾಗಿ ಹೇಳಿದ್ದ 6 ವಿದ್ಯಾರ್ಥಿನಿಯರಯ ಇನ್ನುಮುಂದೆ ಸಮವಸ್ತ್ರ ನಿಯಮಾವಳಿ ಉಲ್ಲಂಘಿಸುವುದಿಲ್ಲ ಎಂದು ಮುಚ್ಚಳಿಕೆ ಬರೆದುಕೊಟ್ಟ, ಹಿನ್ನೆಲೆಯಲ್ಲಿ ತರಗತಿಗೆ ಹಾಜರಾಗಲು ಅವಕಾಶ ನೀಡಲಾಗಿದೆ. ಹಿಜಾಬ್ ಧರಿಸಿಯೇ ಕಾಲೇಜ್ ಪ್ರವೇಶಿಸುವುದಾಗಿ ಪಟ್ಟು ಹಿಡಿದಿದ್ದ ಈ ವಿದ್ಯಾರ್ಥಿನಿಯರು ಕೊನೆಗೆ ವಿದ್ಯಾಬ್ಯಾಸಕ್ಕೆ ಮಹತ್ವ ನೀಡಿ ಹೋರಾಟವನ್ನು ಬಿಟ್ಟಿದ್ದಾರೆ. ಮುಚ್ಚಳಿಕೆ ಬರೆದು ಕೊಟ್ಟ ನಂತರ ಕಾಲೇಜಿನ ಪ್ರಾಂಶುಪಾಲರು ಇವರಿಗೆ ತರಗತಿಗೆ ಹಾಜರಾಗಲು ಅನುವು ಮಾಡಿಕೊಟ್ಟಿದ್ದಾರೆ.
ಪುತ್ತೂರು ಕಾಲೇಜಿನಲ್ಲಿ ಹಿಜಾಬ್ ಧರಿಸಿ ಬಂದ 6 ವಿದ್ಯಾರ್ಥಿನಿಯರು ಅಮಾನತು
46 ವಿದ್ಯಾರ್ಥಿನಿಯರು ಕಾಲೇಜಿಗೆ ಹಾಜರ್
ಈ ಕಾಲೇಜಿನಲ್ಲಿ ಒಟ್ಟು 101 ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ಇದ್ದು, ಈ ಪೈಕಿ 46 ವಿದ್ಯಾರ್ಥಿನಿಯರು ಬುಧವಾರ ಸಮವಸ್ತ್ರ ಹಾಗೂ ನಿಯಮ ಪಾಲನೆಯೊಂದಿಗೆ ಕಾಲೇಜಿಗೆ ಹಾಜರಾಗಿದ್ದಾರೆ. ಮೊದಲ ಹಂತದಲ್ಲಿ ಅಮಾನತು ಆಗಿದ್ದ ಆರು ಮಂದಿ ಮತ್ತು ಹಿಜಾಬ್ ಪ್ರತಿಭಟನೆಯಿಂದ ದೂರ ಸರಿದು ಮೊದಲಿನಿಂದಲೂ ಕಾಲೇಜಿಗೆ ಆಗಮಿಸುತ್ತಿದ್ದ 29 ಮಂದಿ ಹಾಗೂ ಕಾಲೇಜಿಗೂ ಬರದೇ, ಪ್ರತಿಭಟನೆಯಲ್ಲೂ ಪಾಲ್ಗೊಳ್ಳದೇ ಅಂತರ ಕಾಯ್ದುಕೊಂಡಿದ್ದ 11 ವಿದ್ಯಾರ್ಥಿನಿಯರು ಸೇರಿ ಒಟ್ಟು 46 ವಿದ್ಯಾರ್ಥಿನಿಯರು ಸಮವಸ್ತ್ರ ಧರಿಸಿ, ತರಗತಿಗೆ ಹಾಜರಾಗಿದ್ದಾರೆ. ಇನ್ನೂ ಎರಡು ದಿನಗಳ ಹಿಂದೆ ಅಮಾನತು ಆಗಿರುವ 24 ವಿದ್ಯಾರ್ಥಿನಿಯರು ಕಾಲೇಜಿನತ್ತ ಮುಖ ಮಾಡಿಲ್ಲ, ಆದರೆ ಶೀಘ್ರದಲ್ಲಿ ಅವರೂ ಮರಳಲಿದ್ದಾರೆ ಎನ್ನಲಾಗುತ್ತಿದೆ.
ಮನವರಿಕೆ ಯಶಸ್ವಿ
ವಿದ್ಯಾರ್ಥಿನಿಯರು ಹೈಕೋರ್ಟ್ ತೀರ್ಪಿಗೆ ಬೆಲೆ ಕೊಟ್ಟು ತರಗತಿಗೆ ಮರಳಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಕಾಲೇಜು ಪ್ರಾಂಶುಪಾಲರು, ವಿದ್ಯಾರ್ಥಿನಿಯರಿಗೆ ಕಾಲೇಜಿನ ನಿಯಮ ಮತ್ತು ಕೋರ್ಟ್ ಆದೇಶದ ಬಗ್ಗೆ ಮನವರಿಕೆ ಮಾಡಿದ್ದೇವೆ. ವಿದ್ಯಾರ್ಥಿನಿಯರ ಮನೆಯವರಿಗೂ ಈ ಬಗ್ಗೆ ತಿಳಿಸಿ ಹೇಳಿದ್ದೇವೆ. ಎಲ್ಲರೂ ಶಿಕ್ಷಣ ಪಡೆಯಲು ನಿಯಮ ಒಪ್ಪಿಕೊಂಡು ಹಿಜಾಬ್ ಕಳಚಿಟ್ಟು ತರಗತಿಗಳಿಗೆ ಹಾಜರಾಗಿದ್ದಾರೆ. ವಾರದ ಬಳಿಕ ಪೂರ್ಣ ಪ್ರಮಾಣದಲ್ಲಿ ವಿದ್ಯಾರ್ಥಿನಿಯರು ಕಾಲೇಜಿಗೆ ನಿಯಮ ಪಾಲನೆಯೊಂದಿಗೆ ಮರಳುವ ವಿಶ್ವಾಸ ಇದೆ ಎಂದರು.
ವಿದ್ಯಾರ್ಥಿನಿಯರಿಗೆ ನೋಟಿಸ್
ಇನ್ನು ತಣ್ಣಗಾಗಿದ್ದ ವಿವಾದವನ್ನು ಮತ್ತೆ ಶುರುಮಾಡಿದ್ದ ಮಂಗಳೂರು ವಿವಿಯ ವಿದ್ಯಾರ್ಥಿನಿಯರಿಗೆ ಕಾಲೇಜಿನಿಂದ ನೋಟಿಸ್ ಜಾರಿ ಮಾಡಲಾಗಿದೆ. ಪತ್ರಿಕಾ ಗೋಷ್ಠಿ ಮಾಡಿ ಕಾಲೇಜಿನ ಘನತೆಗೆ ಧಕ್ಕೆ ತಂಡ ಹಿನ್ನಲೆಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ್ದ ಗೌಸಿಯಾ ಸೇರಿದಂತೆ ಕೆಲವು ವಿದ್ಯಾರ್ಥಿನಿಯರಿಗೆ ನೋಟಿಸ್ ಜಾರಿ ಮಾಡಿದ್ದು, ಮೂರು ದಿನಗಳಲ್ಲಿ ಉತ್ತರಿಸುವಂತೆ ತಿಳಿಸಲಾಗಿತ್ತು. ನೋಟಿಸ್ ಬಳಿಕವೂ ನಿಯಮ ಮೀರಿ ವರ್ತಿಸಿದರೆ ಉಪ್ಪಿನಂಗಡಿ ಕಾಲೇಜಿನಂತೆ ಅಮಾನತು ಮಾಡುವ ಎಚ್ಚರಿಕೆ ನೀಡಲಾಗಿತ್ತು.
(ಒನ್ಇಂಡಿಯಾ ಸುದ್ದಿ)