ಮಂಗಳೂರಿನಲ್ಲಿ ಹೆಚ್ಚುತ್ತಿದೆ ಡೆಂಗ್ಯೂ ಪ್ರಕರಣ, ಜನರಲ್ಲಿ ಆತಂಕ
ಮಂಗಳೂರು ಜೂನ್ 24 : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿವೆ. ನಗರದಲ್ಲಿ ಹೆಚ್ಚಾಗುತ್ತಿರುವ ಡೆಂಗ್ಯೂ ಜ್ವರ ಪ್ರಕರಣ ಜನರಲ್ಲಿ ಆತಂಕ ಉಂಟು ಮಾಡಿದೆ. ನಗರದ ಗುಜ್ಜರಕೆರೆ ಮತ್ತು ಅರೆಕೆರೆಬೈಲು ಪ್ರದೇಶ ದಲ್ಲಿ ಕಳೆದ ಮೂರು ವಾರಗಳಲ್ಲಿ 45 ಮಂದಿ ಯಲ್ಲಿ ಶಂಕಿತ ಡೆಂಗ್ಯೂ ಜ್ವರ ಕಾಣಿಸಿಕೊಂಡಿದೆ. ಈ ಪೈಕಿ ಓರ್ವನಲ್ಲಿ ಡೆಂಗ್ಯೂ ದೃಢಪಟ್ಟಿದೆ.
ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಸಂಬಂಧಿಸಿ ಜಿಲ್ಲಾ ಆರೋಗ್ಯ ಇಲಾಖೆ ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿರುವ ಹೊರತಾಗಿಯೂ ಮಲೇರಿಯಾ, ಡೆಂಗ್ಯೂ ಜ್ವರ ದಂತಹ ರೋಗಗಳ ವರದಿಯಲ್ಲಿ ಮಂಗಳೂರು ಸೇರಿಕೊಂಡಿರುವುದು, ಜನಸಾಮಾನ್ಯರಲ್ಲಿ ಆತಂಕ ಸೃಷ್ಟಿಸಿದೆ.
ಮಂಗಳೂರಿನಲ್ಲೇ ಶೇ.70ರಷ್ಟು ಮಲೇರಿಯಾ ಪ್ರಕರಣ ದಾಖಲು
ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್ ಗುಜ್ಜರಕೆರೆ ಹಾಗು ಅರೆಕೆರೆಬೈಲ್ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಾಸಕರೊಂದಿಗೆ ಮಂಗಳೂರು ಮಹಾನಗರ ಪಾಲಿಕೆಯ ಆರೋಗ್ಯಾಧಿ ಕಾರಿಗಳು, ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಪರಿಸರದ ಕೆಲ ಮನೆಗಳಿಗೆ ಶಾಸಕ ಹಾಗು ಅಧಿಕಾರಿಗಳು ತೆರಳಿ ಪರಿಶೀಲಿಸಿದ್ದಾರೆ.
ಬೇಸಗೆಯಲ್ಲಿ ನೀರಿನ ಅಭಾವ ಹಿನ್ನೆಲೆಯಲ್ಲಿ ಮಂಗಳೂರು ನಗರಕ್ಕೆ ರೇಷನಿಂಗ್ ವ್ಯವಸ್ಥೆಯಲ್ಲಿ ನಾಲ್ಕು ದಿನ ನೀರು ಪೂರೈಕೆ, ಮೂರು ದಿನ ಸ್ಥಗಿತ ಮಾಡಲಾಗಿತ್ತು. ಈ ವೇಳೆ ನೀರನ್ನು ಜನ ವಿವಿಧ ಪಾತ್ರೆ, ಡ್ರಮ್, ಬಕೆಟ್ ಮುಂತಾದವುಗಳಲ್ಲಿ ಸಂಗ್ರಹಿಸಿಟ್ಟಿದ್ದರು. ಮಳೆ ಆರಂಭವಾದರೂ ಸಂಗ್ರಹಿಸಿರುವ ನೀರನ್ನು ಚೆಲ್ಲಿ ಶುಚಿ ಮಾಡದೇ ಇದ್ದದ್ದರಿಂದಲೂ ಡೆಂಗ್ಯೂ ಹರಡಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಜಿಲ್ಲಾ ಆರೋಗ್ಯ ಇಲಾಖೆ ವತಿಯಿಂದ ಶಂಕಿತ ಡೆಂಗ್ಯೂ ಬಾಧಿತ ಪ್ರದೇಶ ಗಳಲ್ಲಿ ಫಾಗಿಂಗ್ ನಡೆಸಿರುವುದಲ್ಲದೆ ಕರಪತ್ರ ಹಂಚಿ ಜಾಗೃತಿ ಮೂಡಿಸಲಾಗುತ್ತಿದೆ. .