ದೆಹಲಿ ಜನರ ಸಂಕಷ್ಟಕ್ಕೆ ಮಿಡಿದ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ ವೈದ್ಯರು
ಮಂಗಳೂರು, ಮೇ 5: ದೇಶದಲ್ಲಿ ಕೊರೊನಾ ದಿನದಿಂದ ದಿನಕ್ಕೆ ಕರಾಳತೆಯ ಕಬಂಧಬಾಹುವನ್ನು ವಿಸ್ತಾರಮಾಡುತ್ತಿದೆ. ದೇಶದ ಪ್ರಮುಖ ನಗರಗಳ ಸ್ಥಿತಿ ಒಂದೆಡೆಯಾದರೆ ರಾಷ್ಟ್ರ ರಾಜಧಾನಿ ದೆಹಲಿಯ ಪರಿಸ್ಥಿತಿ ಬಹಳಷ್ಟು ವಿಷಮಿಸಿದೆ.
ಒಂದೆಡೆ ಆಕ್ಸಿಜನ್ ಬೆಡ್ ಕೊರತೆಯಾದರೆ ಇನ್ನೊಂದೆಡೆ ರೋಗಿಗಳ ಶುಶ್ರೂಷೆ ಮಾಡಲು ವೈದ್ಯರು, ದಾದಿಯರ ಕೊರತೆಯ ಸಮಸ್ಯೆ ಉಲ್ಬಣಿಸುತ್ತಿದೆ. ದೆಹಲಿಯ ಜನರ ಸಂಕಷ್ಟಕ್ಕೆ ಕರ್ನಾಟಕದ ಉಡುಪಿಯ ವೈದ್ಯರ ಮನ ಕರಗಿದ್ದು, ಕೊರೊನಾ ರಣರಂಗದಲ್ಲಿ ಪ್ರಾಣದ ಹಂಗು ತೊರೆದು ಸೇವೆ ಸಲ್ಲಿಸಲು ಮಣಿಪಾಲದ ಕೆಎಂಸಿ ಆಸ್ಪತ್ರೆಯ 40 ವೈದ್ಯರು, 150 ದಾದಿಯರು ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.
ದೆಹಲಿಗೆ ತೆರಳಿದ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ 19 ದಾದಿಯರ ಮೊದಲ ತಂಡ
ದೆಹಲಿಯ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಲು ಉಡುಪಿಯ ವೈದ್ಯರು ಮತ್ತು ದಾದಿಯರು ನಿಯೋಜನೆಗೊಂಡಿದ್ದು, ಕೊರೊನಾ ಸಂಕಷ್ಟದ ಕಾಲದಲ್ಲಿ ದೆಹಲಿಯ ಜನರಿಗೆ ಹೆಗಲು ನೀಡಲಿದ್ದಾರೆ.
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ವೈದ್ಯರು ಮತ್ತು ದಾದಿಯರು ಇಂಡಿಗೋ ವಿಮಾನದ ಮೂಲಕ ಪ್ರಯಾಣಿಸಿದ್ದು, ಇಂಡಿಗೋ ಸಿಬ್ಬಂದಿ ವೈದ್ಯರ ಮತ್ತು ದಾದಿಯರ ನಿಸ್ವಾರ್ಥ ಸೇವೆಗೆ ವಿಶೇಷ ಗೌರವ ಸಲ್ಲಿಸಿದ್ದಾರೆ.
ವೈದ್ಯರು ಮತ್ತು ದಾದಿಯರು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಒಳ ಪ್ರವೇಶಿಸುತ್ತಿದ್ದಂತೆಯೇ ಇಂಡಿಗೋ ಸಿಬ್ಬಂದಿ ಮತ್ತು ವಿಮಾನ ನಿಲ್ದಾಣದ ಸಿಬ್ಬಂದಿ ಸಾಲಾಗಿ ನಿಂತು ಚಪ್ಪಾಳೆ ತಟ್ಟುವ ಮೂಲಕ ವಿಶೇಷ ಗೌರವ ಸಲ್ಲಿಸಿದರು.
ವೈದ್ಯರು ಮತ್ತು ದಾದಿಯರ ಮೊದಲ ತಂಡ ಈಗಾಗಲೇ ದೆಹಲಿ ಪ್ರಯಾಣ ಮಾಡಿದ್ದು, ಎರಡನೇ ತಂಡವೂ ಶೀಘ್ರದಲ್ಲೇ ದೆಹಲಿಯನ್ನು ಸೇರಲಿದೆ. ಈ ಮೂಲಕ ರಾಷ್ಟ್ರ ರಾಜಧಾನಿಯ ಜನರ ರಕ್ಷಣೆಗೆ ಸಾಥ್ ನೀಡಲಿದ್ದಾರೆ.