ಮಂಗಳೂರು: ಹನಿಟ್ರ್ಯಾಪ್ ನಿಂದ 14 ಲಕ್ಷ ರು. ಪೀಕಿದ್ದ ಆರೋಪಿಗಳ ಬಂಧನ
ಮಂಗಳೂರು, ಮೇ 17 : ಹೈಟೆಕ್ ವೇಶ್ಯಾವಾಟಿಕೆ ಕೃತ್ಯದಲ್ಲಿ ನಗರದ ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರನ್ನು ಹನಿಟ್ರ್ಯಾಪ್ ಮಾಡಿ 14 ಲಕ್ಷ ರು. ಲಪಟಾಯಿಸಿದ ಘಟನೆ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ನಗರದ ಖಾಸಗಿ ಆಸ್ಪತ್ರೆ ವೈದ್ಯರೊಬ್ಬರನ್ನು ಹನಿಟ್ರ್ಯಾಪ್ ಮಾಡಿ 14 ಲಕ್ಷ ರು ಪೀಕಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಕದ್ರಿ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಪ್ರಕರಣವನ್ನು ಬೇಧಿಸಿರುವ ಕದ್ರಿ ಠಾಣಾ ಪೊಲೀಸರು ಆರೋಪಿಗಳಾದ ಸೋಮೇಶ್ವರದ ನಾರಾಯಣ ಸಾಲ್ಯಾನ್, ಉಳ್ಳಾಲದ ಮೊಹಮ್ಮದ್ ರಂಜಿ ಹಾಗೂ ಸಾದಿಕ್ ಎಂಬವರನ್ನು ಬಂಧಿಸಿದ್ದಾರೆ.[ಮಂಗಳೂರು: ಆಕ್ಸಿಸ್ ಬ್ಯಾಂಕ್ ಹಣದೊಂದಿಗೆ ನಾಪತ್ತೆಯಾಗಿದ್ದ ಇಬ್ಬರ ಬಂಧನ]
ಅಲ್ಲದೆ ಇವರಿಗೆ ನೆರವು ನೀಡಿದ ಯುವತಿ, ರಾಕೇಶ್ ಹಾಗೂ ಆತನ ಇಬ್ಬರು ಗೆಳೆಯರು ಪರಾರಿಯಾಗಿದ್ದಾರೆ. ಮೋಸ ಹೋದ ವೈದ್ಯ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಿ ಜಾಲ ಬೇಧಿಸಿದ್ದಾರೆ.
ಖಾಸಗಿ ಆಸ್ಪತ್ರೆಯ ವೈದ್ಯ ಹಾಗೂ ಆರೋಪಿ ಮೊಹಮ್ಮದ್ ರಂಜಿ ಚಿರಪರಿಚಿತರು. ಹೆಣ್ಣಿನ ಚಟ ಅಂಟಿಸಿಕೊಂಡಿದ್ದ ವೈದ್ಯನ ಗುಟ್ಟು ಮೊದಲೇ ಅರಿತ್ತಿದ್ದ ರಂಜಿ ತನ್ನ ಸ್ನೇಹಿತ ಸಾದಿಕ್ ಜೊತೆಗೂಡಿ ವೈದ್ಯರ ಹಣ ಲೂಟಿ ಹೊಡೆಯುವ ಪ್ಲ್ಯಾನ್ ಹಾಕಿಕೊಂಡಿದ್ದ.
ಅದರಂತೆ ಮೇ 2ರಂದು ಕದ್ರಿ ಮಲ್ಲಿಕಟ್ಟೆ ಬಸ್ ನಿಲ್ದಾಣದ ಬಳಿ ಯುವತಿಯನ್ನು ಕರೆದುಕೊಂಡು ಬಂದಿದ್ದರು. ಅಲ್ಲಿ ವ್ಯದ್ಯನನ್ನು ಕಾರಿಗೆ ಹತ್ತಿಸಿಕೊಂಡು ಹೊರಟಿದ್ದಾರೆ.
ಈ ನಡುವೆ ಇವರ ಕಾರನ್ನು ಬೆನ್ನಟ್ಟಿದ್ದ ನಾರಾಯಣ ಸಾಲ್ಯಾನ್, ರಾಕೇಶ್ ಮತ್ತು ಆತನ ಇಬ್ಬರು ಗೆಳೆಯರ ತಂಡ ಕಾರನ್ನು ಅಡ್ಡ ಹಾಕಿ ನಿಲ್ಲಿಸಿ ತಾವು ಪೊಲೀಸರು. ಎಂದು ದಬಾಯಿಸಿ ವಾಹನ ಚಲಾಯಿಸುತ್ತಿದ್ದ ವೈದ್ಯನನ್ನು ತಮ್ಮ ವಾಹನದಲ್ಲಿ ಕುರಿಸಿಕೊಂಡು ಸೋಮೇಶ್ವರದ ಪ್ಲ್ಯಾಟಿಗೆ ಕರೆದುಕೊಂಡು ಹೋಗಿದ್ದಾರೆ.
ಅಲ್ಲಿ ವೈದ್ಯನನ್ನು ಬಲವಂತವಾಗಿ ಬೆತ್ತಲೆಗೊಳಿಸಿ, ಯುವತಿಯೊಂದಿಗೆ ನಗ್ನ ಚಿತ್ರಗಳನ್ನು ತೆಗೆದು ವಿಡಿಯೋ ಮಾಡಿದ್ದಾರೆ. ಬಳಿಕ ದುಡ್ಡು ನೀಡದೇ ಇದ್ದರೆ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.
ಇದಕ್ಕೆ ಒಪ್ಪಿದ ವೈದ್ಯ ಹಣ ಕೊಡುವುದಾಗಿ ಹೇಳಿದ್ದಾನೆ. ಎಲ್ಲಾ ಪ್ಲ್ಯಾನ್ ಪ್ರಕಾರ ನಡೆದು ಬರೋಬ್ಬರಿ 14 ಲಕ್ಷ ರೂ ವೈದ್ಯನಿಂದ ಪೀಕಿಸಿದ್ದಾರೆ. ಈ ನಡುವೆ ಆರೋಪಿಗಳು ವೈದ್ಯರನ್ನು ಮತ್ತೆ ಮತ್ತೆ ಪೀಡಿಸಿ ಹೆಚ್ಚಿನ ಹಣಕ್ಕಾಗಿ ಬೇಡಿಕೆ ಇಟ್ಟ ಕಾರಣ ಅವರು ಕದ್ರಿ ಪೊಲೀಸರಿಗೆ ದೂರು ನೀಡಿದ್ದರು.
ಕದ್ರಿ ಇನ್ಸ್ಪೆಕ್ಟರ್ ಮಾರುತಿ ನಾಯಕ್ ತಮ್ಮ ತಂಡದೊಂದಿಗೆ ಉಪಾಯವಾಗಿ ಆರೋಪಿಗಳನ್ನು ಬಲೆಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
{promotion-urls}