ಮಂಗಳೂರಿನಲ್ಲಿ ಬಸ್ ಗಳ ಮೇಲೆ ಕಲ್ಲು ತೂರಾಟ ಪ್ರಕರಣ; ಮೂವರ ಬಂಧನ
ಮಂಗಳೂರು ಜೂನ್ 27: ಬಂಟ್ವಾಳ ಮತ್ತು ವಿಟ್ಲದಲ್ಲಿ ಬಸ್ ಗಳ ಮೇಲೆ ಕಲ್ಲು ತೂರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಕೃತ್ಯದಲ್ಲಿ ಭಾಗಿಯಾಗಿದ್ದ ಉಳಿದವರ ಶೋಧ ಕಾರ್ಯ ಮುಂದುವರಿದಿದೆ.
ಬಂಧಿತರನ್ನು ಕುಳ ಗ್ರಾಮದ ಕಾರ್ಯಾಡಿ ನಿವಾಸಿ ಪುನೀತ್ (20), ವೀರಕಂಭ ಗ್ರಾಮದ ಮಂಗಳಪದವು ನಿವಾಸಿ ಗುರುಪ್ರಸಾದ್ (20) ಹಾಗೂ ಕೇಪು ಗ್ರಾಮದ ಮೈರಾ ನಿವಾಸಿ ಕಿರಣ್ ಮೈರಾ (24) ಎಂದು ಗುರುತಿಸಲಾಗಿದೆ.
ಬಂಟ್ವಾಳ - ವಿಟ್ಲ ಕಲ್ಲು ತೂರಾಟ ಪ್ರಕರಣಕ್ಕೆ ಕಾರಣವೇನು?
ಬಸ್ ಗಳ ಮೇಲೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಟ್ಲ ಪೊಲೀಸ್ ಠಾಣೆಯ ನಾಲ್ಕು ಹಾಗೂ ಪುತ್ತೂರು ಪೊಲೀಸ್ ಠಾಣೆಯ ಒಂದು ಪ್ರಕರಣಗಳಿಗೆ ಸಂಬಂಧಿಸಿದಂತೆ ಈ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಜೂನ್ 24ರಂದು ಕೇರಳ ಬದಿಯಡ್ಕ ಠಾಣಾ ವ್ಯಾಪ್ತಿಯ ಎಣ್ಮಕಜೆ ಎಂಬಲ್ಲಿ ದನದ ಸಾಗಾಟವನ್ನು ತಡೆದು ಹಲ್ಲೆ ನಡೆಸಿ ದರೋಡೆ ನಡೆಸಿದ ವಿಚಾರದಲ್ಲಿ ಅಕ್ಷಯ್ ರಜಪೂತ್ ಮತ್ತು ಆತನ ತಂಡದ ವಿರುದ್ಧ ಕೇರಳದ ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿತ್ತು. ಇದರಿಂದ ಆಕ್ರೋಶಗೊಂಡ ಹಿಂದೂ ಸಂಘಟನೆಯ ಕಾರ್ಯಕರ್ತರು ವಿಟ್ಲ ಬಂದ್ ನಡೆಸುವ ನೆಪದಲ್ಲಿ ಶಾಂತಿ ಭಂಗ ಮಾಡಲು ಸಂಚು ಹೂಡಿದ್ದರು ಎಂದು ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಲಕ್ಷ್ಮೀ ಪ್ರಸಾದ್ ತಿಳಿಸಿದ್ದಾರೆ.
ಬಸ್ ಗಳ ಮೇಲೆ ಕಲ್ಲು ತೂರಾಟ; 7 ಬಸ್ ಜಖಂ, ಮೂವರಿಗೆ ಗಾಯ
ಅಕ್ಷಯ್ ರಜಪೂತ್ ಬಂಧನ ವಿರೋಧಿಸಿ ಜೂನ್ 25ರಂದು ಬಂಟ್ವಾಳ ಹಾಗು ವಿಟ್ಲ ವ್ಯಾಪ್ತಿಯಲ್ಲಿ ದುಷ್ಕರ್ಮಿಗಳು ಕೆಎಸ್ ಆರ್ ಟಿಸಿ ಮತ್ತು ಖಾಸಗಿ ಬಸ್ ಗಳ ಮೇಲೆ ಕಲ್ಲು ತೂರಾಟ ನಡೆಸಿದ್ದು, ಇದರಿಂದ ಬಸ್ ಗಳ ಗಾಜಿಗೆ ಹಾನಿಯಾಗಿ, ಘಟನೆಯಲ್ಲಿ ಇಬ್ಬರು ಬಸ್ ಚಾಲಕರು ಮತ್ತು ಮೂವರು ವಿದ್ಯಾರ್ಥಿನಿಯರು ಗಾಯಗೊಂಡಿದ್ದರು.