ಮೀನುಗಾರರ ಸಾಲಮನ್ನಾ ಯೋಜನೆಗೆ 60 ಕೋಟಿ ರೂ ಬಿಡುಗಡೆ
ಮಂಗಳೂರು, ಏಪ್ರಿಲ್ 24: ಕೊರೊನಾದಿಂದ ಮೀನುಗಾರರು ಬಹಳ ಸಂಕಷ್ಟದಲ್ಲಿ ಇದ್ದಾರೆ. ಅದೇ ಉದ್ಯೋಗ ನಂಬಿಕೊಂಡು ಜೀವನ ಮಾಡುತ್ತಿದ್ದ ಕುಟುಂಬಗಳು ಕಂಗಾಲಾಗಿದ್ದಾರೆ. ಇದೀಗ ಇಂತಹ ಸಂದರ್ಭದಲ್ಲಿ ಸರ್ಕಾರ ಇವರ ನೆರವಿಗೆ ಬಂದಿದೆ. ಸಾಲ ಮನ್ನಾ ಮಾಡುವ ಮೂಲಕ ಮೀನುಗಾರ ಕಷ್ಟಕ್ಕೆ ನೆರವಾಗುತ್ತಿದೆ.
ಹಣಕಾಸು ಇಲಾಖೆ ಮೀನುಗಾರರ ಸಾಲಮನ್ನಾ ಯೋಜನೆಗೆ 60 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಇದರಿಂದ 23 ಸಾವಿರ ಮೀನುಗಾರ ಸಾಲ ಮನ್ನಾ ಆಗಲಿದೆ ಎಂದು ಮೀನುಗಾರಿಕಾ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಉಡುಪಿಯಲ್ಲಿ ಕಡಲಿಗಿಳಿಯಲಿವೆ ಸಾವಿರಾರು ನಾಡದೋಣಿಗಳು
ಮೀನುಗಾರರ ಸಂಕಷ್ಟ ತಿಳಿದು, 60 ಕೋಟಿ ರೂಪಾಯಿ ಬಿಡುಗಡೆ ಮಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರಿಗೆ ಮೀನುಗಾರರ ಪರವಾಗಿ ಕೋಟ ಶ್ರೀನಿವಾಸ ಪೂಜಾರಿ ಧನ್ಯವಾದ ತಿಳಿಸಿದ್ದಾರೆ.
''ಹಣಕಾಸು ಇಲಾಖೆ ಅಧಿಕೃತವಾಗಿ ಹಣ ಬಿಡುಗಡೆಗೆ ಆದೇಶ ಜಾರಿಯಾಗಿದ್ದು, ಈ ಸಾಲ ಮನ್ನಾ ಹಣ ಭೂಮಿ ಕೋಶದ ಮೂಲಕ ಸಾಲಗಾರರ ಖಾತೆಗೆ ಜಮಾ ಮಾಡಲು ಕ್ರಮ ಕೈಗೊಳ್ಳಲಾಗುವುದು'' ಎಂದು ಕೋಟ ಶ್ರೀನಿವಾಸ ಪೂಜಾರಿ ವಿವರ ನೀಡಿದ್ದಾರೆ.