ಮಂಗಳೂರಿನಲ್ಲಿ ಕಾಂಪೌಂಡ್ ಕುಸಿದು ಮಣ್ಣಿನಡಿ ಸಿಲುಕಿ ಇಬ್ಬರ ಸಾವು
ಮಂಗಳೂರು, ಫೆಬ್ರವರಿ 28: ಕಾಂಪೌಂಡ್ ಮಣ್ಣು ಕುಸಿದು ನೆಲದಡಿ ಐವರು ಕಾರ್ಮಿಕರು ಸಿಲುಕಿದ ಘಟನೆ ನಗರದ ಬಂಟ್ಸ್ ಹಾಸ್ಟೆಲ್ ನ ಕರಂಗಲ್ಪಾಡಿ ಜಂಕ್ಷನ್ ಬಳಿ ಇಂದು ಮಧ್ಯಾಹ್ನ ನಡೆದಿದ್ದು, ಐವರಲ್ಲಿ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ.
ಮೃತ ಕಾರ್ಮಿಕರನ್ನು ಬಾಗಲಕೋಟೆಯ ಭೀಮೇಶ್ ಹಾಗೂ ಬಂಗಾಳ ಮೂಲದ ಮುಝ್ರಿಕುಲ್ ಎಂದು ಗುರುತಿಸಲಾಗಿದೆ. ಹನಿಕುಲ್ ಎಂಬ ಕಾರ್ಮಿಕ ಗಂಭೀರವಾಗಿ ಗಾಯಗೊಂಡಿದ್ದು, ಈತನನ್ನು ಯೆನಪೋಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರ್ಮಿಕರು ಕಾಂಪೌಂಡ್ ಗೋಡೆ ಬಳಿ ಕಾರ್ಯ ನಿರ್ವಹಿಸುತ್ತಿದ್ದ ಸಂದರ್ಭ ಘಟನೆ ನಡೆದಿದೆ.
ಮರವಂತೆಯಲ್ಲಿ ಬೋರ್ ವೆಲ್ ಕೊರೆಯುವ ವೇಳೆ ಭೂ ಕುಸಿತ: ಯುವಕನ ರಕ್ಷಣೆ
ಘಟನೆ ನಡೆಯುತ್ತಿದ್ದಂತೆ ಪಾಂಡೇಶ್ವರ ಹಾಗೂ ಕದ್ರಿಯ ಅಗ್ನಿಶಾಮಕ ವಾಹನ ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಶಾಸಕ ವೇದವ್ಯಾಸ್ ಕಾಮತ್ ಅವರು ಘಟನೆ ನಡೆದ ಸ್ಥಳಕ್ಕೆ ಆಗಮಿಸಿದ್ದಾರೆ. ಇನ್ನುಳಿದವರ ರಕ್ಷಣಾ ಕಾರ್ಯ ಮುಂದುವರೆದಿದೆ. ಅಗ್ನಿ ಶಾಮಕ ದಳದ ಸಿಬ್ಬಂದಿ ಕುಸಿತಗೊಂಡ ಮಣ್ಣು ಹಾಗೂ ಕಲ್ಲುಗಳನ್ನು ತೆಗೆಯುವುದರ ಮೂಲಕ ರಕ್ಷಣಾ ಕಾರ್ಯ ನಿರ್ವಹಿಸುತ್ತಿದ್ದಾರೆ.