ಮದರಾಸದಿಂದ ಬರುವಾಗ ಹಲ್ಲೆ; ಮಂಗಳೂರು ಬಾಲಕ ಹೇಳಿದ್ದು ಕಟ್ಟುಕತೆ!
ಮಂಗಳೂರು, ಜುಲೈ 1: ಮಂಗಳೂರು ನಗರದ ಸುರತ್ಕಲ್ ಪ್ರದೇಶದ ಕಾಟಿಪಳ್ಳದಲ್ಲಿ ಮದರಸಾದಿಂದ ಮನೆಗೆ ಮರಳುತ್ತಿದ್ದ ಬಾಲಕನ ಮೇಲೆ ಹಲ್ಲೆ ನಡೆದಿತ್ತು ಎನ್ನಲಾದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ದೊರಕಿದೆ.
ಕಾಟಿಪಳ್ಳದ 6ನೇ ಬ್ಲಾಕ್ನಲ್ಲಿರುವ ತೌಯಿಬಾ ಮಸೀದಿಯ ಆರನೇ ತರಗತಿಯ ವಿದ್ಯಾರ್ಥಿ ಜೂನ್ 27ರಂದು ಮನೆಗೆ ಮರಳುತ್ತಿದ್ದ ವೇಳೆ ಕೇಸರಿ ಶಾಲು ಹಾಕಿಕೊಂಡು ದ್ವಿಚಕ್ರದಲ್ಲಿ ಬಂದಿರುವ ಆಗಂತುಕರಿಬ್ಬರು ತನ್ನನ್ನು ಎಳೆದಾಡಿ ಅಂಗಿ ಹರಿದು ಹಲ್ಲೆ ನಡೆಸಿದ್ದರು ಎಂದು ಬಾಲಕ ಆರೋಪ ಮಾಡಿದ್ದ.
ವಕ್ಫ್ ಆಸ್ತಿ ಭ್ರಷ್ಟಾಚಾರ ತನಿಖೆ ಬಿಡುವಂತೆ ಬಿಜೆಪಿಯಿಂದ ಕೋಟಿಗಟ್ಟಲೇ ಆಫರ್: ಅನ್ವರ್ ಮಾಣಿಪ್ಪಾಡಿ
ಅದರಲ್ಲೂ ಭಿನ್ನ ಕೋಮಿನ ವ್ಯಕ್ತಿಗಳಾಗಿದ್ದರು ಎಂದು ಹೇಳಿರುವ ಹಿನ್ನೆಲೆಯಲ್ಲಿ ಪರಿಸರದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಆದರೆ ಪೊಲೀಸ್ ತನಿಖೆಯಿಂದ ಆ ಬಾಲಕ ಕಟ್ಟುಕತೆ ಸೃಷ್ಟಿಸಿರೋದು ಬೆಳಕಿಗೆ ಬಂದಿದೆ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸ್ಥಳದಲ್ಲಿದ್ದ ಸಿಸಿ ಕ್ಯಾಮರಾಗಳನ್ನು ಪರಿಶೀಲನೆ ನಡೆಸಿ ತನಿಖೆ ನಡೆಸಿದಾಗ ಪೊಲೀಸ್ ತಂಡಕ್ಕೆ ಅನುಮಾನ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಬಾಲಕನನ್ನು ವಿಚಾರಣೆ ನಡೆಸಿದಾಗ ಆತ ಈ ಕಟ್ಟುಕತೆ ಕಟ್ಟಿರುವುದು ಬೆಳಕಿಗೆ ಬಂದಿದೆ.
ಪ್ರವಾದಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ : ನೂಪುರ್ ಶರ್ಮಾಗೆ ಸುಪ್ರೀಂ ಕೋರ್ಟ್ ಛೀಮಾರಿ
ಆತ ಕಲಿಯುವುದರಲ್ಲಿ ಹಿಂದಿದ್ದ, ಶಾಲೆಯಲ್ಲಿ ಸ್ನೇಹಿತರಿರಲಿಲ್ಲ, ಕಪ್ಪಗಿರುವುದು, ಮನೆಯಲ್ಲಿ ಬಡತನ, ಸೈಕಲ್ ಇಲ್ಲದೆ ಬರುವುದಿಲ್ಲವೆಂದು ಸ್ನೇಹಿತರೊಂದಿಗೆ ಚಾಲೆಂಜ್ ಮಾಡಿರುವ ಕಾರಣದಿಂದ ಈ ರೀತಿ ಮಾಡಿರುವುದಾಗಿ ಆತ ತಿಳಿಸಿದ್ದಾನೆ. ಅಲ್ಲದೆ ಪೆನ್ ನಿಂದ ಶರ್ಟ್ ಹರಿದು ತನ್ನ ಮೇಲೆ ಹಲ್ಲೆಯಾಗಿದೆ ಎಂದು ಕತೆ ಸೃಷ್ಟಿಸಿರುವುದಾಗಿ ತಿಳಿಸಿದ್ದಾನೆ ಎಂದು ತಿಳಿದು ಬಂದಿದೆ.
ಈ ಪ್ರಕರಣದ ಹಿನ್ನೆಲೆಯಲ್ಲಿ ಪರಿಸರದ ಮಸೀದಿ ಸಮಿತಿ ಆತಂಕ ವ್ಯಕ್ತಪಡಿಸಿತ್ತು. ಕೋಮು ದ್ವೇಷಕ್ಕೆ ಕಾರಣವಾಗುವಂತಹ ಬರಹಗಳು ಸಾಮಾಜಿಕ ಜಾಲತಾಣಗಳಲ್ಲಿ ಕಂಡು ಬಂದಿತ್ತು. ಆದರೆ ಇದೀಗ ಪ್ರಕರಣವು ಕಟ್ಟುಕತೆ ಎಂಬಲ್ಲಿಗೆ ಸುಖಾಂತ್ಯಗೊಂಡಿದೆ. ಬಾಲಕನಿಗೆ ಚೈಲ್ಡ್ ವೆಲ್ಫೇರ್ ಕಮಿಟಿ ಹಾಗೂ ವೈದ್ಯರ ಸಲಹೆ ಪಡೆಯಲು ತಿಳಿಸಲಾಗಿದೆ.
ಸಿಸಿಟಿವಿ ಪರಿಶೀಲನೆ ವೇಳೆ ಕಟ್ಟುಕತೆ ಬಯಲು
ಜೂನ್ 27ರಂದು ರಾತ್ರಿ 9:30 ಸಮಯದಲ್ಲಿ ಮದರಸದಿಂದ ಬಂದ ಬಾಲಕನಿಗೆ ಹಲ್ಲೆಯಾಗಿದೆ ಎಂಬ ವಿಚಾರದ ಬಗ್ಗೆ ದೂರು ಬಂದಿತ್ತು. ಆರನೇ ತರಗತಿ ಓದುತ್ತಿದ್ದ 13 ವರ್ಷದ ಬಾಲಕನಿಗೆ ಇಬ್ಬರು ದ್ವಿಚಕ್ರ ವಾಹನದಿಂದ ಬಂದು ಹಲ್ಲೆ ಮಾಡಿದ್ದಾರೆ ಎಂದು ಬಾಲಕ ಆರೋಪಿಸಿದ್ದ. ಈ ವಿಚಾರ ಸುರತ್ಕಲ್ ಕಾಟಿಪಳ್ಳ ಕೃಷ್ಣಾಪುರ ಭಾಗದಲ್ಲಿ ಸಾಕಷ್ಟು ಆತಂಕವನ್ನು ಸೃಷ್ಟಿಸಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತನಿಖೆ ಮಾಡಿದ್ದೇವೆ. ಬಾಲಕ ಮದರಸದಿಂದ ಬಂದ ರಸ್ತೆಯ ಸಿಸಿ ಕ್ಯಾಮೆರಾ ವಿಡಿಯೋಗಳನ್ನು ಪರಿಶೀಲನೆ ಮಾಡಿದ್ದೇವೆ. ಆ ಬಾಲಕನನ್ನ ನಾನು ಸೇರಿದಂತೆ ಅಧಿಕಾರಿಗಳು ವಿಚಾರಣೆ ಮಾಡಿದ್ದೇವೆ. ಇಂತಹ ಘಟನೆ ನಡೆದಿಲ್ಲ ಎಂದು ಮಾಧ್ಯಮಗಳಿಗೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್ ಮಾಹಿತಿ ನೀಡಿದ್ದಾರೆ.
ಶಾಲೆ-ಮನೆಯಲ್ಲಿ ಆತನ ಬಗ್ಗೆ ಗಮನ ಕಡಿಮೆ
"ಆ ಬಾಲಕನಿಗೆ ವೈಯಕ್ತಿಕ ಸಮಸ್ಯೆಗಳು ಇದೆ. ಓದುವುದರಲ್ಲಿ ಬಾಲಕ ಹಿಂದಿರೋದು, ಎಷ್ಟು ಓದಿದರೂ ಅರ್ಥವಾಗದೆ ಇರೋದು, ಶಾಲೆಯಲ್ಲಿ ಯಾರೂ ಒಳ್ಳೆಯ ಸ್ನೇಹಿತರು ಇಲ್ಲದೇ ಇರುವುದು, ಸ್ನೇಹಿತರು ಯಾರೂ ಈತನನ್ನ ಹತ್ತಿರ ಸೇರಿಸದಿರುವುದು, ಮನೆಯಲ್ಲೂ ವೈಯಕ್ತಿಕ ಸಮಸ್ಯೆಗಳು ಇದೆ, ಬಡತನ ಕಷ್ಟಗಳಿವೆ. ತಂದೆ ಎಷ್ಟೇ ಕಷ್ಟಪಟ್ಟು ಓದಿಸಿದರೂ ಓದಕ್ಕೆ ಆಗ್ತಾ ಇಲ್ಲ. ಸಾಕಷ್ಟು ಗೊಂದಲಗಳನ್ನು ಆ ಬಾಲಕ ಹೊಂದಿದ್ದಾನೆ. ಶಾಲೆಯಲ್ಲಿ ಮತ್ತು ಮನೆಯಲ್ಲಿ ಈತನ ಬಗ್ಗೆ ಗಮನ ಕಡಿಮೆಯಾಗಿದೆ. ಹೀಗಾಗಿ ಈ ರೀತಿಯಾಗಿ ಸುಳ್ಳು ಕಥೆ ಕಟ್ಟಿದ್ದಾನೆ ಎಂದು ತನಿಖೆ ವೇಳೆ ತಿಳಿದು ಬಂದಿದೆ" ಎಂದು ಕಮೀಷನರ್ ಎನ್. ಶಶಿಕುಮಾರ್ ಹೇಳಿದ್ದಾರೆ.
ಮುಸ್ಲಿಂ ಧಾರ್ಮಿಕ ಮುಖಂಡರಿಂದ ದೂರು
ಬ್ಯಾಗ್ ನಲ್ಲಿದ್ದ ಪೆನ್ನಿಂದ ಶರ್ಟ್ ಅನ್ನು ಹರಿದುಕೊಂಡಿದ್ದಾನೆ. ಅದಕ್ಕೆ ಪೂರಕವಾಗಿ ಸಾಕಷ್ಟು ಸಾಕ್ಷಾಧಾರಗಳು ಸಿಕ್ಕಿದೆ. ಈ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ತಂದಿದ್ದೇವೆ. ಬಾಲಕನಿಗೆ ಹಲ್ಲೆ ಯಾಗಿರುವ ಬಗ್ಗೆ ಮುಸ್ಲಿಂ ಧಾರ್ಮಿಕ ಮುಖಂಡರ ದೂರನ್ನು ನೀಡಿದ್ದರು. ಅವರಿಗೂ ಈ ಪ್ರಕರಣದ ಬಗ್ಗೆ ಮಾಹಿತಿ ನೀಡಿದ್ದೇವೆ. ಬಾಲಕನ ಪೋಷಕರು ಮದರಸಾ ಮುಖಂಡರು, ಮದ್ರಸಾ ಉಸ್ತಾದ್ ಗಳನ್ನು ಅವರನ್ನು ಕರೆಸಿ ಮಾಹಿತಿ ನೀಡಿದ್ದೇವೆ ಎಂದು ಕಮಿಷನರ್ ಹೇಳಿದರು.
ಕೋಮು ದ್ವೇಷ ಹರಡಿಸುವುದಕ್ಕೆ ಹುನ್ನಾರ
ಸಾಮಾಜಿಕ ಜಾಲತಾಣಗಳಲ್ಲಿ ಇದೇ ವಿಚಾರವನ್ನು ಬಳಸಿಕೊಂಡು ಕೋಮು ದ್ವೇಷ ಹರಡಲು ಹಲವರು ಪ್ರಯತ್ನ ನಡೆಸಿದ್ದಾರೆ. ಮಂಗಳೂರಿನಲ್ಲಿ ಈಗಾಗಲೇ ಧಾರ್ಮಿಕ ವಿಚಾರವಾಗಿ ಸಂಘರ್ಷಗಳು ನಡೆಯುತ್ತಿದೆ. ಹಾಗಾಗಿ ಈ ಪ್ರಕರಣವನ್ನು ಬಳಸಿಕೊಂಡು ಮತ್ತಷ್ಟು ಉದ್ವಿಘ್ನಗೊಳಿಸುವ ಯತ್ನವನ್ನು ಸಾಮಾಜಿಕ ಜಾಲಾತಾಣದಲ್ಲಿ ನಡೆಸಲಾಗುತ್ತಿತ್ತು. ಆದರೆ ಪೊಲೀಸ್ ಕ್ಷಿಪ್ರ ತನಿಖೆಯಿಂದ ಬಾಲಕನ ನಾಟಕ ಎಂಬುದು ಬಹಿರಂಗವಾಗಿದೆ. ಸದ್ಯಕ್ಕೆ ಆ ಬಾಲಕನನ್ನು ಚೈಲ್ಡ್ ವೆಲ್ಫೇರ್ ಅಧಿಕಾರಿಗಳಿಗೆ ಮತ್ತು ವೈದ್ಯರಿಗೆ ಚಿಕಿತ್ಸೆಗೆ ಒಪ್ಪಿಸಲಾಗಿದೆ ಎಂದು ಕಮಿಷನರ್ ತಿಳಿಸಿದ್ದಾರೆ.