Stories Of Strength: ಕೊರೊನಾ ಮಣಿಸಿದ ಬೆಳ್ತಂಗಡಿಯ 13 ಜನರ ಅವಿಭಕ್ತ ಕುಟುಂಬ
ಮಂಗಳೂರು, ಜೂನ್ 1: ಕೊರೊನಾ ಮಹಾಮಾರಿ ಮನುಷ್ಯ ಕುಲ ಈ ಹಿಂದೆ ಎಂದೂ ಕಾಣದ ಭೀತಿಗೆ ತಳ್ಳಿದೆ. ಸಾವು-ನೋವು, ದುಃಖ-ದುಮ್ಮಾನಗಳು ಜಗತ್ತಿನಾದ್ಯಂತ ಆವರಿಸಿ, ಜನರನ್ನು ಪತರುಗುಟ್ಟುವಂತೆ ಮಾಡಿದೆ.
Recommended Video
ಆದರೆ ಈ ಕಿಲ್ಲರ್ ಕೊರೊನಾವನ್ನು ನಮ್ಮಲ್ಲಿರುವ ಆತ್ಮವಿಶ್ವಾಸ ಎಂಬ ಏಕಮಾತ್ರ ಅಸ್ತ್ರದಿಂದ ಮಣಿಸಬಹುದೆಂಬುವುದನ್ನು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುಟುಂಬವೊಂದು ಸಾಬೀತುಪಡಿಸಿದೆ. 13 ಜನರಿರುವ ಕೂಡು ಕುಟುಂಬವೊಂದು ಆತ್ಮವಿಶ್ವಾಸದಿಂದಲೇ ಕೊರೊನಾವನ್ನು ಗೆದ್ದಿದೆ.
ಆತ್ಮವಿಶ್ವಾಸದಿಂದ ಕೊರೊನಾದಿಂದ ಮುಕ್ತ
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬಂಗಾಡಿಯ 13 ಮಂದಿಯಿಂದ ಕೂಡು ಕುಟುಂಬ ಮಾರಕ ಕೊರೊನಾ ಸೋಂಕಿಗೆ ತುತ್ತಾಗಿತ್ತು. ಬಂಗಾಡಿಯ ಶಿವಪ್ಪ ಪೈಯವರ 13 ಮಂದಿ ಇದ್ದ ಕುಟುಂಬ ಕೊರೊನಾಗೆ ಅಕ್ಷರಶಃ ತತ್ತರಿಸಿ ಹೋಗಿತ್ತು. ಆದರೆ 13 ಮಂದಿಯ ಒಗ್ಗಟ್ಟು ಮತ್ತು ಆತ್ಮವಿಶ್ವಾಸದಿಂದ ಕೊರೊನಾದಿಂದ ಪೈ ಕುಟುಂಬ ಮುಕ್ತವಾಗಿದೆ. ಶಿವಪ್ಪ ಪೈಯುವರ ಕುಟುಂಬ ಹಸುಗೂಸಿನಿಂದ ವೃದ್ಧರ ತನಕ ಇದ್ದರೂ ಕೊರೊನಾವನ್ನು ಎಲ್ಲರೂ ಜೊತೆಯಾಗಿ ಮಣಿಸಿದ್ದಾರೆ.
9 ಮಂದಿ ಮನೆಯಲ್ಲೇ ಐಸೋಲೇಷನ್
ಕಳೆದ ಎಪ್ರಿಲ್ 28 ರಂದು ಶಿವಪ್ಪ ಪೈಯವರ ಮನೆಯಲ್ಲಿ ದೈವಾರಾಧನೆಯ ಕಾರ್ಯಕ್ರಮ ನಡೆದಿದ್ದು, ಈ ಕಾರ್ಯಕ್ರಮಕ್ಕೆ ಮುಂಬೈನಿಂದಲೂ ಬಂಧುಗಳು ಆಗಮಿಸಿದ್ದರು. ಮುಂಬೈನಿಂದ ಬಂದ ಸಂಬಂಧಿಕರೋರ್ವ ಮಹಿಳೆಯಲ್ಲಿ ಸೋಂಕು ಲಕ್ಷಣಗಳು ಕಾಣಿಸಿಕೊಂಡಿತ್ತು. ಆನಂತರ ಒಬ್ಬೊಬ್ಬರಂತೆ ಹದಿಮೂರು ಮಂದಿಗೂ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಕುಟುಂಬದ ಇಬ್ಬರ ಮಹಿಳೆಯರು ಮತ್ತು ಇಬ್ಬರು ಪುರುಷರು ಮಂಗಳೂರಿನ ಖಾಸಗಿ ಆಸ್ಪತ್ರೆ ಮತ್ತು ಬೆಳ್ತಂಗಡಿಯ ಸರ್ಕಾರಿಯ ಆಸ್ಪತ್ರೆಗೆ ದಾಖಲಾಗಿದ್ದರೆ, ಉಳಿದ 9 ಮಂದಿ ಮನೆಯಲ್ಲೇ ಐಸೋಲೇಷನ್ಗೆ ಒಳಗಾಗಿದ್ದಾರೆ.
ವೈದ್ಯರ ಸಲಹೆಯನ್ನು ಚಾಚೂ ತಪ್ಪದೆ ಪಾಲಿಸಿದ್ದಾರೆ
ಮನೆಯಲ್ಲಿ ಸಣ್ಣ ಮಕ್ಕಳು ಇರುವುದರಿಂದ ಆರಂಭದಲ್ಲಿ ಕುಟುಂಬ ಸದಸ್ಯರಿಗೆ ಭಯವಾದರೂ ಆನಂತರ ಎಲ್ಲರೂ ಒಂದು ನಿರ್ಧಾರ ಕೈಗೊಂಡರು. ಎಲ್ಲರೂ ಪ್ರತ್ಯೇಕವಾಗಿ ಇದ್ದು, ಅಂತರ ಕಾಯ್ದುಕೊಂಡರು. ಮನೆಯಲ್ಲಿ ದಿನಸಿ ವಸ್ತುಗಳು ಮೊದಲೇ ಶೇಖರಣೆಯಾಗಿದ್ದರಿಂದ, ದಿನಕ್ಕೊಬ್ಬರಂತೆ ಆಹಾರ ತಯಾರಿಸುವ ಕಾರ್ಯ ಕೈಗೊಂಡಿದ್ದಾರೆ.
ಕುಟುಂಬ ಸದಸ್ಯರೆಲ್ಲರೂ ವೈದ್ಯರ ಸಲಹೆಯನ್ನು ಚಾಚೂ ತಪ್ಪದೆ ಪಾಲಿಸಿದ್ದಾರೆ. ಮನೆಮದ್ದು, ಕಷಾಯವನ್ನು ಆಗಾಗ್ಗೆ ತೆಗೆದುಕೊಂಡಿದ್ದಾರೆ. ಬೆಳಗ್ಗೆ ಬಿಸಿಲಿಗೆ ಸ್ವಲ್ಪ ಹೊತ್ತು ಮನೆಯಂಗಳದಲ್ಲೇ ಮೈಯೊಡ್ಡಿ ಆರೋಗ್ಯ ಸಮತೋಲನವನ್ನು ಕಾಪಾಡಿಕೊಂಡಿದ್ದಾರೆ.
ಕೊರೊನಾ ವಿರುದ್ಧ ಆತ್ಮವಿಶ್ವಾಸವೇ ಪ್ರಬಲ ಅಸ್ತ್ರ
ಇದೀಗ 13 ಮಂದಿಯ ವರದಿ ನೆಗೆಟಿವ್ ಬಂದಿದ್ದು, ಹೋಮ್ ಐಸೋಲೇಷನ್ ಕೂಡಾ ಮುಗಿದಿದೆ. ಕೊರೊನಾ ಜಯಿಸಿದ ಸಾರ್ಥಕ ಭಾವ ಮನೆಯವರಲ್ಲಿ ಮೂಡಿದೆ. ಈ ಸಂತಸವನ್ನು ಮನೆ ಮಂದಿ ಕೇಕ್ ಕಟ್ ಮಾಡುವ ಮೂಲಕ ಆಚರಿಸಿಕೊಂಡಿದ್ದಾರೆ. ಕೊರೊನಾ ಬಗ್ಗೆ ಭಯ ಬೇಡ ಆದರೆ ಜಾಗ್ರತೆ ಇರಲಿ. ಕೊರೊನಾ ವಿರುದ್ಧದ ಹೋರಾಟಕ್ಕೆ ಆತ್ಮವಿಶ್ವಾಸವೇ ಪ್ರಬಲ ಅಸ್ತ್ರ ಎಂದು ಜನರಿಗೆ ಕಿವಿಮಾತು ಹೇಳಿದ್ದಾರೆ.