ಮಂಗಳೂರು ವಿಮಾನ ದುರಂತದ ಕಹಿ ನೆನಪಿಗೆ 10 ವರ್ಷ
ಮಂಗಳೂರು, ಮೇ 22: ಮಂಗಳೂರು ವಿಮಾನ ದುರಂತದ ನಡೆದು ಮೇ 22ಕ್ಕೆ, ಆ ದುರಂತದ ಕಹಿ ನೆನಪಿಗೆ ಹತ್ತು ವರ್ಷ ಕಳೆದಿದೆ. ಅಂದು ದುಬೈನಿಂದ ಮಂಗಳೂರಿಗೆ ಬಂದಿಳಿದಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ 812 ಬಜ್ಪೆ ನಿಲ್ದಾಣ ಸ್ಪರ್ಶಿಸುತ್ತಿದ್ದಂತೆ 158 ಮಂದಿಯನ್ನು ಬಲಿತೆಗೆದುಕೊಂಡು ಬಿಟ್ಟಿತ್ತು. ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ, 6 ಜನ ಸಿಬ್ಬಂದಿ ಸೇರಿದಂತೆ 166 ಮಂದಿಯನ್ನು ಹೊತ್ತು ತಂದಿದ್ದ ವಿಮಾನ ಬಜ್ಪೆ ವಿಮಾನ ನಿಲ್ದಾಣದಲ್ಲಿ ರನ್ ವೇಯನ್ನು ಜಿಗಿದು ಹತ್ತಿರದಲ್ಲಿದ್ದ ಗುಡ್ಡಕ್ಕೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿತ್ತು. ಈ ದುರಂತದಲ್ಲಿ 8 ಜನ ಬದುಕುಳಿದಿದ್ದರು.
Recommended Video
2010 ರ ಮೇ 22ರ ಮುಂಜಾನೆ 6.05 ಕ್ಕೆ ಸಂಭವಿಸಿದ ವಿಮಾನ ದುರಂತದಲ್ಲಿ ಮಡಿದ 158 ಮಂದಿಯಲ್ಲಿ 12 ಮಂದಿಯ ಗುರುತನ್ನು ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ಈ ಸಂದರ್ಭದಲ್ಲಿ ಮೃತದೇಹಗಳನ್ನು ತಣ್ಣೀರು ಬಾವಿ ಸಮುದ್ರ ಕಿನಾರೆಯ ಸಮೀಪ ಜಿಲ್ಲಾಡಳಿತದ ವತಿಯಿಂದ ಸರಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ಮಾಡಲಾಗಿತ್ತು.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರೇತಶಾಂತಿ
ಏರ್ ಇಂಡಿಯಾದ ನಡೆ ವಿರೋಧಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು
ವಿಮಾನ ದುರಂತದಲ್ಲಿ ಮಡಿದ ಕುಟುಂಬಗಳಿಗೆ, ದುರ್ಘಟನೆ ಬಳಿಕ ಏರ್ ಇಂಡಿಯಾ ನೀಡಬೇಕಾದ ಪರಿಹಾರ ಧನ ಎರಡು ವರ್ಷದೊಳಗೆ ನೀಡುವ ಧಾವಂತದಲ್ಲಿತ್ತು. ದುಃಖದ ನಡುವೆ ಬಂದ ಪರಿಹಾರ ಸ್ವೀಕರಿಸಿ ಸುಮ್ಮನಿದ್ದವರು ಕೆಲವರಾದರೆ, ಇನ್ನು ಕೆಲ ಕುಟುಂಬಗಳು ನಿಜವಾದ ಸಾಂತ್ವನ ನೀಡುವುದಾದರೆ ನ್ಯಾಯಯುತ ಪರಿಹಾರ ನೀಡಬೇಕೆಂದು ಹೋರಾಟಕ್ಕಿಳಿದಿದ್ದರು.
ಪರಿಹಾರ ಧನವನ್ನು ವಿಮಾನಯಾನ ಸಂಸ್ಥೆ ಕೊಂಚ ಹೆಚ್ಚಳ ಮಾಡಿತು. ಇದೀಗ ಮಂಗಳೂರು ಹಾಗೂ ಒಬ್ಬರು ಕೇರಳದವರನ್ನು ಹೊರತುಪಡಿಸಿ ಎಲ್ಲರಿಗೂ ಪರಿಹಾರದ ಹಣ ತಲುಪಿತ್ತು. ಆದರೆ ಇಬ್ಬರು ಮಾತ್ರ ಏರ್ ಇಂಡಿಯಾದ ನಡೆ ವಿರೋಧಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.
ಏರ್ ಇಂಡಿಯಾ ಸಂಸ್ಥೆಗೆ ನ್ಯಾಯಪೀಠ ಸೂಚಿಸಿದೆ
ಏರ್ ಇಂಡಿಯಾ ವಿಮಾನ ದುರಂತದಲ್ಲಿ ಮಡಿದಿದ್ದ ವ್ಯಕ್ತಿಯೊಬ್ಬರ ಕುಟುಂಬಕ್ಕೆ ಹೆಚ್ಚುವರಿ ಪರಿಹಾರ ಒದಗಿಸುವಂತೆ ಆದೇಶಿಸಿ ಸುಪ್ರೀಂ ಕೋರ್ಟ್ ಇದೀಗ ಮಹತ್ವದ ತೀರ್ಪು ನೀಡಿದೆ. ದುರಂತದಲ್ಲಿ ಮೃತಪಟ್ಟಿದ್ದ ಯುಎಇ ಮೂಲದ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ 45 ವರ್ಷದ ಮಹೇಂದ್ರ ಕೋಡ್ಕಣಿ ಅವರ ಕುಟುಂಬಕ್ಕೆ 7.64 ಕೋಟಿ ರೂ. ಪರಿಹಾರ ನೀಡುವಂತೆ ಏರ್ ಇಂಡಿಯಾ ಸಂಸ್ಥೆಗೆ ನ್ಯಾ. ಡಿ.ವೈ. ಚಂದ್ರಚೂಡ್ ಮತ್ತು ನ್ಯಾ. ಅಜಯ್ ರಸ್ತೋಗಿ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ನ್ಯಾಯಪೀಠ ಸೂಚಿಸಿದೆ.
ಬಡ್ಡಿ ಸಮೇತ ಪರಿಹಾರ ನೀಡಲು ಆದೇಶ
ಪ್ರಕರಣ ಸಂಬಂಧ ತೀರ್ಪು ನೀಡಿದ ನ್ಯಾಯಪೀಠವು, ಮಹೇಂದ್ರ ಅವರಿಗೆ ಸಲ್ಲಬೇಕಾದ ಪರಿಹಾರದ ಲೆಕ್ಕಾಚಾರದ ವೇಳೆ ಅವರ ವೇತನದ ಮೊತ್ತದಿಂದ ಹಣ ಕಡಿತಗೊಳಿಸಿರುವುದು ಮತ್ತು ಅದಕ್ಕೆ ರಾಷ್ಟ್ರೀಯ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗವು ಕೊಟ್ಟಿರುವ ಕಾರಣವು ಒಪ್ಪುವುದಿಲ್ಲ ಎಂದು ಹೇಳಿದೆ. ಈಗ ಅವರಿಗೆ 7.64 ಕೋಟಿ ರೂ. ಪರಿಹಾರ ಮೊತ್ತ ಮತ್ತು ಹೆಚ್ಚುವರಿ ಮೊತ್ತಕ್ಕೆ ವಾರ್ಷಿಕ ಶೇ.9 ಬಡ್ಡಿ ಸಮೇತ ಪಾವತಿಸಬೇಕು ಎಂದು ಸುಪ್ರೀಂ ಕೋರ್ಟ್ ಏರ್ ಇಂಡಿಯಾಗೆ ಸಂಸ್ಥೆಗೆ ನಿರ್ದೇಶನ ನೀಡಿದೆ.
ಕೋರ್ದಬ್ಬು ದೈವದ ದರ್ಶನ ಪ್ರೇತಮೋಕ್ಷ ನಡೆದಿತ್ತು
ವಿಮಾನ ದುರಂತದಲ್ಲಿ ಮಡಿದ ಕಲಾವಿದನೊಬ್ಬನ ಆತ್ಮ ಬಜಪೆ ಏರ್ಪೋರ್ಟ್ ಜಾಗದ ಅಧಿದೈವ ಕೋರ್ದಬ್ಬು ಬಳಿ ಇದೆಯೆಂಬ ನಂಬಿಕೆ ಇತ್ತು. ಅದಕ್ಕಾಗಿ 2010 ಜೂನ್, 11 ರಂದು ಬಜಪೆ ಸಿದ್ಧಾರ್ಥ ನಗರದ ಕಾರಣಿಕದ ದೈವ ಕೋರ್ದಬ್ಬು ದೈವದ ದರ್ಶನ ಸಂದರ್ಭ ಪ್ರೇತಮೋಕ್ಷ ನಡೆದಿತ್ತು. ಮೇ 22 ರಂದು ವಿಮಾನ ದುರಂತದಲ್ಲಿ ಕೆಮ್ತೂರಿನ ಜಯ ಪ್ರಕಾಶ್ ದೇವಾಡಿಗ ಮೃತಪಟ್ಟಿದ್ದರು. ಅವರು ವಿಮಾನದಲ್ಲಿ ಕುಳಿತಿದ್ದ ಸೀಟು ನಂಬರ್ 63. ಇದರಲ್ಲಿ ಏನು ವಿಶೇಷ ಎಂದರೆ ಜೆ.ಪಿ. ಅಕ್ಕಪಕ್ಕದಲ್ಲಿ ಕುಳಿತಿದ್ದ 62 ಮತ್ತು 64ನೇ ಸೀಟ್ನ ಪ್ರಯಾಣಿಕರು ಬದುಕಿ ಉಳಿದಿದ್ದಾರೆ. ಈ ಮೂರು ಸೀಟುಗಳು ಸಿಕ್ಕಿದ್ದು ವಿಮಾನ ತುಂಡಾದ ರೆಕ್ಕೆ ಬಳಿಯಲ್ಲಿ ಎಂಬುದು ವಿಶೇಷ.