ಪಿಲಿಕುಳಕ್ಕೆ ಶೀಘ್ರದಲ್ಲೇ ಹೊಸ ಅತಿಥಿಗಳ ಆಗಮನ
ಮಂಗಳೂರು, ಜುಲೈ 15 : ಪಿಲಿಕುಳ ಡಾ.ಶಿವರಾಮ ಕಾರಂತ ನಿಸರ್ಗಧಾಮದ ಮೃಗಾಲಯಕ್ಕೆ ಶೀಘ್ರದಲ್ಲೇ ನೂತನ ಅತಿಥಿಗಳ ಆಗಮನವಾಗಲಿದೆ. 'ದಾನಿಗಳ ಸಹಕಾರ ಪಡೆದು ಜಿರಾಫೆ, ಝೀಬ್ರಾ ಹಾಗೂ ಚಿಂಪಾಂಜಿಗಳನ್ನು ಆಮದು ಮಾಡಿಕೊಳ್ಳುವ ಕುರಿತು ಚಿಂತನೆ ನಡೆದಿದೆ' ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎ.ಬಿ ಇಬ್ರಾಹಿಂ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು. 'ಈ ಪ್ರಾಣಿಗಳನ್ನು ತರಲು ಸುಮಾರು 1.75 ಕೋ. ರೂ. ವೆಚ್ಚವಾಗಲಿದ್ದು, ಸಹಕಾರಕ್ಕಾಗಿ ಈಗಾಗಲೇ ಕೆಲವೊಂದು ಕಾರ್ಪೊರೇಟ್ ಸಂಸ್ಥೆಗಳಿಗೆ ಮನವಿ ಮಾಡಲಾಗಿದೆ. ಜಿರಾಫೆಗೆ 75 ಲಕ್ಷ ರೂ. ಝೀಬ್ರಾ ಹಾಗೂ ಚಿಂಪಾಂಜಿಗೆ ತಲಾ 50 ಲಕ್ಷ ರೂ. ವೆಚ್ಚವಿದೆ' ಎಂದು ತಿಳಿಸಿದರು. [ಪಿಲಿಕುಳ ನಿಸರ್ಗಧಾಮಕ್ಕೆ ಪ್ರವಾಸ ಹೋಗಿ ಬನ್ನಿ]
ಪ್ರಸ್ತುತ ಪಿಲಿಕುಳದಲ್ಲಿ 120 ಜಾತಿಯ ಒಟ್ಟು 1,200 ಪ್ರಾಣಿ, ಪಕ್ಷಿ , ಉರಗಗಳಿವೆ. ಇಲ್ಲಿನ ಪ್ರಾಣಿಗಳನ್ನು ವಿನಿಮಯ ಮಾಡುವ ಕುರಿತು ಕೂಡ ಪ್ರಯತ್ನ ನಡೆದಿದೆ. ಆಫ್ರಿಕಾದಿಂದ ಜೋಡಿ ಪ್ರಾಣಿಗಳನ್ನು ತರುವುದರಿಂದ ಎಲ್ಲವನ್ನೂ ಒಟ್ಟಿಗೆ ತರುವಂತಿಲ್ಲ. ಆಮದು ಕಾರ್ಯ ಸುಸೂತ್ರವಾಗಿ ನಡೆದರೆ ಮುಂದಿನ 6 ತಿಂಗಳಲ್ಲಿ ಈ ಪ್ರಾಣಿಗಳು ಪಿಲಿಕುಳ ತಲುಪಲಿವೆ. [ಹಲಸಿನ ಖಾದ್ಯಗಳನ್ನು ಸವಿಯಲು ಪಿಲಿಕುಳಕ್ಕೆ ಬನ್ನಿ]
ಜು.16-17 : ನಿಸರ್ಗಧಾಮದಲ್ಲಿ ವಿವಿಧ ಇಲಾಖೆಗಳು ಹಾಗೂ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಜು.16 ಮತ್ತು 17 ರಂದು ಬೃಹತ್ ಹಲಸು ಮೇಳ ಆಯೋಜಿಸಲಾಗಿದೆ. ಮೇಳದಲ್ಲಿ ರಾಜ್ಯದ ವಿವಿಧ ಭಾಗಗಳ ಹಲಸು ಬೆಳೆಗಾರರು ಭಾಗವಹಿಸಲಿದ್ದು, 55 ಮಳಿಗೆಗಳಿಗೆ ಉಚಿತ ಅವಕಾಶ ಕಲ್ಪಿಸಲಾಗಿದೆ.