ಡಿ. 21ರ ಹುಬ್ಬಳ್ಳಿ ಬಿಜೆಪಿ ಸಮಾವೇಶಕ್ಕೆ ಯೋಗಿ ಆದಿತ್ಯನಾಥ
ಮಂಗಳೂರು, ನವೆಂಬರ್ 9: ಡಿಸೆಂಬರ್ 21ಕ್ಕೆ ಹುಬ್ಬಳ್ಳಿಯಲ್ಲಿ ಬಿಜೆಪಿ ಬೃಹತ್ ಸಮಾವೇಶ ನಡೆಯಲಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ಸಮಾವೇಶದಲ್ಲಿ ಮುಖ್ಯ ಭಾಷಣ ಮಾಡಲಿದ್ದಾರೆ.
ಮಂಗಳೂರಿನಲ್ಲಿ ಇಂದು ನಡೆದ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿಯನ್ನು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ನೀಡಿದರು.
ಪರಿವರ್ತನಾ ಯಾತ್ರೆ ಬೆಳಗಾವಿ ಅಧಿವೇಶನ ನಡೆಯುವವರೆಗೆ ಮುಂದುವರಿಯಲಿದೆ. ಬೆಳಗಾವಿ ಅಧಿವೇಶನದ ಒಳಗೂ ಮತ್ತು ಹೊರಗೂ ಬಿಜೆಪಿ ಹೋರಾಟ ನಡೆಸಲಿದೆ. ಡಿವೈಎಸ್ ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಕೆಜೆ ಜಾರ್ಜ್ ರಾಜೀನಾಮೆಗೆ ಒತ್ತಾಯಿಸಿ ಸದನದಲ್ಲಿ ಬಿಜೆಪಿ ಪ್ರತಿಭಟನೆ ನಡೆಸಲಿದೆ ಎಂದು ಅವರು ವಿವರ ನೀಡಿದರು.
ಮಡಿಕೇರಿಯಲ್ಲಿ ಪರಿವರ್ತನಾ ಯಾತ್ರೆಗೆ ಅವಕಾಶ ನೀಡದೇ ಇರುವುದು ಖಂಡನೀಯ ಎಂದು ಇದೇ ಸಂದರ್ಭದಲ್ಲಿ ಲಿಂಬಾವಳಿ ಹೇಳಿದರು. ಇನ್ನು ಕಾಂಗ್ರೆಸ್ ನಿಂದ ಬಿಜೆಪಿಗೆ ಬರುವ ಶಾಸಕರ ಸಂಖ್ಯೆ ಜಾಸ್ತಿ ಇದೆ ಎಂದು ಲಿಂಬಾವಳಿ ಹೇಳಿದ್ದಾರೆ. ಬಿಜೆಪಿಯಿಂದ ಯಾರೂ ಬೇರೆ ಪಕ್ಷಕ್ಕೆ ಹೋಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ರಾಜ್ಯ ಉಸ್ತುವಾರಿ ಕೆ.ಸಿ ವೇಣುಗೋಪಾಲ್, ವಿಷ್ಣುನಾಥನ್ ಮೇಲೆ ಅತ್ಯಾಚಾರದ ಪ್ರಕರಣ ಇದೆ. ಕೇರಳದ ಸೋಲಾರ್ ಹಗರಣ, ಅತ್ಯಾಚಾರದ ಬಗ್ಗೆ ಜಸ್ಟಿಸ್ ಶಿವರಂಜನ್ ತನಿಖೆ ನಡೆಸಿ ಕೇರಳ ಸಿಎಂ ಪಿಣರಾಯಿ ವಿಜಯನ್ ಗೆ ವರದಿ ನೀಡಿದ್ದಾರೆ. ಹೀಗಿರುವಾಗ ಅತ್ಯಾಚಾರಿಗಳನ್ನು ಕಾಂಗ್ರೆಸ್ ರಾಜ್ಯಕ್ಕೆ ಕರೆತರೋದು ಎಷ್ಟು ಸರಿ? ಎಂಮದು ಸುದ್ದಿಗೋಷ್ಠಿಯಲ್ಲಿ ಅರವಿಂದ ಲಿಂಬಾವಳಿ ಪ್ರಶ್ನಿಸಿದ್ದಾರೆ.