ಯಡಿಯೂರಪ್ಪ ಮಿಷನ್-150ಈಗ ಮಿಷನ್-50 : ಸಿದ್ದರಾಮಯ್ಯ ವ್ಯಂಗ್ಯ
Recommended Video
ಮಂಗಳೂರು, ಅಕ್ಟೋಬರ್ 22: "ಬಿಜೆಪಿಯವರು ಚುನಾವಣೆ ಗೆದ್ದ ಭ್ರಮೆಯಲ್ಲಿದ್ದಾರೆ. ಯಡಿಯೂರಪ್ಪ ಮಿಷನ್-150 ಎಂದು ಹೇಳುತ್ತಿದ್ದರು. ಈಗ ಅದು ಮಿಷನ್-50ಗೆ ಬಂದಿಳಿದಿದೆ," ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.
ಬಂಟ್ವಾಳದಲ್ಲಿ 252 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ ಮತ್ತು ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
"ಅಮಿತ್ ಷಾ ರಾಜ್ಯಕ್ಕೆ ಬಂದ ಮೇಲೆ ರಾಜ್ಯ ಸರ್ಕಾರದ ವಿರುದ್ದ ಬಿಜೆಪಿಯವರು ಸುಳ್ಳು ಆರೋಪ ಮಾಡಲು ಆರಂಭಿಸಿದ್ದಾರೆ. ಕರ್ನಾಟಕದಲ್ಲಿ ಕೋಮುವಾದಿ ಪಕ್ಷಕ್ಕೆ ಅಧಿಕಾರ ನೀಡಬೇಡಿ. ಕೋಮುವಾದಿಗಳ ಮಾತಿಗೆ ಕಿವಿಗೊಡಬೇಡಿ," ಎಂದು ಸಲಹೆ ನೀಡಿದರು.
"ಯಡಿಯೂರಪ್ಪ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಕಲ್ಲಿದ್ದಲು ಹಗರಣದಲ್ಲಿ ನನ್ನ ಮತ್ತು ಶಿವಕುಮಾರ್ ಹೆಸರು ಹೇಳಿದ್ದಾರೆ. ಯಡಿಯೂರಪ್ಪ ಅವರದ್ದು ಬೇಜವಾಬ್ದಾರಿ ಹೇಳಿಕೆ. ಅವರು ಸುಳ್ಳು ಆರೋಪ ಮಾಡುತ್ತಿದ್ದಾರೆ," ಎಂದು ಸಿದ್ದರಾಮಯ್ಯ ಹೇಳಿದರು.
"ಯಡಿಯೂರಪ್ಪ ಚೆಕ್ ಮೂಲಕ ಹಣ ತೆಗೆದುಕೊಂಡ ಗಿರಾಕಿ. ಯಡಿಯೂರಪ್ಪ ಕಾಲದಲ್ಲಿ ಮಂತ್ರಿಗಳು ಜೈಲಿಗೆ ಹೋಗಿದ್ದಾರೆ," ಎಂದು ಮುಖ್ಯಮಂತ್ರಿ ವಾಗ್ದಾಳಿ ನಡೆಸಿದರು.
"ಪ್ರಧಾನಿ ಮೋದಿ ಅಚ್ಛೇ ದಿನ್ ಅಂತಾ ಹೇಳಿದರು. ಅಚ್ಛೇ ದಿನ್ ಕೇವಲ ಅದಾನಿ ಅಂಬಾನಿಗೆ ಮಾತ್ರ ಬಂದಿದೆ. ಕಪ್ಪು ಹಣ ವಾಪಾಸ್ ತಂದು 15 ಲಕ್ಷ ಅಕೌಂಟ್ ಗೆ ಹಾಕುವುದಾಗಿ ಹೇಳಿದರು. 15 ರೂಪಾಯಿ ಕೂಡಾ ಹಾಕಲಿಲ್ಲ. ಮೋದಿ ಮನ್ ಕೀ ಬಾತ್ ಮಾಡಿದರು. ಆದರೆ ನಾವು ಜನರನ್ನು ಮೋಸ ಮಾಡುವುದಿಲ್ಲ. ನಮ್ಮದು ಕಾಮ್ ಕೀ ಬಾತ್," ಎಂದು ಸಿದ್ದರಾಮಯ್ಯ ಮೋದಿ ಸರಕಾರವನ್ನು ತರಾಟೆಗೆ ತೆಗೆದುಕೊಂಡರು.
ಬಿಜೆಪಿಯಲ್ಲಿ ಲೋಕಸಭೆಯಲ್ಲಿ ಮುಸ್ಲಿಂ ಪ್ರತಿನಿಧಿಯಿಲ್ಲ. ಉತ್ತರ ಪ್ರದೇಶ ಕ್ಯಾಬಿನೆಟ್ ನಲ್ಲಿ ಒಬ್ಬನೇ ಒಬ್ಬ ಮುಸ್ಲಿಂ ಇಲ್ಲ. ಬಿಜೆಪಿಗೆ ಅನ್ವರ್ಥನಾಮ ಡೋಂಗಿಗಳ ಪಕ್ಷ ಎಂದು ಅವರು ವ್ಯಂಗ್ಯವಾಡಿದರು.
ಅನಂತ ಕುಮಾರ್ ಹೆಗಡೆ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಹಾಕಬೇಡಿ ಎಂದಿದ್ದಾರೆ. ಅವರು ಬಾಲಿಶ ಹೇಳಿಕೆ ನೀಡಿದ್ದಾರೆ. ಟಿಪ್ಪು ಸುಲ್ತಾನ್ ಸ್ವಾತಂತ್ರ್ಯದ ಕಹಳೆ ಮೊಳಗಿಸಿದವರು ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
"ಶೋಭಾ ಕರಂದ್ಲಾಜೆ ಕೂಡಾ ಹೆಸರು ಹಾಕಬೇಡಿ ಎಂದು ಹೇಳಿದ್ದಾರೆ. ಶೋಭಾ ಕರಂದ್ಲಾಜೆ ಕೆಜೆಪಿಯಲ್ಲಿದ್ದಾಗ ಟಿಪ್ಪು ಜಯಂತಿಯಲ್ಲಿ ಪಾಲ್ಗೊಂಡರು. ಯಡಿಯೂರಪ್ಪ ಟಿಪ್ಪುವಿನ ಡ್ರೆಸ್ ಹಾಕೊಂಡು ಮೆರೆದರು. ಜಗದೀಶ್ ಶೆಟ್ಟರ್ ಟಿಪ್ಪುವಿನ ಬಗ್ಗೆ ಹಾಡಿ ಹೊಗಳಿದರು. ಆದರೆ ಈಗ ಬೇರೆ ರಾಗ ಹಾಡುತ್ತಿದ್ದಾರೆ," ಎಂದು ಮುಖ್ಯಮಂತ್ರಿ ಕಿಡಿಕಾರಿದರು.