ಸಿದ್ದರಾಮಯ್ಯನವರಿಗೆ ನೇಗಿಲು ಹಿಡಿಯುವ ಸವಾಲು ಹಾಕಿದ ಯಡಿಯೂರಪ್ಪ
ಮಂಗಳೂರು, ಮಾರ್ಚ್ 2: ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ . ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ತಲೆ ತಿರುಕನಂತೆ ಮಾತನ್ನಾಡುವ ಭ್ರಷ್ಟ ಮುಖ್ಯಮಂತ್ರಿಗೆ ರಾಜ್ಯದ ಜನರು ಮುಂದಿನ ಚುನಾವಣೆಯಲ್ಲಿ ತಕ್ಕ ಉತ್ತರ ನೀಡುತ್ತಾರೆ ಎಂದು ಕಿಡಿಕಾರಿದ್ದಾರೆ.
"ಯಾರು ಮಣ್ಣಿನ ಮಕ್ಕಳು, ಯಾರು ಅಲ್ಲ ಎಂಬುದಕ್ಕಿಂತ, ರೈತ ಪರವಾಗಿ ನಾವು ಹೋರಾಟ ಮಾಡಿದ್ದೇವೆ. ರೈತರ ಸಂಕಷ್ಟಕ್ಕೆ ಸ್ಪಂದಿಸಿ, ರೈತರ ಸಾಲ ಮನ್ನಾ ಮಾಡಿದ್ದೇವೆ. ಹಲವು ರೈತಪರ ಯೋಜನೆಗಳನ್ನು ರಾಜ್ಯದಲ್ಲಿ ತಂದಿದ್ದೇವೆ," ಎಂದು ಅವರು ಹೇಳಿದರು.
ಬೇಜವಾಬ್ದಾರಿ ಸಿಎಂಗೆ ತಕ್ಕ ಪಾಠ
"ರಾಜ್ಯದ ಬೇಜವಾಬ್ದಾರಿ ಸಿಎಂಗೆ ಜನರು ತಕ್ಕ ಪಾಠ ಕಲಿಸಲಿದ್ದಾರೆ . ಸಿಎಂ ಸಿದ್ದರಾಮಯ್ಯ ಭ್ರಷ್ಟ ಮಂತ್ರಿಗಳನ್ನು ತನ್ನ ಸುತ್ತಮುತ್ತ ಇಟ್ಟುಕೊಂಡಿದ್ದಾರೆ," ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, "ಸಿಎಂನ ಆಪ್ತ ಶಿಷ್ಯನೊಬ್ಬ ಸರಕಾರಿ ಕಚೇರಿಗೆ ಹೊಕ್ಕು ಪೆಟ್ರೋಲ್ ಸುರಿದು ಹೆದರಿಸಿದ್ದ. ರಾಜ್ಯದಲ್ಲಿ ಎಲ್ಲಿದೆ ಕಾನೂನು ಸುವ್ಯವಸ್ಥೆ? ಜನರು ಸಂಕಷ್ಟ ಪಡುತ್ತಿದ್ದಾರೆ," ಎಂದು ಹರಿಹಾಯ್ದರು.
ನೀನು ಮಾಡಿರುವುದೇನು ಘನಂದಾರಿ ಕೆಲಸ?
"ನಮ್ಮ ಅಧಿಕಾರದ ಅವಧಿಯಲ್ಲಿ ರೈತರ ಪರವಾಗಿ ಸಾಕಷ್ಟು ಸೌಲಭ್ಯಗಳನ್ನು ಜಾರಿಗೆ ತಂದಿದ್ದೇವೆ. 50 ಸಾವಿರದವರೆಗೆ ನಾವು ಸಾಲ ಮನ್ನಾ ಮಾಡಿದ್ದೇವೆ. ನೀನು ಮಾಡಿರುವುದೇನು ಘನಂದಾರಿ ಕೆಲಸ?" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಏಕವಚನದಲ್ಲಿ ತರಾಟೆಗೆ ತೆಗೆದುಕೊಂಡರು.
ಬನ್ನಿ ಇಬ್ಬರೂ ನೇಗಿಲು ಹಿಡಿಯುವ
ಮೋಜು ಮಾಡುವ ಸಿದ್ಧರಾಮಯ್ಯ ಎಂದು ಹೇಳಿದ ಅವರು, "ಬನ್ನಿ ಇಬ್ಬರೂ ನೇಗಿಲು ಹಿಡಿದುಕೊಳ್ಳುವ. ನಾನು ಬೆಳಗ್ಗೆ ಹೊಲಕ್ಕೆ ಹೋದರೆ ಬರುತ್ತಿದ್ದುದು ರಾತ್ರಿ. ಅವನೂ ನೇಗಿಲು ಕಟ್ಟಲಿ ನಾನು ಕಟ್ಟುತ್ತೇನೆ. ಅದರಿಂದ ಗೊತ್ತಾಗುತ್ತದೆ ಯಾರು ನೇಗಿಲು ಹಿಡಿದುಕೊಳ್ಳುವವರು ಎಂಬುದು," ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದರು.
ಮಂಗಳೂರು ಚಲೋ
ರಾಜ್ಯದಲ್ಲಿ ನಿರಂತರ ಕೊಲೆ, ಅನಾಚಾರ ನಡೀತಿದೆ. ರಾಜ್ಯದ ಜನರ ಸುರಕ್ಷೆಗಾಗಿ ನಾಳೆ ಪಾದಯಾತ್ರೆ ಆರಂಭಿಸುತ್ತೇವೆ ಎಂದು ಹೇಳಿದ ಅವರು, "ಮಹಿಳೆಯರು ಸೇರಿ ಒಟ್ಟು ಒಂದೂವರೆ ಲಕ್ಷ ಜನ ಯಾತ್ರೆಯಲ್ಲಿ ಸೇರಿಕೊಳ್ಳಲಿದ್ದಾರೆ. 'ಮಂಗಳೂರು ಚಲೋ' ಯಾತ್ರೆಯ ಸಮಾರೋಪದಲ್ಲಿ ಉತ್ತರ ಪ್ರದೇಶದ ಸಿಎಂ ಬರುತ್ತಿದ್ದು, ನಾನೂ ಭಾಗವಹಿಸುತ್ತೇನೆ. ಮೂರು ಜಿಲ್ಲೆಗಳಿಗೆ ಸಂಬಂಧಪಟ್ಟ ದೊಡ್ಡ ಸಮಾವೇಶ ನಡೆಯಲಿದೆ," ಎಂದು ಅವರು ಹೇಳಿದರು.