ಲ್ಯಾಬ್ ವಿವಾದ : ಸಿದ್ದರಾಮಯ್ಯಗೆ ಪೂಜಾರಿ ಮಂಗಳಾರತಿ
ಮಂಗಳೂರು, ಏಪ್ರಿಲ್ 13 : ಮುಖ್ಯಮಂತ್ರಿ ಸಿದ್ದರಾಮಯ್ಯ ತನ್ನ ಮಗ ಡಾ. ಯತೀಂದ್ರರ ಪಾಲುದಾರಿಕೆಯ ಕಂಪನಿಗೆ ಸರಕಾರಿ ಆಸ್ಪತ್ರೆಯಲ್ಲಿ ಲ್ಯಾಬ್ ನಡೆಸಲು ಟೆಂಡರ್ ನೀಡಿದ ವಿಚಾರದ ಬಗ್ಗೆ ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಿದ್ದರಾಮಯ್ಯ ರಾಜ್ಯದ ಜನತೆಯ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.
ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧೃತರಾಷ್ಟ್ರ ವ್ಯಾಮೋಹದಿಂದ ಇಡೀ ಕುಟುಂಬವೇ ಸರ್ವನಾಶವಾಯಿತು. ಮುಖ್ಯಮಂತ್ರಿಗಳೆ ನಿಮ್ಮ ಪುತ್ರ ವ್ಯಾಮೋಹಕ್ಕೆ ಪಕ್ಷವನ್ನು ಬಲಿಕೊಡಬೇಡಿ. ಇನ್ನು ಕಾರ್ಯಕರ್ತರ ವಿರೋಧ ಕಟ್ಟಿಕೊಂಡರೆ ತಕ್ಕ ಶಾಸ್ತಿ ಅನುಭವಿಸಬೇಕಾದೀತು ಅಂತ ಎಚ್ಚರಿಸಿದರು. [ಕೃಷ್ಣ ಮನೆಯಂಗಣದಲ್ಲಿ ಹಿರಿಯ ಕಾಂಗ್ರೆಸ್ಸಿಗರ ಅಪಸ್ವರ]
ನಿಮ್ಮತ್ರ ಕೈ ಮುಗಿದು ಮನವಿ ಮಾಡುತ್ತೇನೆ. ಈ ಟೆಂಡರ್ ರದ್ದು ಮಾಡಿ, ಇಲ್ಲದಿದ್ದರೆ ಪಕ್ಷ ನಿಮ್ಮನ್ನೇ ತೆಗೆಯಬಹುದು. ಇದಕ್ಕೆ ನೀವು ಆಸ್ಪದ ಕೊಡಬೇಡಿ. ನಾನು ನಿಷ್ಠುರವಾಗಿ ಮಾತನಾಡಬಹುದು, ಇದು ಪಕ್ಷಕ್ಕಾಗಿ ಹೊರತು ಬೇರೆ ಯಾವುದಕ್ಕೂ ಅಲ್ಲ ಅಂತ ಸಮಜಾಯಿಷಿ ನೀಡಿದರು. ಸಿದ್ದರಾಮಯ್ಯನವರು ಬರ ಪರಿಸ್ಥಿತಿಯ ಅಧ್ಯಯನಕ್ಕೆ ಭೇಟಿ ನೀಡಿರುವುದು ಸ್ವಾಗತಾರ್ಹವಾಗಿದೆ ಎಂದರು. [ಬರಪೀಡಿತ ಜಿಲ್ಲೆಗಳ ಪ್ರವಾಸಕ್ಕೆ ಹೊರಟ ಸಿದ್ದರಾಮಯ್ಯ]
ಏನಿದು ವಿವಾದ? : ಸಿದ್ದರಾಮಯ್ಯ ಅವರ ಎರಡನೇ ಮಗ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ನಿರ್ದೇಶಕರಾಗಿರುವ ಕಂಪನಿ ಮ್ಯಾಟ್ರಿಕ್ಸ್ ಇಮೇಜಿಂಗ್ ಸೊಲ್ಯುಷನ್ಸ್, ಸರಕಾರಿ ಆಸ್ಪತ್ರೆಗಳಲ್ಲಿ ಪ್ರಯೋಗಾಲಯ ಮತ್ತು ಡಯಾಗ್ನಸ್ಟಿಕ್ ಕೇಂದ್ರ ತೆರೆಯುತ್ತಿರುವುದು ತೀವ್ರ ಟೀಕೆಗೆ ಗುರಿಯಾಗಿದೆ. ಇದರ ವಿರುದ್ಧ ತನಿಖೆಯಾಗಬೇಕು ಎಂದು ಬಿಜೆಪಿ ಆಗ್ರಹಿಸಿದೆ. [ಯಡಿಯೂರಪ್ಪ ಹೋದಲೆಲ್ಲಾ ಅವರನ್ನು ಹಿಂಬಾಲಿಸಲು ಕಾಂಗ್ರೆಸ್ ನಿರ್ಧಾರ]
ಕೆಪಿಸಿಸಿ ಅಧ್ಯಕ್ಷ ಆಗಲ್ಲ : ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿದರೆ ನೀವು ಸೀಕ್ವಾರ ಮಾಡುತ್ತೀರಾ ಎಂಬ ಪ್ರತಕರ್ತರ ಪ್ರಶ್ನೆಗೆ ಉತ್ತರಿಸಿದ ಪೂಜಾರಿ, 2 ಬಾರಿ ಕೆಪಿಸಿಸಿ ಅಧ್ಯಕ್ಷನಾಗಿದ್ದೇನೆ. ಮತ್ತೆ ಅಧ್ಯಕ್ಷ ಸ್ಥಾನ ನೀಡಿದರೆ ಅದನ್ನು ಸ್ವೀಕರಿಸುವುದಿಲ್ಲ ಅಂತ ನುಡಿದರು. ಕೆಪಿಸಿಸಿ ಹುದ್ದೆಗೆ ಡಿಕೆ ಶಿವಕುಮಾರ್ ಹೆಸರು ಬಲವಾಗಿ ಕೇಳಿಬರುತ್ತಿದೆ. ['ನಾನು ಕೆಪಿಸಿಸಿ ಅಧ್ಯಕ್ಷ ಹುದ್ದೆಯ ಆಕಾಂಕ್ಷಿಯಲ್ಲ']