ಕೆಸಿ ವೇಣುಗೋಪಾಲ್ ರನ್ನು ರಾಜ್ಯಕ್ಕೆ ಬರಲು ಬಿಡುವುದಿಲ್ಲ: ಯಡಿಯೂರಪ್ಪ
ಮಂಗಳೂರು, ನವೆಂಬರ್ 9: ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆಸಿ ವೇಣುಗೋಪಾಲ್ ಮೇಲೆ ಸೋಲಾರ್ ಹಗರಣ ಮತ್ತು ಅತ್ಯಾಚಾರದ ಪ್ರಕರಣ ಇದೆ. ಹೀಗಾಗಿ ಕೆಸಿ ವೇಣುಗೋಪಾಲ್ ರನ್ನು ರಾಜ್ಯಕ್ಕೆ ಬರಲು ಬಿಡುವುದಿಲ್ಲ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಗುಡುಗಿದರು.
ಕೋರ್ ಕಮಿಟಿ ಸಭೆಯ ನಂತರ ಮಂಗಳೂರಿನಲ್ಲಿ ಮಾತನಾಡಿದ ಯಡಿಯೂರಪ್ಪ, ಜಸ್ಟಿಸ್ ಶಿವರಂಜನ್ ವರದಿಯಲ್ಲಿ ಕೆ.ಸಿ. ವೇಣುಗೋಪಾಲ್ ಮೇಲೆ ಆರೋಪ ಸಾಬೀತಾಗಿದೆ. ಹೀಗಾಗಿ ಕೆ.ಸಿ. ವೇಣುಗೋಪಾಲ್ ತನ್ನ ಎಲ್ಲಾ ಸ್ಥಾನಮಾನಗಳಿಗೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ವೇಣುಗೋಪಾಲ್ ಭಾಗವಹಿಸುವ ಎಲ್ಲಾ ಕಾರ್ಯಕ್ರಮಗಳಿಗೆ ಬಿಜೆಪಿಯಿಂದ ಮುತ್ತಿಗೆ ಹಾಕಲಾಗುವುದು ಎಂದು ಯಡಿಯೂರಪ್ಪ ಮಾಹಿತಿ ನೀಡಿದರು.
ಡಿಕೆ ಶಿವಕುಮಾರ್ ರನ್ನು ಬಿಜೆಪಿ ಸೇರುವಂತೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ, ಮುಖ್ಯಮಂತ್ರಿ ಅವರದ್ದು ಬಾಲಿಶತನದ ಹೇಳಿಕೆ ಎಂದಿದ್ದಾರೆ.
"ಮುಖ್ಯಮಂತ್ರಿಗಳು ಗೊಂದಲ ಸೃಷ್ಟಿಸಲು ಈ ಹೇಳಿಕೆ ನೀಡಿದ್ದಾರೆ. ಸ್ವತಂತ್ರ ಭಾರತದಲ್ಲಿ ಈ ರೀತಿ ಸುಳ್ಳು ಹೇಳಿಕೆ ನೀಡಿದ ಮೊದಲ ಮುಖ್ಯಮಂತ್ರಿ ಸಿದ್ದರಾಮಯ್ಯ. ಅವರು ಈ ಕೂಡಲೇ ರಾಜ್ಯದ ಜನರ ಮುಂದೆ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ಕಾನೂನು ಕ್ರಮ ಎದುರಿಸಲು ಸಿದ್ಧರಾಗಬೇಕು," ಎಂದು ಯಡಿಯೂರಪ್ಪ ಎಚ್ಚರಿಸಿದ್ದಾರೆ.