ಎಸ್ ಡಿಪಿಐ ಜೊತೆ ಮೈತ್ರಿಯಾಗಲು 'ಕೈ' ಹಿಂದೇಟು ಹಾಕುತ್ತಿರುವುದೇಕೆ?
ಮಂಗಳೂರು, ಸೆಪ್ಟೆಂಬರ್.04: ದಕ್ಷಿಣ ಕನ್ನಡ ಜಿಲ್ಲೆಯ 2 ನಗರಸಭೆ ಹಾಗು ಒಂದು ಪುರಸಭೆಗೆ ನಡೆದ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಬಂಟ್ವಾಳ ಪುರಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಸ್ಪಷ್ಟ ಬಹುಮತ ಪಡೆಯುವಲ್ಲಿ ವಿಫಲವಾಗಿದೆ.
ಈ ಹಿನ್ನೆಲೆಯಲ್ಲಿ ಬಂಟ್ವಾಳ ಪುರಸಭೆಯಲ್ಲಿ ಅಧಿಕಾರ ಗದ್ದುಗೆ ಏರುವ ಮ್ಯಾಜಿಕ್ ಸಂಖ್ಯೆ ಯಾವ ಪಕ್ಷಕ್ಕೂ ದೊರೆಯದ ಹಿನ್ನೆಲೆಯಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ. ಬಂಟ್ವಾಳ ಪುರಸಭೆಯ ಚುನಾವಣೆಯಲ್ಲಿ ನಡೆದ ಜಿದ್ದಾಜಿದ್ದಿನ ಹೋರಾಟದಲ್ಲಿ ಕಾಂಗ್ರೆಸ್ 12 ಸ್ಥಾನಗಳಲ್ಲಿ ಜಯಗಳಿಸಿದೆ. ಬಿಜೆಪಿ 11 ಸ್ಥಾನಗಳನ್ನು ಪಡೆದಿದ್ದು, ಎಸ್ ಡಿಪಿಐ 4 ಸ್ಥಾನಗಳಲ್ಲಿ ಜಯಗಳಿಸಿ ಅಚ್ಚರಿ ಮೂಡಿಸಿದೆ.
ಉಳ್ಳಾಲದಲ್ಲಿ 'ಕೈ' ಪ್ರಾಬಲ್ಯ ಮುರಿದ ಎಸ್ ಡಿಪಿಐ: ಕಾಂಗ್ರೆಸ್-ಜೆಡಿಎಸ್ ಮೈತ್ರಿ?
ಕಾಂಗ್ರೆಸ್ ಅಗ್ರಸ್ಥಾನ ಗಳಿಸಿಕೊಂಡಿದೆಯಾದರೂ ಅಧಿಕಾರ ಗದ್ದುಗೆಯಿಂದ ದೂರವಿದೆ. 27 ವಾರ್ಡ್ ಗಳಿಗೆ ನಡೆದ ಚುನಾವಣೆಯಲ್ಲಿ 12 ಕ್ಷೇತ್ರದಲ್ಲಿ ಜಯಗಳಿಸಿದ ಕಾಂಗ್ರೆಸ್ ಕಳೆದ ಬಾರಿಗಿಂತ ಸ್ಥಾನ ಗಳಿಕೆಯಲ್ಲಿ ಸ್ವಲ್ಪ ನಷ್ಟ ಅನುಭವಿಸಿದೆ.
ಕಾಂಗ್ರೆಸ್ಗೆ ಭಾರೀ ಸ್ಪರ್ಧೆ ನೀಡಿದ್ದ ಬಿಜೆಪಿ ಒಂದು ಸ್ಥಾನ ಕಡಿಮೆ ಪಡೆದುಕೊಂಡಿದೆ. ಚುನಾವಣೆಯಲ್ಲಿ ಅಚ್ಚರಿಯ ಫಲಿತಾಂಶ ದಾಖಲಿಸಿರುವ ಎಸ್ಡಿಪಿಐ 4 ಸ್ಥಾನಗಳನ್ನು ಗಳಿಸಿ ಕಿಂಗ್ ಮೇಕರ್ ಸ್ಥಾನದಲ್ಲಿದೆ. ಆದರೆ ಎಸ್ ಡಿಪಿಐ ನೊಂದಿಗೆ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್ ಹಿಂದೇಟು ಹಾಕುತ್ತಿದೆ. ಏಕೆ ಗೊತ್ತಾ? ಪೂರ್ಣವಾದ ವಿವರ ಇಲ್ಲಿದೆ...
ಮೈತ್ರಿ ಅನಿವಾರ್ಯ
ಬಂಟ್ವಾಳದ ಈ ಫಲಿತಾಂಶ ಕಾಂಗ್ರೆಸ್ ಹಾಗೂ ಬಿಜೆಪಿಗೆ ಮುಖಭಂಗ ಎಂದೇ ಪರಿಗಣಿಸಲಾಗಿದೆ. ಕಳೆದ ವಿದಾನಸಭಾ ಚುನಾವಣೆಯಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಬಲ ಅಭ್ಯರ್ಥಿ ಹಾಗು ಸಚಿವರಾಗಿದ್ದ ರಮಾನಾಥ್ ರೈ ಅವರನ್ನು ಸೋಲಿಸಿ ಬಿಜೆಪಿ ರಾಜೇಶ್ ನಾಯಕ್ ಗೆಲುವು ಸಾಧಿಸಿದ್ದರು.
ಜಿಲ್ಲೆಯಲ್ಲಿ ಈ ಗೆಲುವಿಗೆ ಭಾರೀ ಪ್ರಾಮುಖ್ಯತೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಬಂಟ್ವಾಳ ಪುರಸಭೆ ಚುನಾವಣೆಯಲ್ಲಿ ಬಿಜೆಪಿ ಅತ್ಯಧಿಕ ಸ್ಥಾನ ಗೆದ್ದು ಅಧಿಕಾರದ ಗದ್ದುಗೆ ಹಿಡಿಯಬಹುದೆಂಬ ನಿರೀಕ್ಷೆ ಹೊಂದಲಾಗಿತ್ತು . ಆದರೆ ನಿರೀಕ್ಷಿತ ಸ್ಥಾನ ಗಳಿಸುವಲ್ಲಿ ಬಂಟ್ವಾಳದ ಬಿಜೆಪಿ ನಾಯಕತ್ವ ಎಡವಿ ಮುಖಭಂಗ ಅನುಭವಿಸಿದೆ.
ಇನ್ನೊಂದೆಡೆ ಕಾಂಗ್ರೆಸ್ ಗೂ ಈ ಫಲಿತಾಂಶ ಭಾರೀ ಮುಖಭಂಗ ಎಂದೇ ಹೇಳಲಾಗುತ್ತಿದೆ. ಈ ಬಾರಿ ಇಲ್ಲಿ ಮತ್ತೊಮ್ಮೆ ಸ್ಪಷ್ಟ ಬಹುಮತ ಪಡೆಯಬೇಕೆಂದು ಮಾಜಿ ಸಚಿವ ರಮಾನಾಥ್ ರೈ ತಂತ್ರ ರೂಪಿಸಿ ಅಖಾಡಕ್ಕೆ ಇಳಿದಿದ್ದು, ಎಲ್ಲೆಡೆ ಭಾರಿ ಪ್ರಚಾರ ನಡೆಸಿದ್ದರು.
ಆದರೆ ಬಂಟ್ವಾಳದಲ್ಲಿ ಸ್ಪಷ್ಟ ಬಹುಮತ ಪಡೆಯುವಲ್ಲಿ ಕಾಂಗ್ರೆಸ್ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ಇಲ್ಲಿ ಅಧಿಕಾರದ ಗದ್ದುಗೆ ಹಿಡಿಯಬೇಕಾದರೆ ಕಾಂಗ್ರೆಸ್ ಗೆ ಎಸ್ ಡಿಪಿಐ ನೊಂದಿಗೆ ಮೈತ್ರಿ ಅನಿವಾರ್ಯ.
ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್ ಗೆ ಹೀನಾಯ ಪರಿಸ್ಥಿತಿ: ಖಾದರ್ ನೀಡಿದ ಕಾರಣವೇನು?
ಕಾಂಗ್ರೆಸ್ ಗೆ ಈ ಅವಕಾಶವಿಲ್ಲ
ಮಾಜಿ ಸಚಿವ ಹಾಗೂ ಕಾಂಗ್ರೆಸ್ ನಾಯಕ ರಮಾನಾಥ ರೈ ಎಸ್ ಡಿಪಿಐ ನೊಂದಿಗೆ ಮೈತ್ರಿ ಮಾಡಿಕೊಳ್ಳುವ ನಿಟ್ಟಿನಲ್ಲಿ ಹಿಂದೇಟು ಹಾಕಿದ್ದಾರೆ. ಈ ಮೂಲಕ ರಾಜಕೀಯ ವಿಶ್ಲೇಷಕರನ್ನೇ ಚಕಿತಗೊಳಿಸಿದ್ದಾರೆ. ಮತೀಯ ಶಕ್ತಿಗಳ ಜೊತೆ ಕೈ ಜೋಡಿಸುವುದಿಲ್ಲ. ಅಧಿಕಾರಕ್ಕಾಗಿ ಯಾವುದೇ ಮತೀಯ ಪಕ್ಷದ ಓಲೈಕೆ ಮಾಡುವುದಿಲ್ಲ.
ಅನಿವಾರ್ಯವಾದರೆ ಪ್ರತಿಪಕ್ಷದಲ್ಲಿ ಕೂರುತ್ತೆವೆಯೇ ಹೊರತು ಅಧಿಕಾರಕ್ಕಾಗಿ ಎಸ್ಡಿಪಿಐ ಸಹಾಯ ಪಡೆಯುವುದಿಲ್ಲ ಎಂದಿದ್ದಾರೆ. ಮತೀಯ ಪಕ್ಷ ಎಂದೇ ಪರಿಗಣಿಸಲಾಗುವ ಎಸ್ ಡಿಪಿಐ ನೊಂದಿಗೆ ಉಳ್ಳಾಲ ನಗರ ಸಭೆಯಲ್ಲಿ ಅಂತರ ಕಾಯ್ದುಕೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಕೂಡ ಹೇಳಿಕೆ ನೀಡಿದ್ದಾರೆ.
ಆದರೆ ಉಳ್ಳಾಲದಲ್ಲಿ ಜೆಡಿಎಸ್ ನೊಂದಿಗೆ ಮೈತ್ರಿಗೆ ಅವಕಾಶವಿದೆ. ಈ ಹಿನ್ನೆಲೆಯಲ್ಲಿ ಖಾದರ್ ಎಸ್ ಡಿಪಿಐನೊಂದಿಗೆ ಅಂತರ ಕಾಯ್ದುಕೊಂಡಿರಬಹುದು ಎಂದು ಅಂದಾಜಿಸಲಾಗಿದೆ. ಆದರೆ ಬಂಟ್ವಾಳದಲ್ಲಿ ಕಾಂಗ್ರೆಸ್ ಗೆ ಅಂತಹ ಅವಕಾಶವೇ ಇಲ್ಲ.
ಪುತ್ತೂರು ನಗರಸಭೆ ಬಿಜೆಪಿ ತೆಕ್ಕೆಗೆ, ಖಾತೆ ತೆರೆದ ಎಸ್ ಡಿಪಿಐ
ರಮಾನಾಥ್ ರೈ ಸೋಲಿಗೆ ಪ್ರಮುಖ ಕಾರಣ
ಬಂಟ್ವಾಳದ ಪುರಸಭೆಯ ಅಧಿಕಾರ ಹಿಡಿಯಬೇಕಾದರೆ ಕಾಂಗ್ರೆಸ್ ಗೆ ಒಂದೋ ಎಸ್ ಡಿಪಿಐನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕು ಅಥವಾ ಆಪರೇಷನ್ ಕೈ ಆರಂಭಿಸಬೇಕು. ಆದರೆ ಒಟ್ಟಿನಲ್ಲಿ ಬಂಟ್ವಾಳ ಕಾಂಗ್ರೆಸ್ನಲ್ಲಿ ರಮಾನಾಥ್ ರೈ ಅವರ ನಿಲುವು ತಳಮಳಕ್ಕೆ ಕಾರಣವಾಗಿದೆ.
ವಿಧಾನಸಭಾ ಚುನಾವಣೆಯಲ್ಲಿ ಸೋಲನುಭವಿಸಿದ್ದರೂ ಮುಂಬರುವ ಲೋಕಸಭೆಯ ಚುನಾವಣೆಗೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಹೊಸ ಇನ್ನಿಂಗ್ಸ್ ಆರಂಭಿಸುವ ಇರಾದೆಯಲ್ಲಿ ರಮಾನಾಥ್ ರೈ ಇದ್ದಾರೆ.
ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಬಂಟ್ವಾಳ ಕ್ಷೇತ್ರದಲ್ಲಿ ಎಸ್ ಡಿಪಿಐ ಕಾಂಗ್ರೆಸ್ ಗೆ ಬಹಿರಂಗವಾಗಿ ಬೆಂಬಲಿಸಿ ತನ್ನ ಅಭ್ಯರ್ಥಿಯನ್ನು ಕಣದಿಂದ ಹಿಂದೆ ಸರಿಸಿತ್ತು. ಆದರೆ ಎಸ್ ಡಿಪಿಐ ಪಕ್ಷದ ಈ ಬಹಿರಂಗ ಬೆಂಬಲ ರಮಾನಾಥ್ ರೈ ಅವರ ಸೋಲಿಗೆ ಪ್ರಮುಖ ಕಾರಣ ಎಂದು ಹೇಳಲಾಗಿದೆ.
ಜಿಲ್ಲೆಯಲ್ಲಿ ಬಿಜೆಪಿ 7 ವಿಧಾನ ಸಭಾ ಕ್ಷೇತ್ರಗಳನ್ನು ಗೆಲ್ಲಲು ಕಾಂಗ್ರೆಸ್ ಎಸ್ ಡಿಪಿಐ ನ ಬೆಂಬಲ ಪಡೆದಿದ್ದೇ ಕಾರಣ ಎಂದು ವಿಮರ್ಶಿಸಲಾಗಿತ್ತು.
ಎಸ್ ಡಿಪಿಐ ಬೆಂಬಲ ಬೇಕೇ ಬೇಕು
ಈ ಹಿನ್ನೆಲೆಯಲ್ಲಿ ಲೋಕ ಸಭಾ ಇನ್ನಿಂಗ್ಸ್ ಅರಂಭಿಸುವ ಉತ್ಸಾಹದಲ್ಲಿರುವ ರಮಾನಾಥ್ ರೈ ಮತ್ತೊಮ್ಮೆ ಎಸ್ ಡಿಪಿಐ ರಿಸ್ಕ್ ತೆಗೆದುಕೊಳ್ಳಲು ಮುಂದಾಗುತ್ತಿಲ್ಲ. ಕಾಂಗ್ರೆಸ್ ಲೋಕಸಭೆಗೆ ಸ್ಪರ್ಧಿಸಲು ಟಿಕೆಟ್ ನೀಡಿದಲ್ಲಿ ಎಸ್ ಡಿಪಿಐ ಬೆಂಬಲ ಚುನಾವಣೆ ಸಂದರ್ಭದಲ್ಲಿ ತೊಡಕಾಗಲಿದೆ ಎಂಬ ಚಿಂತನೆಯಲ್ಲಿ ರೈ ಇದ್ದಾರೆ ಎಂದು ಹೇಳಲಾಗುತ್ತಿದೆ.
ಈಗ ಬಂಟ್ವಾಳದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಏರಬೇಕಾದರೆ ಎಸ್ ಡಿಪಿಐ ಬೆಂಬಲ ಬೇಕೇ ಬೇಕು. ಈ ಹಿನ್ನಲೆಯಲ್ಲಿ ಬಂಟ್ವಾಳದಲ್ಲಿ ಕಾಂಗ್ರೆಸ್ ನಡೆ ಕುತೂಹಲ ಮೂಡಿಸಿದೆ.