ಕಾವ್ಯಳ ಸಾವಿನ ತನಿಖೆ ಸೂಕ್ತವಾಗಿ ನಡೆಸುತ್ತಿಲ್ಲವೆಂದು ಕಣ್ಣೀರಿಟ್ಟ ತಾಯಿ
ಮಂಗಳೂರು, ಆಗಸ್ಟ್ 07 : "ಯಾಕೆ ಮೋಹನ್ ಆಳ್ವಾ ಅವರು ತನ್ನ ಮಗಳ ಸಾವನ್ನು ಮುಚ್ಚಿ ಹಾಕುತ್ತಿದ್ದಾರೆ? ಯಾರೂ ಕೂಡ ತಮ್ಮ ಮಕ್ಕಳನ್ನು ಆಳ್ವಾಸ್ ಹಾಸ್ಟೆಲ್ ಗೆ ಕಳುಹಿಸಬೇಡಿ. ನನಗೆ ನ್ಯಾಯ ಕೊಡಿಸಿ" ಹೀಗೆ ಬಿಕ್ಕಿ ಬಿಕ್ಕಿ ಅತ್ತದ್ದು ನಿಗೂಢವಾಗಿ ಮೃತಪಟ್ಟ ಆಳ್ವಾಸ್ ವಿದ್ಯಾರ್ಥಿನಿ ಕಾವ್ಯ ಅವರ ತಾಯಿ ಬೇಬಿ ಪೂಜಾರಿ.
ಕಾವ್ಯಳಿಗೆ ಲೈಂಗಿಕ ಕಿರುಕುಳ ನೀಡಿ ಕೊಲೆ, ಬೇಬಿ ಪೂಜಾರಿ ಆರೋಪ
ಮಂಗಳೂರಿನಲ್ಲಿ ಸೋಮವಾರ ಜಸ್ಟೀಸ್ ಫಾರ್ ಕಾವ್ಯ ಹೋರಾಟ ಸಮಿತಿ ಆಯೋಜಿಸಿದ್ದ ಮಾಧ್ಯಮಗೋಷ್ಠಿಯಲ್ಲಿ ಬೇಬಿ ಪೂಜಾರಿ ಅವರು ಮೃತ ಮಗಳನ್ನು ನೆನೆದು ಏಕಾಏಕಿ ಭಾವುಕರಾದರು.
"ತನ್ನ ಮಗಳ ಸಾವಿನ ತನಿಖೆಯನ್ನು ಪೊಲೀಸ್ ಇಲಾಖೆ ಸೂಕ್ತ ರೀತಿಯಲ್ಲಿ ನಡೆಸುತ್ತಿಲ್ಲ ಎಂದು ಆರೋಪಿಸಿದರು .ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಮೋಹನ್ ಆಳ್ವಾ ,ದೈಹಿಕ ಶಿಕ್ಷಕ ಪ್ರವೀಣ್ ಹಾಗೂ ಮೂಡುಬಿದಿರೆಯ ಪೊಲೀಸ್ ಅಧಿಕಾರಿಗಳನ್ನು ತನಿಖೆಗೆ ಒಳಪಡಿಸಬೇಕೆಂದು" ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಸ್ಟೀಸ್ ಫಾರ್ ಕಾವ್ಯ ಹೋರಾಟ ಸಮಿತಿಯ ದಿನಕರ ಶೆಟ್ಟಿ, 'ಕಾವ್ಯ ಪ್ರಕರಣದ ಪಾರದರ್ಶಕ ತನಿಖೆ ಹಾಗೂ ಕಾವ್ಯಾಳ ಕುಟುಂಬಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಇದೇ ಬರುವ ಆಗಸ್ಟ್ 8 ರಂದು ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಸಭೆ ಆಯೋಜಿಸಿರುವುದಾಗಿ ಹೇಳಿದರು .