ಕರಾವಳಿಯಲ್ಲಿ ಐಸಿಸ್; ಬೆಚ್ಚಿ ಬೀಳಿಸಿದ ಆಡಿಯೋದ ಅಸಲಿಯತ್ತು ಇದು
ಮಂಗಳೂರು, ಅಕ್ಟೋಬರ್ 5: ದಕ್ಷಿಣ ಕನ್ನಡ ಜಿಲ್ಲೆಗೂ ಕಾಲಿಟ್ಟ ಐಸಿಸ್.. ಕರಾವಳಿ ಜಿಲ್ಲೆಗಳಲ್ಲಿ ಐಸಿಸ್ ತರಬೇತಿ.. ಹೀಗೆ ತರಹೇವಾರಿ ತಲೆ ಬರಹಗಳು ಬುಧವಾರ ಸದ್ದು ಮಾಡಿದ್ದವು. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಆಡಿಯೋ ತುಣುಕೊಂದು ಇಂಥಹದ್ದೊಂದು ಸುದ್ದಿ ಹುಟ್ಟಲು ಕಾರಣವಾಗಿತ್ತು.
ಆದರೆ, ಇದು ಸತ್ಯವಲ್ಲ ಎಂದು ಸ್ವತಃ ಆಡಿಯೋದಲ್ಲಿ ಮಾತನಾಡಿದ್ದ ಸಲಾಫಿ ಮುಖಂಡರಾದ ಇಸ್ಮಾಯಿಲ್ ಶಾಫಿ 'ಒನ್ಇಂಡಿಯಾ ಕನ್ನಡ'ಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಆಡಿಯೋ ಹಿಂದಿನ ಕಥೆ ಇದು
ಕೊಲ್ಲಿ ರಾಷ್ಟ್ರಗಳಲ್ಲಿ ಸಕ್ರಿಯವಾಗಿರುವ ತೀವ್ರವಾದಿ ಇಸ್ಲಾಮಿಕ್ ಸಿದ್ಧಾಂತ ರಾಜ್ಯದ ಕರಾವಳಿಗೂ ಕಾಲಿಟ್ಟಿದೆ. ಈ ಬಗ್ಗೆ ಎಚ್ಚರಿಕೆಯ ಸಂದೇಶವೊಂದನ್ನು ಸಲಾಫಿ ಮುಖಂಡರಾದ ಇಸ್ಮಾಯಿಲ್ ಶಾಫಿ ಅವರ ಧ್ವನಿ ಸಂದೇಶದಲ್ಲಿ ನೀಡಿದ್ದರು.
ಬ್ಯಾರಿ ಭಾಷೆಯಲ್ಲಿರುವ ಈ ಆಡಿಯೋದಲ್ಲಿ ಇಸ್ಮಾಯಿಲ್ ಶಾಫಿಯವರು, "ಸಲಫಿ ದಮ್ಮಾಜ್ ಎಂಬ ತೀವ್ರವಾದಿ ಸಿದ್ಧಾಂತದಿಂದ ಪ್ರಭಾವಿತರಾಗಿ ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ಸುತ್ತ ಮುತ್ತಯುವಕರ ಗುಂಪೂಂದು ಕಾರ್ಯಾಚರಣೆ ನಡೆಸುತ್ತಿದೆ. ಈ ವಿದ್ಯಾರ್ಥಿಗಳ ಗುಂಪು ಬ್ರೈನ್ ವಾಶ್ ಮಾಡುತ್ತಿದೆ. ಐಸಿಸ್ ಮಾದರಿಯಲ್ಲೇ ವಸ್ತ್ರ ಧರಿಸುವ ಇವರು ಕಪ್ಪು ಅಥವಾ ಕಂದು ಬಣ್ಣದ ಪೈಜಾಮ್ ಧರಿಸುತ್ತಾರೆ. ತಲೆಗೆ ಮುಂಡಾಸು ಅಥವಾ ಟೋಪಿ ತೊಡುತ್ತಾರೆ. ಜಿಲ್ಲೆಯ ಬಿ.ಸಿ.ರೋಡ್, ಕಲ್ಲಡ್ಕ, ಮಾರಿಪಳ್ಳ, ಉಳ್ಳಾಲದಲ್ಲಿ ಈ ಯುವಕರ ಗುಂಪು ಇದೆ," ಎಂದು ಹೇಳಿದ್ದಾರೆ.
"ಈ ಕಟ್ಟರ್ ಯುವಕರ ಗುಂಪು, ಮಹಿಳೆಯರು ಇಡೀ ದೇಹವನ್ನು ಸಂಪೂರ್ಣ ಮುಚ್ಚುವಂತ ವಸ್ತ್ರ ಧರಿಸಲು ತಾಕಿತ್ತು ಮಾಡುತ್ತಿದ್ದಾರೆ. ಮಹಿಳೆಯರು ಮನೆಯಲ್ಲಿ ಗಂಡನ ಹೊರತು ಯಾರ ಜೊತೆಗೂ ಮಾತನಾಡದಂತೆ ಗೃಹಬಂಧನ ವಿಧಿಸುತ್ತಾರೆ.ಇವರ ಪ್ರಕಾರ ಮುಸ್ಲಿಂ ಪುರುಷರು ಇತರ ಧರ್ಮದವರ ಜೊತೆ ಮಾತನಾಡುವುದು ತಪ್ಪು. ಹಿಂದೂಗಳ ಜೊತೆ ನಗುವುದು 'ಹರಾಮ್' ಎಂನ್ನುತ್ತಾರೆ," ಎಂದುದಾಗಿ ಇಸ್ಮಾಯಿಲ್ ಶಾಫಿ ಸಂದೇಶದಲ್ಲಿ ಹೇಳಿದ್ದಾರೆ.
"ಈ ಗುಂಪಿನ ಸದಸ್ಯರು ಕೇರಳದಲ್ಲಿ ಬಂಧನಕ್ಕೂ ಒಳಾಗಾಗಿದ್ದರು. ಈ ಗುಂಪೂಂದರ ಮಸೀದಿ ದಕ್ಷಿಣ ಕನ್ನಡ ಜಿಲ್ಲೆಯ ಬಿ.ಸಿ.ರೋಡಿನಲ್ಲಿದೆ. ಅಲ್ಲಿ ಇವರು ಗುಪ್ತವಾಗಿ ಕಾರ್ಯಚರಣೆ ಮಾಡುತ್ತಿದ್ದಾರೆ," ಎಂಬ ಮಾಹಿತಿಯನ್ನು ಅವರು ತಮ್ಮ ಆಡಿಯೋ ಸಂದೇಶದಲ್ಲಿ ನೀಡಿದ್ದರು.
ಆಡಿಯೋಗೆ ಟೆರರ್ ಲಿಂಕ್
ಮುಸ್ಲಿಂ ಯವಕರಲ್ಲಿ ಜಾಗೃತಿ ಮೂಡಿಸಲು ಸಲಫಿ ಮುಖಂಡ ಇಸ್ಮಾಯಿಲ್ ಶಾಫಿ ಈ ಸಂದೇಶ ನೀಡಿದ್ದರು. ಆದರೆ ಇದಕ್ಕೆ ಭಯೋತ್ಪಾದನೆಯ ಸಂಪರ್ಕ ಕಲ್ಪಿಸಲಾಗಿದೆ. ಒಂದು ವಾರದ ಹಿಂದೆ ಸಂದೇಶ ಕಳುಹಿಸಿ ಮುಸ್ಲಿಂ ತೀವ್ರವಾದ ಬಗ್ಗೆ ಜಾಗೃತಿ ವಹಿಸುವಂತೆ ಶಾಫಿ ಕರೆ ನೀಡಿದ್ದರು.
ಆದರೆ ಇಸ್ಮಾಯಿಲ್ ಶಾಫಿ ಧ್ವನಿ ಆಧಾರಿತ ಸಂದೇಶ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಕರಾವಳಿಗೆ ಐಸಿಸ್ ಲಿಂಕ್ ಇರೋದಾಗಿ ಸುದ್ದಿಯಾಗಿದೆ.
ಈ ಧ್ವನಿ ಸಂದೇಶ ದಿಂದ ಭಾರೀ ಅವಾಂತರ ಸೃಷ್ಠಿಯಾಗುತ್ತಿದ್ದಂತೆಯೇ ಇಸ್ಮಾಯಿಲ್ ತಮ್ಮ ಹೇಳಿಕೆಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. "ನಾನು ಜಾಗೃತಿಗಾಗಿ ಆಡಿಯೋ ಸಂದೇಶ ಕಳುಹಿಸಿದ್ದೆ. ಆದರೆ ಐಸಿಸ್ ಬಗ್ಗೆ ಯಾವುದನ್ನೂ ಅದರಲ್ಲಿ ಹೇಳಿಲ್ಲ. ಕೆಲವರು ಸಾಮಾಜಿಕ ಜಾಲತಾಣದಲ್ಲಿ ಸುಳ್ಳನ್ನು ಸೃಷ್ಠಿಸಿ ದೊಡ್ಡ ವಿವಾದವಾಗುವಂತೆ ಮಾಡಿದ್ದಾರೆ " ಎಂದು ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಪ್ರಜಾವಾಣಿಗೆ ಪ್ರತಿಕ್ರಿಯೆ ನೀಡಿರುವ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ಕುಮಾರ್ ರೆಡ್ಡಿ, "ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಆಡಿಯೋ ತುಣುಕನ್ನು ಪರಿಶೀಲಿಸಲಾಗುತ್ತಿದೆ. ಅದರಲ್ಲಿ ಇರುವ ಮಾಹಿತಿಯನ್ನು ಅನುವಾದ ಮಾಡಿದ ನಂತರವಷ್ಟೇ ವಿಷಯ ಸ್ಪಷ್ಟವಾಗಲಿದೆ. ಈ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ. ಈಗಲೇ ಏನನ್ನೂ ಹೇಳುವುದು ಸಾಧ್ಯವಿಲ್ಲ," ಎಂದು ಹೇಳಿದ್ದಾರೆ.