ಜೋಡುಪಾಳ, ಮದೆನಾಡು ದುರಂತದ ಮುನ್ಸೂಚನೆ ನೀಡಿದ್ದವೆ ಕಾಡುಪ್ರಾಣಿಗಳು?
Recommended Video
ಮಂಗಳೂರು, ಆಗಸ್ಟ್ 20 : ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗ ಸಂಪಾಜೆ ಬಳಿಯ ಕೊಡಗಿನ ಜೋಡುಪಾಳದಲ್ಲಿ ಮತ್ತಷ್ಟು ಕಡೆ ಬೆಟ್ಟ ಕುಸಿಯುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಾಚರಣೆಗೆ ತೊಡಕುಂಟಾಗಿದೆ. ಜೋಡುಪಾಳದ ಪ್ರದೇಶದಲ್ಲಿ ಮತ್ತಷ್ಟು ಭೂಕುಸಿತ ಉಂಟಾಗುವ ಆತಂಕ ಎದುರಾಗಿದ್ದು, ಸಂಪಾಜೆಯಿಂದ ಆಚೆಗೆ ಸಾರ್ಜನಿಕರ ಪ್ರವೇಶ ನಿಷೇಧಿಸಲಾಗಿದೆ.
ಬೆಟ್ಟದ ಮೇಲಿಂದ ಹರಿದು ಬರುತ್ತಿರುವ ಧಾರಾಕಾರ ಮಳೆ ನೀರಿನಿಂದಾಗಿ ಮಡಿಕೇರಿ - ಮಂಗಳೂರು ಹೆದ್ದಾರಿ ಸಂಪೂರ್ಣ ನೀರು ಪಾಲಾಗಿದೆ. ಜೋಡುಪಾಳ, ಮದೆನಾಡು, ದೇವರಕೊಲ್ಲಿ ಪರಿಸರ ಸಂಪೂರ್ಣ ನಾಶವಾಗಿದೆ. ಮನೆ- ಮಠ, ಅಡಿಕೆ ತೋಟ ಸಂಪೂರ್ಣ ನಾಶವಾಗಿವೆ.
ಕೇರಳ, ಕರ್ನಾಟಕದ ಪ್ರವಾಹದ ನೈಜ ಕಾರಣ ಬಹಿರಂಗ
ಹೆದ್ದಾರಿ ಬಂದ್ ಆದ ಕಾರಣ ಸಂತ್ರಸ್ತರ ಹುಡುಕಾಟಕ್ಕೆ ತೊಡಕಾಗಿದೆ. ಈ ಮಧ್ಯೆ ಗುಡ್ಡ ಕುಸಿಯುವ ಭೀತಿ ಇರುವ ಕಾರಣ ಹುಡುಕಾಟಕ್ಕೆ ತೆರಳುತ್ತಿರುವ ಸ್ವಯಂಸೇವಕರನ್ನು ಎನ್ ಡಿಆರ್ ಎಫ್ ತಂಡ ತಡೆದು, ಹಿಂದಕ್ಕೆ ಕಳುಹಿಸಿದೆ. ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ ಎನ್ ಡಿಆರ್ ಎಫ್ ತಂಡವು ಅಂದಾಜು ಮಾಡಿರುವ ಪ್ರಕಾರ ಮತ್ತಷ್ಟು ಭಾಗದಲ್ಲಿ ಭೂ ಕುಸಿತ ಆಗುವ ಸಾಧ್ಯತೆಗಳಿವೆ.
2 ವರ್ಷಗಳ ಹಿಂದೆ ಭೂಮಿಯಲ್ಲಿ ಬಿರುಕು
ಈಗ ಭಾರೀ ಭೂ ಕುಸಿತ ಸಂಭವಿಸಿರುವ ಜೋಡುಪಾಳು, ಮದನಾಡು ಪ್ರದೇಶದಲ್ಲಿ 2 ವರ್ಷಗಳ ಹಿಂದೆ ಭೂಮಿಯಲ್ಲಿ ಬಿರುಕು ಕಂಡುಬಂದಿತ್ತು. ಶಿಶಿರ ಎಂಬುವವರ ತೋಟದದಿಂದ ಬೆಟ್ಟದ ಉದ್ದಕ್ಕೂ ಭೂಮಿ ಬಿರುಕು ಬಿಟ್ಟಿತ್ತು. ಇತ್ತೀಚೆಗೆ ಈ ಬಿರುಕು ಹೆಚ್ಚಾಗುತ್ತಾ ಹೋಗಿತ್ತು ಎಂದು ಪ್ರತ್ಯಕ್ಷದರ್ಶಿ ಶಿಶಿರ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆಯೇ ಭೂಮಿ ಕುಸಿಯುವ ಮುನ್ಸೂಚನೆ ನೀಡಿತ್ತೇ ಎನ್ನುವ ಪ್ರಶ್ನೆ ಮೂಡುತ್ತಿದೆ.
ಕಾಡಾನೆಗಳ ಭಾರೀ ಚಟುವಟಿಕೆ
ಭೂ ಕುಸಿತ ಸಂಭವಿಸುವ ರಾತ್ರಿ ಕಾಡು ಪ್ರಾಣಿಗಳೂ ದುರಂತ ಸಂಭವಿಸುವ ಮುನ್ಸೂಚನೆ ನೀಡಿದ್ದವು ಎಂದು ಸ್ಥಳೀಯರು ಈಗ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಮದನಾಡು ಹಾಗೂ ಜೋಡುಪಾಳ ಪರಿಸರದಲ್ಲಿ ಆಗಸ್ಟ್ 16 ಹಾಗು 17ರಂದು ಕಾಡಾನೆಗಳ ಭಾರೀ ಚಟುವಟಿಕೆ ಕಂಡುಬಂದಿತ್ತು. ರಾತ್ರಿ ಎಲ್ಲಾ ಈ ಕಾಡಾನೆಗಳು ಘೀಳಿಟ್ಟಿದ್ದವು. ಭೂ ಕುಸಿತ ಸಂಭವಿಸುವ ಕೆಲ ಗಂಟೆಗಳ ಮೊದಲು ಆನೆಗಳು ಘೀಳಿಟ್ಟು ಓಡಿಹೋಗಿದ್ದವು.
ಕೊಡಗಿನಲ್ಲಿ ಅಂದು ನಡೆದದ್ದು ಜಲಪ್ರಳಯದ ಮುನ್ಸೂಚನೆಯಾಗಿತ್ತಾ?
ಬೆಟ್ಟದ ಕಡೆ ಮುಖ ಮಾಡಿ ಬೊಗಳಿದ್ದ ನಾಯಿಗಳು
ಈ ಪರಿಸರದಲ್ಲಿ ನಾಯಿಗಳು ಬೆಟ್ಟದ ಕಡೆ ಮುಖ ಮಾಡಿ ಒಂದೇ ಸಮನೆ ಬೊಗಳಲು ಆರಂಬಿಸಿದ್ದವು. ಅದರೆ ಇವೆಲ್ಲ ಮಾಮೂಲು ಎಂಬಂತೆ ಇಲ್ಲಿನ ಸ್ಥಳೀಯರು ಮುನ್ಸೂಚನೆಯನ್ನು ಗ್ರಹಿಸಿಲ್ಲ. ಪ್ರಕೃತಿಯಲ್ಲಿ ಆಗುವ ಸೂಕ್ಷ್ಮ ಬದಲಾವಣೆ ಹಾಗೂ ಅಪಾಯದ ಮುನ್ಸೂಚನೆಯು ಪ್ರಾಣಿ-ಪಕ್ಷಿಗಳಿಗೆ ಸಿಗುತ್ತವೆ ಎಂಬುದು ನಂಬಿಕೆ. ಆ ಮಾತಿಗೆ ಇವು ಸಾಕ್ಷಿಯಂತೆ ಕಾಣುತ್ತಿವೆ ಎನ್ನುತ್ತಾರೆ ಸ್ಥಳೀಯರು.
ಮಲೆಕುಡಿಯರ ಮನೆ ಸಹಿತ, ಜಮೀನು ನಾಶವಾಗುವ ಸಾಧ್ಯತೆ
ಬೆಳ್ತಂಗಡಿ ತಾಲೂಕಿನ ಸವಣಾಲು ಗ್ರಾಮದ ಜನರಲ್ಲಿ ಆತಂಕ ಸೃಷ್ಠಿಯಾಗಿದೆ. ಇಲ್ಲಿಯ ಬಾಡಡ್ಕ ಮಲೆಕುಡಿಯರ ಸುಂದರ ಮನೆಯ ಹಿಂಬದಿ ಗುಡ್ಡ ಸುಮಾರು 1 ಕಿ.ಮೀ. ದೂರ ಬಿರುಕು ಬಿಟ್ಟಿದೆ. ಗುಡ್ಡ ಜರಿದರೆ ಮಲೆಕುಡಿಯರ ಮನೆ ಸಹಿತ ನೂರಾರು ಎಕರೆ ಕೃಷಿ ಜಮೀನು ಸಂಪೂರ್ಣ ನಾಶವಾಗುವ ಸಾಧ್ಯತೆಯಿದೆ.