ಮಂಗಳೂರು ಪ್ರಸಾದ್ ಶೆಟ್ಟಿ 'ಸ್ಟ್ರಾಂಗೆಸ್ಟ್ ಮ್ಯಾನ್ ಆಫ್ ಇಂಡಿಯಾ'
ವನದಲ್ಲಿ ಅಂದುಕೊಂಡಿದ್ದನ್ನು ಸಾಧಿಸಬೇಕು, ಗುರಿ ಸೇರಬೇಕು ಎನ್ನುವ ಛಲ ದೃಢವಾಗಿದ್ದರೆ ಯಾರಿಂದಲೂ ನಮ್ಮನ್ನು ತಡೆಯೋಕೆ ಸಾಧ್ಯವಿಲ್ಲ ಅನ್ನೋದಕ್ಕೆ ಒಂದು ಉತ್ತಮ ನಿದರ್ಶನ ಇಲ್ಲಿದೆ. ಛಲ ಬಿಡದ ತ್ರಿವಿಕ್ರಮನಂತೆ ಸತತ ಪ್ರಯತ್ನ ಮಾಡಿ ಎಲ್ಲರ ಹುಬ್ಬು ಮೇಲೇರುವಂತೆ ಮಾಡಿದ್ದಾರೆ ಈ ನವ ಯುವಕ.
ಸಖತ್ ಬಾಡಿ ಬಿಲ್ಡ್ ಮಾಡಿ ಸಲ್ಮಾನ್ ಖಾನ್ ರೀತಿ ಕಾಣಿಸುತ್ತಿರೋ ಇವರು ಮಂಗಳೂರಿನ ಇವರ ಹೆಸರು ಪ್ರಸಾದ್ ಶೆಟ್ಟಿ. ಅಂತರಾಷ್ಟ್ರೀಯ ಮಟ್ಟದ ಬಾಡಿಬಿಲ್ಡಿಂಗ್ ಮತ್ತು ಪವರ್ಲಿಫ್ಟಿಂಗ್ ನ ಸ್ಪರ್ಧೆಗಳಲ್ಲಿ ಭಾಗವಹಿಸಿ ಚಿನ್ನದ ಪದಕಗಳನ್ನು ಬಾಚಿಕೊಂಡಿರುವ ಇವರ ವಯಸ್ಸು 22.
ತಂದೆ ಚಂದ್ರಹಾಸ್ ಶೆಟ್ಟಿ ನಿತ್ಯ ಜಿಮ್ ಗೆ ಹೋಗೋದನ್ನು ನೋಡುತ್ತಿದ್ದ ಪ್ರಸಾದ್ ಗೆ ತಾನು ಕೂಡಾ ಜಿಮ್ ಗೆ ಹೋಗಬೇಕು, ಬಾಡಿ ಬಿಲ್ಡ್ ಮಾಡಬೇಕು ಎನ್ನುವ ವಯೋಸಹಜ ಆಸೆ ಮೊಳಕೆಯೊಡೆಯಿತು. ತಂದೆಯಿಂದ ಇದಕ್ಕೆ ಪ್ರೋತ್ಸಾಹವೂ ದೊರೆಯಿತು. 17ನೇ ವಯಸ್ಸಿನಲ್ಲೇ ಜಿಮ್ ಗೆ ಹೋಗಲು ಶುರು ಮಾಡಿದರು.[ಅಂದು ಉಪನ್ಯಾಸಕಿ, ಇಂದು ಸಾಹಿತ್ಯ ಪ್ರಸಾರಕಿ]
ಯುವಕರಿಗೆ ಪ್ರೋತ್ಸಾಹ, ಮಾರ್ಗದರ್ಶನ ನೀಡಿದರೆ ಉತ್ತಮ ಸಾಧನೆ ಮಾಡಲು ಸಾಧ್ಯ ಎನ್ನುವುದು ಪ್ರಸಾದ್ ಅವರ ದೃಢವಾದ ನಂಬಿಕೆ. ಹೀಗಾಗಿ ಯುವಕರಿಗೆ ಮಾರ್ಗದರ್ಶನ ಮಾಡುವುದಕ್ಕಾಗಿ ಮಂಗಳೂರಲ್ಲಿ ಶಾಲೆ ತೆರೆಯುವ ಪ್ರಯತ್ನದಲ್ಲಿ ಪ್ರಸಾದ್ ಈಗ ಬ್ಯುಸಿಯಾಗಿದ್ದಾರೆ.
ಪ್ರಸಾದ್ ಪಡೆದ ಪದಕಗಳೆಷ್ಟು?
ಪ್ರಸಾದ್ 2013ರಲ್ಲಿ ಜಪಾನಿನಲ್ಲಿ ನಡೆದ ಏಷಿಯಾ ಮಟ್ಟದ ಪವರ್ ಲಿಫ್ಟಿಂಗ್ ನಲ್ಲಿ ಭಾಗವಹಿಸಿ, ಚಿನ್ನದ ಪದಕ ಪಡೆದರು. ಮೊದಲ ಪ್ರಯತ್ನದಲ್ಲಿ 2014ರಲ್ಲಿ ಸ್ಟ್ರಾಂಗೆಸ್ಟ್ ಮ್ಯಾನ್ ಆಫ್ ಕರ್ನಾಟಕ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿ, ಉತ್ತಮ ಸಾಧನೆ ಮಾಡಿದರು. 2015ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯಲಿದ್ದ ಜಮ್ಮು ಕಾಶ್ಮೀರ್ ಓಪನ್ ನ್ಯಾಷನಲ್ ಜೂನಿಯರ್ ಚಾಂಪಿಯನ್ ಶಿಪ್ನಲ್ಲಿ ಭಾಗವಹಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದರು.
ಪ್ರಸಾದ್ ಗೆ ಎದುರಾದ ಆಘಾತ ಏನು?
ನವೆಂಬರ್ ತಿಂಗಳಲ್ಲಿ ಸತತ ಅಭ್ಯಾಸ ಮಾಡುತ್ತಿದ್ದ ವೇಳೆ ಪ್ರಸಾದ್ ಅವರಿಗೆ ದೊಡ್ಡ ಆಘಾತವೊಂದು ಕಾದಿತ್ತು. ಅಭ್ಯಾಸ ನಡೆಸುತ್ತಿದ್ದ ವೇಳೆ ಇವರ ಭುಜದ ಸ್ನಾಯುಗಳಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಇವರನ್ನು ಪರೀಕ್ಷಿಸಿದ ವೈದ್ಯರು, ಇನ್ನು ಮುಂದೆ ಯಾವುದೇ ಕಾರಣಕ್ಕೂ ಪವರ್ ಲಿಫ್ಟಿಂಗ್ ಮಾಡಬಾರದು. ಹಾಗೇನಾದರೂ ಮಾಡಿದರೆ ಮುಂದಕ್ಕೆ ಗಂಭೀರ ಸ್ವರೂಪದ ಪರಿಣಾಮಗಳನ್ನು ಎದುರಿಸಬೇಕಾದೀತು ಎಂದು ಅಭ್ಯಾಸ ನಡೆಸದಂತೆ ತಾಕೀತು ಮಾಡಿದ್ದರು. ಆದರೂ ಇವರ ಆತ್ಮವಿಶ್ವಾಸ, ಅಚಲವಾಗಿತ್ತು.
ಪ್ರಸಾದ್ ಸ್ಟ್ರಾಂಗೆಸ್ಟ್ ಮ್ಯಾನ್ ಆಫ್ ಇಂಡಿಯಾ
ತಮ್ಮ ಪ್ರಯತ್ನದಲ್ಲಿ ಗೆಲವು ಸಾಧಿಸಿದ ಪ್ರಸಾದ್, ಇದೇ ಜನವರಿ 3ರಿಂದ 7ರವರೆಗೆ ಜೆಮ್ಶೆಡ್ ಪುರದಲ್ಲಿ ನಡೆದ ಡೆಡ್ ಲಿಫ್ಟ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿದರು. ಎಲ್ಲರೂ ಆಶ್ಚರ್ಯಚಕಿತರಾಗಿ ನೋಡುತ್ತಿದ್ದಂತೆ ಒಟ್ಟು 260 ಕೆ.ಜಿ ತೂಕವನ್ನು ಲೀಲಾಜಾಲವಾಗಿ ಎತ್ತಿಯೇಬಿಟ್ಟರು. ಈ ಮೂಲಕ ಸ್ಟ್ರಾಂಗೆಸ್ಟ್ ಮ್ಯಾನ್ ಆಫ್ ಇಂಡಿಯಾ ಎನ್ನುವ ಗರಿಯನ್ನೂ ಮುಡಿಗೇರಿಸಿಕೊಂಡರು. ಹೀಗೆ ತನ್ನ ಗುರಿಗೆ ದೇಹವು ಸಹಕಾರ ನೀಡದಿದ್ದರೂ ಅಪರಿಮಿತ ಛಲದಿಂದ ಅಸಾಧ್ಯವಾದುದನ್ನು ಸಾಧಿಸಿ ತೋರಿಸಿದ್ದಾರೆ ಪ್ರಸಾದ್.
ಯುವಕರಿಗೆ ಪ್ರಸಾದ್ ಹೇಳುವುದೇನು?
ಜಂಕ್ ಫುಡ್ ಮನುಷ್ಯನ ಆರೋಗ್ಯಕ್ಕೆ ಹಾನಿಕರ. ಎಲ್ಲರೂ ಮನೆಯಲ್ಲಿ ಶುಚಿ ರುಚಿಯಾದ ಆಹಾರ ಸೇವಿಸಿದರೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎನ್ನುವುದು ಪ್ರಸಾದ್ ಅವರ ಅಭಿಪ್ರಾಯ. ಹೀಗಾಗಿ ತಮ್ಮ ಸಾಧನೆಗೆ ಮಾರಕವಾಗಬಾರದು ಎನ್ನುವ ಉದ್ದೇಶದಿಂದ ಜಂಕ್ ಫುಡ್ ಗಳನ್ನು ಅವಾಯ್ಡ್ ಮಾಡುತ್ತಿದ್ದಾರೆ. ತಮಗೆ ಬೇಕಾದ ಆಹಾರವನ್ನು ಮನೆಯಲ್ಲಿ ಸ್ವತಃ ತಾವೇ ತಯಾರಿಸುತ್ತಾರೆ. ಚಿಕನ್ ಸಾರನ್ನು ಕೂಡಾ ರುಚಿ ರುಚಿಯಾಗಿ ತಯಾರಿಸುತ್ತಾರೆ. ಉತ್ತಮ ಆರೋಗ್ಯ ಹೊಂದಿದ್ದರೆ ಏನು ಬೇಕಾದ್ರೂ ಸಾಧಿಸಬಹುದು. ಸೋ ಎಲ್ಲರೂ ಜಂಕ್ ಫುಡ್ ಅವಾಯ್ಡ್ ಮಾಡಿ, ಉತ್ತಮ ಆರೋಗ್ಯವನ್ನು ಹೊಂದಿ ಎನ್ನುವುದು ಎಲ್ಲಾ ಯುವಕರಿಗೂ ಇವರ ಕಿವಿಮಾತು.
ಪ್ರಸಾದ್ ಅವರ ಬೇಸರವೇನು?
ರಾಜ್ಯದಲ್ಲಿ ಕ್ರೀಡಾಳುಗಳಿಗೆ ಪ್ರೋತ್ಸಾಹ ದೊರಕುತ್ತಿಲ್ಲ, ಕ್ರೀಡಾ ಕ್ಷೇತ್ರದ ಪ್ರತಿಭೆಗಳನ್ನು ಯಾರು ಕೂಡಾ ಪ್ರೋತ್ಸಾಹಿಸುತ್ತಿಲ್ಲ. ತಾವು ರಾಷ್ಟ್ರೀಯ ಮಟ್ಟದ ಚಾಂಪಿಯನ್ ಶಿಪ್ನಲ್ಲಿ ಗೆದ್ದು ಬಂದಿದ್ದರೂ ತಮ್ಮನ್ನು ಸ್ವಾಗತಿಸಿ, ಸರ್ಕಾರದ ವತಿಯಿಂದ ಯಾವೊಬ್ಬ ಅಧಿಕಾರಿಯೂ ಗುರುತಿಸಿಲ್ಲ ಎನ್ನುವುದು ಇವರ ಬೇಸರದ ಮಾತು. ಜೊತೆಗೆ ಸ್ಪರ್ಧೆಗಳಲ್ಲಿ ಭಾಗವಹಿಸಲು ಸರ್ಕಾರವು ಕನಿಷ್ಠ ಪ್ರೋತ್ಸಾಹವನ್ನೂ ನೀಡುತ್ತಿಲ್ಲ ಎನ್ನುವುದು ನಿಜಕ್ಕೂ ಕ್ರೀಡಾಪಟುಗಳಲ್ಲಿ ಬೇಸರ ತರಿಸುವ ಸಂಗತಿ. ಎಲ್ಲಾ ಕ್ರೀಡಾಳುಗಳಿಗೆ ಕನಿಷ್ಠ ಪ್ರೋತ್ಸಾಹಧನವನ್ನು ನೀಡಿ, ಉತ್ತೇಜಿಸಿದರೆ ಜಿಲ್ಲೆಯಲ್ಲಿ ಸಾಕಷ್ಟು ಕ್ರೀಡಾಪಟುಗಳು ಹುಟ್ಟಿಬರುತ್ತಾರೆ ಎನ್ನುವುದು ಇವರ ಭರವಸೆ.
ಮಂಗಳೂರಲ್ಲೊಂದು ಜಿಮ್ ಶಾಲೆ?
ಸುಮಾರು 9 ಸಾವಿರ ಚದರಡಿ ವಿಸ್ತೀರ್ಣದ ಬೃಹತ್ ವ್ಯಾಯಾಮಶಾಲೆ ಸದ್ಯದಲ್ಲೇ ಮಂಗಳೂರಿನಲ್ಲಿ ಶುಭಾರಂಭಗೊಳ್ಳಲಿದೆ. ಈ ಮೂಲಕ ಪವರ್ಲಿಫ್ಟಿಂಗ್, ಬಾಡಿ ಬಿಲ್ಡಿಂಗ್ ಕ್ಷೇತ್ರದಲ್ಲಿ ಸಾಧನೆ ಮಾಡುವ ಮಂದಿಗೆ ಸುಸಜ್ಜಿತವಾಗಿ ತರಬೇತಿ ನೀಡುವುದು ಪ್ರಸಾದ್ ಮತ್ತವರ ತಂಡದ ಮಹತ್ತರ ಉದ್ದೇಶ. ಇವರ ಉದ್ದೇಶ ಸಫಲವಾಗಲಿ, ಸರ್ಕಾರ ಇನ್ನಾದರೂ ಉತ್ತಮ ಕ್ರೀಡಾಳುಗಳನ್ನು ಗುರುತಿಸಿ ಪ್ರೋತ್ಸಾಹಿಸಲಿ, ಈ ಮೂಲಕ ಉತ್ತಮ ಕ್ರೀಡಾಪಟುಗಳನ್ನು ರೂಪಿಸಲಿ ಎನ್ನುವುದು ನಮ್ಮ ಆಶಯ.