ಪ್ರವಾಹ ಸೃಷ್ಟಿಸಿದ್ದ ನೇತ್ರಾವತಿ, ಕುಮಾರಧಾರ ಈಗ ಬತ್ತಲು ಕಾರಣ ಇದೇನಾ!
ಮಂಗಳೂರು, ಸೆಪ್ಟೆಂಬರ್.16: ಈ ಬಾರಿ ಮುಂಗಾರು ಆರ್ಭಟಕ್ಕೆ ಉಕ್ಕಿ ಹರಿದ ದಕ್ಷಿಣ ಕನ್ನಡ ಜಿಲ್ಲೆಯ ನದಿಗಳು ಈಗ ಧಿಡೀರನೆ ಬತ್ತಲು ಶುರುವಾಗಿವೆ. ಭಾರೀ ಮಳೆಯಿಂದಾಗಿ ಇತ್ತೀಚೆಗೆ ರುದ್ರ ನರ್ತನ ತೋರಿಸಿದ್ದ ನದಿಗಳು ಬತ್ತಿ ಹೋಗುತ್ತಿವೆ.
ಹೌದು, ದಕ್ಷಿಣ ಕನ್ನಡ ಜಿಲ್ಲೆಯನ್ನು ಭಾಗಶಃ ಮುಳುಗಿಸಿದ್ದ ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳಲ್ಲಿ ಇಂದು ನೀರಿನ ಮಟ್ಟ ಒಂದೇ ಸಮನೆ ಕುಸಿಯುತ್ತಿದೆ.
ಬತ್ತುತ್ತಿವೆ ನದಿಗಳು, ಪ್ರವಾಹದ ಹೊಸ ಸಂಕಷ್ಟದಲ್ಲಿ ಕೇರಳ
ಭಾರೀ ಮಳೆಯಿಂದಾಗಿ ಉಕ್ಕಿಹರಿದು ಪ್ರವಾಹ ಪರಿಸ್ಥಿತಿ ಸೃಷ್ಠಿಸಿ ಭೀತಿ ಹುಟ್ಟಿಸಿದ್ದ ನದಿಗಳು ಇವೇನಾ? ಎನ್ನುವಷ್ಟರ ಮಟ್ಟಿಗೆ ನೀರಿನ ಪ್ರಮಾಣ ಕುಸಿತವಾಗಿದೆ. ಘಟ್ಟ ಪ್ರದೇಶ, ಗುಡ್ಡ ಗಾಡುಗಳಿಂದ ಒರತೆ ನೀರು ಭಾಗಶಃ ನಿಂತು ಹೋದ ಪರಿಣಾಮ ಎರಡೂ ನದಿಗಳ ಒಡಲು ಇದೀಗ ಬರಿದಾಗಲಾರಂಭಿಸಿದೆ.
ಕೇರಳದಲ್ಲಿ ಯಾವ ರೀತಿ ನದಿಗಳು ಹಾಗೂ ಅಂತರ್ಜಲ ಬತ್ತಿ ಹೋಗಿದೆಯೋ ಅಂಥಹುದೇ ಲಕ್ಷಣ ನೇತ್ರಾವತಿ ನದಿ ಪಾತ್ರದಲ್ಲಿಯೂ ಬೆಳಕಿಗೆ ಬಂದಿದೆ.
ಇತ್ತೀಚಿನ ದಿನಗಳಲ್ಲಿ ನದಿಪಾತ್ರದ ಮನೆಗೆ ನುಗ್ಗಿದ ಪ್ರವಾಹದ ನೀರು, ರಸ್ತೆ ಮೇಲೆ ಉಕ್ಕಿ ಹರಿದ ಪ್ರವಾಹದ ನೀರು ಎಂದು ಸುದ್ದಿಯಾಗುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ನದಿಗಳು ಇದೀಗ ಬರಿದಾಗಿ ಸುದ್ದಿಯಲ್ಲಿವೆ.
ಕೆ.ಆರ್.ಎಸ್. ನೀರು: ಕಾವೇರಿ ಪ್ರವಾಹಕ್ಕೆ ಮಂಡ್ಯದಲ್ಲೂ ಆತಂಕದ ಸ್ಥಿತಿ
ಪಶ್ಚಿಮ ಘಟ್ಟ ಹಾಗೂ ಕರಾವಳಿ ಭಾಗದಲ್ಲಿ ಸುರಿದ ಭಾರೀ ಮಳೆಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ನದಿಗಳಾದ ಕುಮಾರಧಾರ ಮತ್ತು ನೇತ್ರಾವತಿ ನದಿ ಅಪಾಯದ ಮಟ್ಟದಲ್ಲಿ ಹರಿದಿತ್ತು. ವಾರಗಟ್ಟಲೆ ನದಿಯಲ್ಲಿ ನೀರು ತಗ್ಗದೆ ನೂರಾರು ಕುಟುಂಬಗಳು ಸಂಕಷ್ಠ ಅನುಭವಿಸಿದ್ದವು.
ಸಹಸ್ರಲಿಂಗೇಶ್ವರದಲ್ಲಿ ನೇತ್ರಾವತಿ ಹಾಗು ಕುಮಾರಧಾರ ಸಂಗಮ: ಭಕ್ತರಿಂದ ಗಂಗಾಪೂಜೆ
ಆದರೆ ಅಂದು ಉಕ್ಕಿ ಹರಿದಿದ್ದ ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳಲ್ಲಿ ಈಗ ನೀರಿಲ್ಲ. ಇದು ಕಣ್ಣಿಗೆ ಗೋಚರಿಸುವ ಸತ್ಯ ಸಂಗತಿ. ಮಳೆಗಾಲ ಇನ್ನೂ ಮುಗಿಯದ ಈ ಸಮಯದಲ್ಲಿ ಈ ಎರಡೂ ನದಿಗಳಲ್ಲಿ ನೀರಿನ ಮಟ್ಟ ಈ ರೀತಿ ಇಳಿಮುಖವಾಗಿರುವುದು ಈ ಭಾಗದ ಜನರ ಆತಂಕಕ್ಕೂ ಕಾರಣವಾಗಿದೆ. ಯಾಕಿರಬಹುದು ಗೊತ್ತೇ...?!
ಮಳೆ ನೀರು ಎಲ್ಲಿ ಹೋಯಿತು ?
ಪ್ರಕೃತಿಯ ಮೇಲೆ ನಡೆದ ದೌರ್ಜನ್ಯದ ಫಲವೇನೋ ಎಂಬಂತೆ ಈ ಭಾರೀ ಧಾರಾಕಾರ ಮಳೆ ಸುರಿಯಿತು. ಭಾರೀ ಮಳೆಗೆ ಗುಡ್ಡಗಳೇ ಕುಸಿದವು. ಕೆಲವೆಡೆ ಜಲಸ್ಫೋಟದಿಂದ ಆಸ್ತಿಪಾಸ್ತಿ ಸೇರಿಂದತೆ ಪ್ರಾಣಹಾನಿಯೂ ಸಂಭವಿಸಿತು.
ಈಗ ಮಳೆ ನಿಂತಿದೆ. ಆದರೆ ನದಿಯಲ್ಲಿ ಪ್ರವಾಹವಾಗಿ ಹರಿದ ಮಳೆ ನೀರು ಎಲ್ಲಿ ಹೋಯಿತು ? ಎಂಬುದೇ ಜನರಿಗೆ ಯಕ್ಷ ಪ್ರಶ್ನೆಯಾಗಿ ಕಾಡತೊಡಗಿದೆ.
ಇದೇ ಕಾರಣವಂತೆ!
ಪ್ರವಾಹ ಸಂದರ್ಭದಲ್ಲಿ ಕೆಲವು ಕಡೆ ಭೂಮಿಯ ಮೇಲ್ಮೈ ಪದರ 2 ಮೀಟರ್ ನಷ್ಟು ಕೊಚ್ಚಿ ಹೋಗಿದ್ದು, ನೀರನ್ನು ಸ್ಪಂಜಿನಂತೆ ಹಿಡಿದಿಡುತ್ತಿದ್ದ ಜೈವಿಕ ಪ್ರಕ್ರಿಯೆಗೆ ಹೊಡೆತ ಬಿದ್ದಿರುವುದು ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
ಪಶ್ಚಿಮ ಘಟ್ಟ ಪ್ರದೇಶದಲ್ಲಿ ನದಿಗೆ ಹರಿದು ಬರುತ್ತಿದ್ದ ನೀರಿನ ಒರತೆಗಳು ಕಡಿಮೆಯಾಗಿದೆ. ಅಷ್ಟೇ ಅಲ್ಲ, ಪಶ್ಚಿಮ ಘಟ್ಟ ಪ್ರದೇಶದಲ್ಲಿ ಜಲಸ್ಫೋಟಗೊಂಡು ಸಂಗ್ರಹವಾಗುತ್ತಿದ್ದ ಅಂತರ್ಜಲ ಹರಿದು ಹೋಗಿದೆ. ಈ ಪರಿಣಾಮ ನದಿಗೆ ಹರಿದು ಬರುತ್ತಿದ್ದ ಒರತೆ ಕಂಡು ಬರುತ್ತಿಲ್ಲ.
ಕಳೆದ 10 ದಿನಗಳಿಂದ ಒಂದೇ ಸಮನೆ ಏರುತ್ತಿರುವ ಉಷ್ಣಾಂಶ, ಇವೆಲ್ಲ ನದಿಯಲ್ಲಿ ನೀರಿನ ಮಟ್ಟ ಕಡಿಮೆಯಾಗಲು ಕಾರಣ ಎಂದು ಹೇಳಲಾಗಿದೆ.
ಅಧ್ಯಯನಕ್ಕೆ ಮುಂದಾಗಲಿ
ಮಳೆಗಾಲ ಮುಗಿಯುವ ಮೊದಲೇ ಈಗ ನದಿಗಳಲ್ಲಿ ಈ ಪರಿಸ್ಥಿತಿ ಇದೆ. ಇನ್ನು ಬೇಸಿಗೆಯಲ್ಲಿ ಯಾವ ಪರಿಸ್ಥಿತಿ ಸೃಷ್ಠಿಯಾದೀತು ಎಂಬ ಚಿಂತನೆ ಜನರನ್ನು ಕಾಡತೊಡಗಿದೆ. ಈ ಹಿನ್ನಲೆಯಲ್ಲಿ ಸರಕಾರ ಕೂಡಲೇ ಅಧ್ಯಯನಕ್ಕೆ ಮುಂದಾಗಬೇಕಿದೆ.
ಕೇರಳದಲ್ಲೂ ಇದೇ ಪರಿಸ್ಥಿತಿ
ಪ್ರವಾಹದಿಂದ ತತ್ತರಿಸಿದ್ದ ಕೇರಳದಲ್ಲೂ ಇದೇ ಪರಿಸ್ಥಿತಿ ಸೃಷ್ಟಿಯಾಗಿದೆ. ಪರಿಯಾರ್ ,ಪಂಪಾ, ಕಬಿನಿ ಸೇರಿದಂತೆ ಅನೇಕೆ ನದಿಗಳು ನೀರಿಲ್ಲದೆ ಸೊರಗುತ್ತಿದೆ. ಈ ನದಿ ಪಾತ್ರದ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿದೆ.
ಕೊಳವೆ ಬಾವಿಗಳು ಒಣಗುತ್ತಿವೆ. ಈ ನೈಸರ್ಗಿಕ ವಿದ್ಯಮಾನಗಳಿಂದ ಕಂಗೆಟ್ಟಿರುವ ಕೇರಳ ಸರಕಾರ ವೈಜ್ಞಾನಿಕ ಅಧ್ಯಯನಕ್ಕೆ ಮುಂದಾಗಿದೆ.